ದೇಶದ ಗಡಿ ರಕ್ಷಣೆಯ ಹೊಣೆ ಸೈನಿಕರ ಮೇಲಿದ್ದರೆ, ಆಂತರಿಕ ರಕ್ಷಣೆಯ ಹೊಣೆ ಪೊಲೀಸರ ಮೇಲಿದೆ. ಸೈನಿಕರು, ಪೊಲೀಸರು ಒಂದು ನಾಣ್ಯದ ಎರಡು ಮುಖಗಳಿಂದಂತೆ. ಇಂದು ದೇಶದ ಜನರು ನೆಮ್ಮದಿಯ ನಿದ್ರೆ ಮಾಡುತ್ತಿದ್ದರೆ ಅದಕ್ಕೆ ಕಾರಣ ಪೊಲೀಸರು ಎಂದು ಜಿಲ್ಲಾಧಿಕಾರ ಗೋವಿಂದರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಮಂಗಲಪೇಟ್ ಬಳಿಯ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿ ಮಾತನಾಡಿದರು.
“ಪೊಲೀಸರು ಪ್ರಾಣವನ್ನು ಒತ್ತೆ ಇಟ್ಟು ದೇಶದ ನಾಗರಿಕ ರಕ್ಷಣೆ ಹಾಗೂ ದೇಶದ ಸುಭದ್ರತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂದು ದೇಶದಲ್ಲಿ ಶಾಂತಿ, ಉತ್ತಮ ಆಡಳಿತ, ಕಾನೂನು ಸುವ್ಯವಸ್ಥೆ ಸುವ್ಯವಸ್ಥಿತವಾಗಿ ನಡೆಯುತ್ತಿದ್ದರೆ ಅದಕ್ಕೆ ಪೊಲೀಸ್ ಇಲಾಖೆಯೆ ಕಾರಣವಾಗಿದೆ” ಎಂದು ಹೇಳಿದರು.
“ಇತ್ತೀಚಿಗೆ ನಮ್ಮ ರಾಜ್ಯದಲ್ಲಿ ಹೂಡಿಕೆದಾರರ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ಪರೋಕ್ಷವಾಗಿ ಪೊಲೀಸ್ ಇಲಾಖೆಯೇ ಕಾರಣವಾಗಿದೆ. ಕರ್ನಾಟಕ ಪ್ರಸ್ತುತ ಹೂಡಿಕೆ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ರಾಜ್ಯದಲ್ಲಿ ಹೂಡಿಕೆ ಮಾಡಬೇಕೆಂದರೆ ಅಲ್ಲಿನ ಕಾನೂನು ಸುವ್ಯವಸ್ಥೆಯನ್ನು ಮೊದಲು ಅರಿಯುತ್ತಾರೆ ನಂತರ ಹೂಡಿಕೆ ಮಾಡುತ್ತಾರೆ” ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, “1959ರ ಅಕ್ಟೋಬರ್ 21 ರಂದು ಭಾರತ-ಚೀನಾ ಗಡಿಭಾಗವಾದ ಲಡಾಕ್ ಪ್ರದೇಶದಲ್ಲಿ ಗಡಿ ರಕ್ಷಣೆಗಾಗಿ 20 ಸೈನಿಕರು ನಿಯೋಜನೆಗೊಂಡಿದ್ದರು, ಆ ವೇಳೆ ಚೀನಾ ದಾಳಿ ನಡೆಸಿತ್ತು, ಭಾರತದ ಸೈನಿಕರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇಲ್ಲದಿದ್ದರೂ ಚೀನಾ ಸೈನಿಕರ ವಿರುದ್ದ ಹೋರಾಡಿ ನಮ್ಮ ಹತ್ತು ಜನ ಪೊಲೀಸ್ ಯೋಧರು ವೀರ ಮರಣ ಹೊಂದಿದ್ದರು. ಅವರ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಈ ದಿನದಂದು ನಮ್ಮ ದೇಶದ ರಕ್ಷಣೆಗಾಗಿ ಮಡಿದ ಪೊಲೀಸರಿಗೆ ಗೌರವ ಸಲ್ಲಿಸಲಾಗುತ್ತದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೇಶದಲ್ಲಿ ಕಳೆದ ವರ್ಷ ಹುತ್ಮಾತ್ಮರಾದ 189 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೆಸರು ವಾಚಿಸಿ ಅವರಿಗೆ ನುಡಿ ನಮನ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ.ಎಂ., ಬೀದರ ವಾಯುಸೇನೆ ಗ್ರೂಪ್ ಕಮಾಂಡರ್ ರಿತೇಶ ಶರ್ಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೆಘಣ್ಣನವರ, ಬೀದರ ಉಪ ಪೊಲೀಸ್ ಅಧೀಕ್ಷಕ ಶಿವನಗೌಡ ಪಾಟೀಲ್, ಹುಮನಾಬಾದ್ ಉಪ ಪೊಲೀಸ್ ಅಧೀಕ್ಷಕ ಜೆ.ಎಸ್. ನ್ಯಾಮೆಗೌಡ, ಭಾಲ್ಕಿ ಉಪ ಪೊಲೀಸ್ ಅಧೀಕ್ಷಕ ಶಿವಾನಂದ ಪವಾಡಶೆಟ್ಟಿ, ಬೀದರ ಡಿ.ಆರ್. ಉಪ ಪೊಲೀಸ್ ಅಧೀಕ್ಷಕ ಸುನೀಲ್ ಕೋಡ್ಲಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಜಿಲ್ಲೆಯ ಗಣ್ಯರು ಉಪಸ್ಥಿತರಿದ್ದರು.