ಮಂಡ್ಯ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಾಗೃತ ಕರ್ನಾಟಕದ ಸಂಚಾಲಕರಾದ ನಾಗೇಶ್ ಮಾತನಾಡಿ ‘ ಜಾತಿ ಸಮೀಕ್ಷೆಗೆ ವಿರೋಧಿಸುವವರು ಹಿಂದುಳಿದ ಸಮುದಾಯಗಳ ವಿರೋಧಿಗಳು’ ಎಂದು ಹೇಳಿದರು.
“ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಸಮೀಕ್ಷೆ ಅಗತ್ಯ. ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಶೋಷಿತ ಸಮುದಾಯಗಳ, ಹಿಂದುಳಿದ ವರ್ಗಗಳ ಹಿತವಡಗಿದೆ. ಸಮೀಕ್ಷೆ ವಿರೋಧಿಸುವ ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ” ಎಂದು ಎಚ್ಚರಿಗೆ ನೀಡಿದರು.
“ಭಾರತದಲ್ಲಿ ಜಾತಿ ವ್ಯವಸ್ಥೆ ವಾಸ್ತವ. ಅದೇ ರೀತಿ ಕೆಲವೇ ಕೆಲವು ಜಾತಿಗಳು ಅಭಿವೃದ್ಧಿ ಹೊಂದಿರುವುದು ಮತ್ತು ಹಲವು ಜಾತಿಗಳು ಹಿಂದುಳಿದಿರುವುದು ಕೂಡ ವಾಸ್ತವವೇ. ಅದಕ್ಕಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಯಾವ ಜಾತಿಗಳು ಎಷ್ಟು ಹಿಂದುಳಿದಿವೆ?, ಎಷ್ಟು ಮುಂದುವರೆದಿವೆ?, ಎನ್ನುವುದನ್ನು ಕಾಲಕಾಲಕ್ಕೆ ಅಧ್ಯಯನ ಮಾಡಬೇಕು. ಅಂದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು.”
“ಸಮೀಕ್ಷೆ ಆಧಾರದ ಮೇಲೆ ಸರ್ಕಾರಗಳು ನೀತಿ-ನಿರೂಪಣೆ ರೂಪಿಸಬೇಕು. ಜೊತೆಗೆ ಸಾಮಾಜಿಕ ನ್ಯಾಯವನ್ನು ಜಾರಿ ಮಾಡಲು ಪ್ರಯತ್ನಿಸಬೇಕು. ಇದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ (ಮಂಡಲ್ ಕೇಸಿನಲ್ಲಿ) ಎಲ್ಲಾ ರಾಜ್ಯಗಳು ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಬೇಕು ಎಂದು ಹೇಳಿದೆ. ಆನಂತರ ಬಂದ ಕಾಯ್ದೆಗಳು, ಈ ಆಯೋಗಗಳು 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ಹೇಳಿರುವುದು. ಇದರಿಂದಾಗಿ, ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯು ನ್ಯಾಯಯುತವಾದುದಾಗಿದೆ.” ಎಂದು ತಿಳಿಸಿದರು.
“ಯಾರೂ ಕೂಡ ಜಾತಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಬಾರದು. ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸುತ್ತದೆಯಾದರೂ, ಅದು ಹಿಂದುಳಿದ ಜಾತಿಗಳನ್ನು ಮಾತ್ರ ಸಮೀಕ್ಷೆಗೆ ಒಳಪಡಿಸುವುದಿಲ್ಲ. ರಾಜ್ಯದ ಎಲ್ಲಾ ಜಾತಿಗಳನ್ನು ಅಧ್ಯಯನ ನಡೆಸುತ್ತದೆ. ಅದುದರಿಂದಾಗಿ, ಈ ಸಮೀಕ್ಷೆಯಲ್ಲಿ ಸರ್ವ ಸಮುದಾಯಗಳ ಹಿತ ಅಡಗಿದೆ. ಹಿಂದುಳಿದಿರುವ ಜಾತಿಗಳನ್ನು ಗುರುತಿಸಿ ಅವುಗಳ ಬೆಳವಣಿಗೆಗೆ ಅನುಕೂಲವಾಗುವಂತಹ ಶಿಫಾರಸುಗಳನ್ನು ಮಾಡುವುದರಿಂದ ಸಹಜವಾಗಿ ಹಿಂದುಳಿದಿರುವ ಎಲ್ಲಾ ಜಾತಿ-ಉಪಜಾತಿಗಳಿಗೆ ಲಾಭವಿದೆ. ಹಾಗಾಗಿ, ಜಾತಿ ಸಮೀಕ್ಷೆಗೆ ವಿರೋಧ ಮಾಡುವವರು ಹಿಂದುಳಿದವರ ವಿರೋಧಿಗಳೇ ಆಗಿರುತ್ತಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪೃಥ್ವಿರಾಜ್ ಅವರು ಮಾತನಾಡಿ, “ಹಿಂದುಳಿದ ವರ್ಗಗಳ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರವನ್ನು ಹಿಂದುಳಿದ ಸಮುದಾಯಗಳು ಎಂದಿಗೂ ಮರೆಯುವುದಿಲ್ಲ. ಜಾತಿ ಸಮೀಕ್ಷೆ ನಡೆಸುವುದೇ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು. ಆದುದರಿಂದ, ಜಾತಿ ಸಮೀಕ್ಷೆಗೆ ವಿರೋಧ ಮಾಡುವವರು ಸಾಮಾಜಿಕ ನ್ಯಾಯದ ವಿರೋಧಿಗಳು. ನಮ್ಮ ಮತಗಳನ್ನು ತೆಗೆದುಕೊಂಡು ಅಧಿಕಾರ ಪಡೆದು ನಮ್ಮ ವಿರುದ್ಧ ಮಸಲತ್ತು ನಡೆಸುತ್ತಿರುವ ಖಳನಾಯಕರು. ಇಂಥ ಸಮುದಾಯ ಮತ್ತು ನಾಯಕರ ವಿರುದ್ಧ ಹಿಂದುಳಿದ ಸಮುದಾಯಗಳು ಒಗ್ಗಟ್ಟಾಗುತ್ತಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸತ್ಯ, ಸರಳತೆ, ಸೌಹಾರ್ದತೆ, ಸಹಿಷ್ಣುತೆ ವರ್ತಮಾನದ ಭಾರತಕ್ಕೆ ಅಗತ್ಯ : ಕೆ ಟಿ ವೀರಪ್ಪ
“ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಮೀಕ್ಷೆ ವೇಳೆ ಆಗುತ್ತಿರುವ ಸಣ್ಣಪುಟ್ಟ ಲೋಪದೋಷಗಳನ್ನು ಕೂಡಲೇ ಬಗೆಹರಿಸಬೇಕು. ಸಮಯ ಮಿತಿಯೊಳಗೆ ಪೂರ್ಣಗೊಳಿಸುವುದು ಎಷ್ಟು ಮುಖ್ಯವೋ ಅದನ್ನು ಸಮರ್ಪಕವಾಗಿ ನಡೆಸುವುದು ಕೂಡಾ ಅಷ್ಟೇ ಮುಖ್ಯ. 2015ರ ಸಮೀಕ್ಷೆ ಬಗ್ಗೆ ಆಕ್ಷೇಪಗಳು ಬಂದು ಕಡೆಗೆ ಸರಕಾರ ಅದನ್ನು ಅಂಗೀಕರಿಸದಿರುವುದು ದುರ್ಬಲ ಸಮುದಾಯಗಳಿಗೆ ಆದ ದೊಡ್ಡ ಅನ್ಯಾಯ. ಮತ್ತೊಮ್ಮೆ ಅಂಥ ಮಹದನ್ಯಾಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಆಯೋಗದ ಮೇಲಿದೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಸಂತೋಷ್, ಸುಬ್ರಮಣ್ಯ, ಪ್ರಶಾಂತ್ ಇದ್ದರು.