ಪ್ರತಿಯೊಬ್ಬರ ಮನೆಗಳಲ್ಲಿ ಹನುಮ ಧ್ವಜವನ್ನು ಹಾಕುವುದರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟಿಸಿಯೆಂದು ಜನರನ್ನು ಉಡುಪಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಪ್ರಚೋದಿಸುತ್ತಿದ್ದಾರೆ. ಇಂತಹ ಪ್ರಚೋದನಾಕಾರಿ ಕೆಲಸವನ್ನು ಬಿಟ್ಟು, ಕ್ಷೇತ್ರದ ಅಭಿವೃದ್ಧಿ ಕುರಿತು ಅವರು ಚಿಂತನೆ ನಡೆಸಲಿ ಎಂದು ಉಡುಪಿ ನಗರಸಭಾ ವಿಪಕ್ಷ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸಲಹೆ ನೀಡಿದ್ದಾರೆ.
ಬಿಜೆಪಿ ಶಾಸಕರ ಪ್ರಚೋದನಾಕಾರಿ ಹೇಳಿಕೆ ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ರಮೇಶ್, “ಯಾವುದಾದರೂ ರಾಜಕೀಯ ವಿಚಾರ ಮುನ್ನಲೆಗೆ ಬಂದ ಕೂಡಲೇ ಶಾಸಕರು ತಮ್ಮ ಪ್ರಚೋದನಾಕಾರಿ ಹೇಳಿಕೆಗಳ ಮೂಲಕ ಜನರನ್ನು ಉದ್ರೇಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ವರ್ತನೆ ಇದೇ ಮೊದಲಲ್ಲ. ಈ ಹಿಂದೆ ಹಿಜಾಬ್ ವಿಚಾರ, ಪ್ಯಾರಾಮೆಡಿಕಲ್ ಕಾಲೇಜಿನ ವೀಡಿಯೋ ಪ್ರಕರಣ, ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪವನೆ ವಿಚಾರಯೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ, ಜನರಲ್ಲಿ ಗೊಂದಲು ಸೃಷ್ಠಿಸಿದ್ದರು. ರಾಮಂದಿರ ಪ್ರತಿಷ್ಠಾಪನೆ ದಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಜೆ ಪಡೆದುಕೊಳ್ಳಿ ಎಂದಿದ್ದ ಶಾಸಕ, ಅಂದು ತಮ್ಮದೇ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಹಾಗೂ ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಷನ್ನ ಉದ್ಯೋಗಿಗಳಿಗೆ ರಜೆ ನೀಡಲಿಲ್ಲ” ಎಂದು ಕಿಡಿಕಾರಿದ್ದಾರೆ.
“ಮಂಡ್ಯದಲ್ಲಿ ನಡೆದ ಹನುಮ ಧ್ವಜ ತೆರವು ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಗರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ರಾಷ್ಟ್ರ ಧ್ವಜಕ್ಕೆ ಪರವಾನಗಿ ಪಡೆದು ಧ್ವಜಸ್ತಂಭ ನಿರ್ಮಿಸಿ ಬಳಿಕ ಅದರಲ್ಲಿ ಹನುಮ ಧ್ವಜ ಹಾರಿಸುವುದು ಕಾನೂನಿನ ಪ್ರಕಾರ ತಪ್ಪು ಎನ್ನುವ ಕನಿಷ್ಠ ಜ್ಞಾನ ಬಿಜೆಪಿಗರಿಗೆ ಇಲ್ಲದಿರುವುದು ನಾಚೀಕೆಗೇಡು. ಹನುಮ ಧ್ವಜವಾಗಲಿ, ಕೇಸರಿ ಧ್ವಜವಾಗಲಿ ಹಾರಿಸುವುದು ತಪ್ಪಲ್ಲ. ಆದರೆ ಅದಕ್ಕೆ ಪ್ರತ್ಯೇಕ ಧ್ವಜಸ್ತಂಭ ನಿರ್ಮಿಸಿ ಹಾರಿಸುವುದನ್ನು ಬಿಟ್ಟು ರಾಷ್ಟ್ರಧ್ವಜ ಹಾರಿಸುವ ಸ್ತಂಭದಲ್ಲಿ ಹಾರಿಸುವುದು ಸರಿಯಲ್ಲ” ಎಂದಿದ್ದಾರೆ.
“ಕಾಂಗ್ರೆಸ್ ಎಲ್ಲ ಧರ್ಮವನ್ನು ಸಮಾನವಾಗಿ ಕಾಣುವ ಪಕ್ಷ. ಹಿಂದು ಧರ್ಮದ ಮೇಲೆ ಕಾಂಗ್ರೆಸ್ಗೆ ಯಾವುದೇ ರೀತಿಯ ದ್ವೇಷವಿಲ್ಲ. ನಾವೂ ಕೂಡ ಈಶ್ವರ, ಕೃಷ್ಣ, ರಾಮ, ಸೀತೆ, ಹನುಮಂತ, ದುರ್ಗೆ ಸೇರಿದಂತೆ ಎಲ್ಲ ದೇವರನ್ನು ಆರಾಧಿಸುತ್ತೇವೆ. ಆದರೆ, ಯಾವತ್ತೂ ದೇವರನ್ನು ನಮ್ಮ ರಾಜಕೀಯಕ್ಕಾಗಿ ಉಪಯೋಗಿಸಿಲ್ಲ” ಎಂದರು.
“ರಾಜಕಾರಣದಲ್ಲಿ ಧರ್ಮ ಇರಬೇಕು ಹೊರತು, ಧರ್ಮದಲ್ಲಿ ಯಾವತ್ತೂ ರಾಜಕಾರಣವನ್ನು ಎಳೆದು ತರಬಾರದು. ರಾಜಕಾರಣಕ್ಕಾಗಿ ಯಾವತ್ತೂ ಧರ್ಮವನ್ನು ಉಪಯೋಗಿಸಬಾರದು. ಉಡುಪಿ ಜಿಲ್ಲೆಯಲ್ಲಿ ಐದು ಮಂದಿ ಬಿಜೆಪಿ ಶಾಸಕರಿದ್ದಾರೆ. ಉಡುಪಿಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿದೆ. ಅವುಗಳ ಬಗ್ಗೆ ಶಾಸಕರು ಚಿಂತಿಸಬೇಕು” ಎಂದು ಹೇಳಿದರು.