ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಗಲಿಕೆ ಹಿನ್ನೆಲೆ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಅಗಲಿದ ಅರ್ಥಮಾಂತ್ರಿಕನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು ಮನಮೋಹನ್ ಸಿಂಗ್ ಅವರ ಆಡಳಿತ ವೈಖರಿ, ರಾಜಕೀಯ ನಿಪುಣತೆಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್ ಮಾತನಾಡಿ, ದೇಶಕಂಡ ಅತ್ಯುತ್ತಮ ರಾಜಕಾರಣಿ ಮನಮೋಹನ್ ಸಿಂಗ್ ಅವರು ಶಿಸ್ತುಬದ್ಧ ಆರ್ಥಿಕ ತಜ್ಞರಾಗಿದ್ದರಲ್ಲದೆ ಅರ್ಥವ್ಯಸ್ಥೆಯಲ್ಲಿ ಎಲ್ಲಾ ಪದವಿಗಳನ್ನೂ ಅನುಭವಿಸಿದ ವಿಶ್ವದ ಏಕೈಕ ವ್ಯಕ್ತಿಯಾಗಿದ್ದರು. ಇಂತಹ ಧೀಮಂತ ನಾಯಕನ್ನು ಕಳೆದುಕೊಂಡ ದೇಶ ಇಂದು ಬಡವಾಗಿದೆ ಎಂದು ವಿಷಾದಿಸಿದರು.
ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗದ್ದ ಅವರು ಕೊನೆಯವರೆಗೂ ಕೂಡ ಗಾಂಧಿ ಮನೆತನದ ನಿಷ್ಠೆ ಉಳಿಸಿಕೊಂಡಿದ್ದ ಅಪರೂಪದ ನಾಯಕ. ಇವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಬೇಸರಗೊಂಡರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿ, ಪ್ರಧಾನಿ ಆಗಿದ್ದಾಗ ಒಟ್ಟು 116 ಸುದ್ದಿಗೋಷ್ಟಿಗಳನ್ನು ಎದುರಿಸಿದ್ದು, ವಿದೇಶಿ ಪ್ರವಾಸದಿಂದ ವಾಪಸಾಗುವಾಗಲೂ ವಿಮಾನದಲ್ಲಿಯೇ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ವಾಡಿಕೆಯನ್ನು ಅಳವಡಿಸಿಕೊಂಡಿದ್ದರು. ಈಗಿನ ಪ್ರಧಾನಿ ಒಂದೇ ಒಂದು ಸುದ್ದಿಗೋಷ್ಟಿಯನ್ನು ಕೂಡ ಎದರಿಸುವ ಧೈರ್ಯ ತೋರಿಲ್ಲ ಎಂದು ಹಾಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದರು. ಮುಖ್ಯವಾಗಿ ತಾವು 2ನೇ ಅವಧಿಗೆ ಪ್ರಧಾನಿ ಆಗಿದ್ದಾಗ 70 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ ಧೀಮಂತ ನಾಯಕ ಎಂದು ಬಣ್ಣಿಸಿದರು.
1991ರಲ್ಲಿ ಭಾರತವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ವಿತ್ತಸಚಿವರಾಗಿ ಅಧಿಕಾರವಹಿಸಿಕೊಂಡ ಮನಮೋಹನ್ ಸಿಂಗ್ ಅವರು ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ ಬಹುದೊಡ್ಡ ಆರ್ಥಶಾಸ್ತ್ರಜ್ಞರಾಗಿದ್ದರು. ತಮ್ಮ 10 ವರ್ಷದ ಆಡಳಿತದಲ್ಲಿ ದೇಶದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದ ಇತಿಹಾಸ ಹೊಂದಿರುವ ಇವರು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಮಾಧ್ಯಮದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ಸರಳಜೀವಿಯಾಗಿದ್ದರು ಎಂದು ಹೇಳಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಸಿರಿಧಾನ್ಯ ಬೆಳೆಗಳಿಂದ ಆರ್ಥಿಕ ಸಿರಿ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಶ್ರದ್ಧಾಂಜಲಿ ಸಭೆಯಲ್ಲಿ ಕಿಸಾನ್ ಘಟಕದ ರಾಮಕೃಷ್ಣಪ್ಪ, ಲಾಯರ್ ಮುನೇಗೌಡ, ಸುಧಾ ವೆಂಕಟೇಶ್, ದಿಬ್ಬೂರು ಶ್ರೀನಿವಾಸ್, ಪೆದ್ದಣ್ಣ, ಪಟ್ರೇನಹಳ್ಳಿ ಕೃಷ್ಣ, ಗೋಪಿ, ಕೋಮಡೇನಹಳ್ಳಿ ಚಂದ್ರಪ್ಪ, ಜನಾರ್ಧನ್ ಯಲುವಹಳ್ಳಿ, ಕಣಿತಹಳ್ಳಿ ವೆಂಕಟೇಶ್, ಅಣ್ಣಮ್ಮ, ಲಾಯರ್ ಚಂದ್ರಶೇಖರ್, ನಾರಾಯಣಸ್ವಾಮಿ ಸೇರಿದಂತೆ ಇತರರಿದ್ದರು.