ಜೂಜಾಟ ನಡೆಯುತ್ತಿದ್ದರೂ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮಸ್ಕಿ ಪೊಲೀಸ್ ಠಾಣೆಯ ಮೂವರು ಕಾನ್ಸ್ಟೆಬಲ್ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅಮಾನತು ಮಾಡಿದ್ದಾರೆ.
ʼಹೆಡ್ ಕಾನ್ಸ್ಟೆಬಲ್ ಈರಣ್ಣ, ಕಾನ್ಸ್ಟೆಬಲ್ಗಳಾದ ವೀರಭದ್ರಗೌಡ, ಖಾಜಾ ಹುಸೇನ್ ಅಮಾನತುಗೊಂಡವರು. ಹಡಗಲಿ ಗ್ರಾಮದಲ್ಲಿ ಜೂಜಾಟ ನಡೆಯುತ್ತಿದ್ದರೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದಿರುವುದು ಹಾಗೂ ದಾಳಿ ನಡೆಸದ ಕಾರಣ ಅಮಾನತು ಮಾಡಲಾಗಿದೆʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಹಡಗಲಿ ಗ್ರಾಮದಲ್ಲಿ ಇಸ್ಪಿಟ್ ಅಡ್ಡೆ ಮೇಲೆ ದಾಳಿ ಜಿಲ್ಲಾ ಪೊಲೀಸರ ತಂಡ ದಾಳಿ ನಡೆಸಿ 52 ಬೈಕ್ ಹಾಗೂ 2.2 ಲಕ್ಷ ನಗದು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಚೆಗೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಪೊಲೀಸ್ ಠಾಣೆ ಪಕ್ಕದಲ್ಲಿ ವಶಪಡಿಸಿಕೊಂಡಿದ್ದ 125 ಮೆಟ್ರಿಕ್ ಟನ್ ಮರಳು ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ ಸದಲಗಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದರು.
ರಾತ್ರೋರಾತ್ರಿ ಮರಳನ್ನು ಸಾಗಣೆ ಮಾಡಲಾಗಿತ್ತು. ಈ ಆದರ್ಶ ನಾಯಕ ಎನ್ನುವವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಕ್ರಮ ಗೊಳ್ಳಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದರು.