ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ನಿಜ ಮಾಡಿ ಧರ್ಮಗಳ ನಡುವೆ ಕಂದಕ ಸೃಷ್ಟಿಸುವುದೇ ಬಿಜೆಪಿ ಮತ್ತು ಆರ್ಎಸ್ಎಸ್ನ ಸಿದ್ಧಾಂತ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ದೂರಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚಿಕ್ಕಕುನ್ನಾಲ ಗ್ರಾಮದ ಮೌಲಾನ ಆಜಾದ್ ಸರ್ಕಾರಿ ಶಾಲೆಯಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ರಾಜ್ಯದಲ್ಲಿನ ಹಿಂದೂಗಳ ಭಾವನೆ ಕೆದಕಿ. ನಂತರ ಬಿಜೆಪಿಯವರೇ ಹಿಂದೂಗಳ ಕೊಲೆ ಮಾಡಿ ಅಮಾಯಕ ಮುಸಲ್ಮಾನರ ಮೇಲೆ ಹಾಕಿ ತಮ್ಮ ರಾಜಕೀಯ ನಡೆಸುವ ಬಿಜೆಪಿ, ಇದೇ ಮಾದರಿಯಲ್ಲಿ ಮಂಗಳೂರು ಕಾರವಾರ ಭಾಗದಲ್ಲಿ ಪಕ್ಷ ಸಂಘಟನೆ ಮಾಡಿದ್ದರು. ಮತ್ತೇ ಅದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದು ಈ ಬಾರಿ ಯಶಸ್ಸು ಕಾಣುವುದಿಲ್ಲ” ಎಂದರು.
ಹಳೇ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಅಂದಿನ ರೌಡಿ ಶೀಟರ್ ಕೇಸು ಪರಿಶೀಲಿಸಿದರೆ, ಅದನ್ನೇ ಅಯೋಧ್ಯೆ ಗಲಭೆಯ ಹಿಂದಿನ ಪ್ರಕರಣಕ್ಕೆ ಲಿಂಕ್ ಮಾಡಿ ಕೋಮು ಸೌಹಾರ್ದ ಹಾಳು ಮಾಡಲು ಬಿಜೆಪಿ ಮುಂದಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗಳು ಸಂಪೂರ್ಣ ಮತೀಯ ಗಲಭೆಗೆ ಪೂರಕ. ಇದನ್ನು ಮುಂದಿಟ್ಟು ಪಕ್ಷ ಸಂಘಟನೆ ಹಾಗೂ ಲೋಕಾಸಭಾ ಚುನಾವಣೆ ನಡೆಸಲು ಹೊರಟಿದ್ದಾರೆ. ಇವರ ಆಡಳಿತದಲ್ಲಿ ಭ್ರಷ್ಠಾಚಾರ ಉತ್ತುಂಗಕ್ಕೆ ಹೋಗಿದ್ದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಬಿಜೆಪಿ ಸಂಘಟನೆಯ ಚಟುವಟಿಕೆ ಬಗ್ಗೆ ವ್ಯಂಗ್ಯವಾಡಿದರು.
ಅತಿಥಿ ಉಪನ್ಯಾಸಕರ ಹೋರಾಟದ ಬಗ್ಗೆ ಸಚಿವರೇ ಉತ್ತರ ನೀಡಿದ್ದಾರೆ. ಎಲ್ಲಾ ಇಲಾಖೆಗಳಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗಳು ಇದ್ದಾರೆ. ಎಲ್ಲರನ್ನೂ ಖಾಯಂ ಮಾಡಲು ಆಗದು. ಉಪನ್ಯಾಸಕರ ಹುದ್ದೆಗೆ ಗೌರವ ನೀಡಿ ಅವರಿಗೆ ಮುಂದಿನ ಬಜೆಟ್ ಸಮಯಕ್ಕೆ ವೇತನ ಅನುದಾನ ಹೆಚ್ಚಳ, ವಿಶೇಷ ಭತ್ಯೆ ನೀಡುವ ಚಿಂತನೆ ನಡೆದಿದೆ. ಸರ್ಕಾರ ಅವರತ್ತ ಗಮನಿಸಿದೆ ಎಂದ ಅವರು ಕೂಸಿನ ಮನೆ ಯಶಸ್ವಿ ಕಾರ್ಯಕ್ರಮ ಆಗಲಿದೆ.
ಆರಂಭಿಕ ತೊಡಕು ಸರಿ ಪಡಿಸುವ ಕೆಲಸ ನಡೆದಿದೆ. ಮಹಿಳೆಯರಿಗೆ ನರೇಗಾದಲ್ಲಿ ಅವಕಾಶ ಹೆಚ್ಚು ನೀಡಲು ಈ ಕಾರ್ಯಕ್ರಮ ಪೂರಕ. ಈ ಜೊತೆಗೆ ಬರಗಾಲದ ಹಿನ್ನಲೆ 90ದಿನಗಳ ಕೂಲಿಯನ್ನು 150 ದಿನಗಳಿಗೆ ಏರಿಕೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ನಮ್ಮ ಸರ್ಕಾರ ಸಲ್ಲಿಸಿದೆ ಎಂದರು.
ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ತಾಲೂಕಿನಲ್ಲಿ ಹಲವು ಸಭೆ ನಡೆಸಿದ್ದೇನೆ. ಆರೋಗ್ಯ ಇಲಾಖೆ ಸಿಬ್ಬಂದಿ, ಪಿಡಿಒಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿದ್ದೇವೆ ಕೊರೊನ ಪ್ರಕರಣಗಳು ಕಂಡುಬಂದರೆ ಸರ್ಕಾರದ ನಿರ್ದೇಶದಂತೆ ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ರೆಹೇಮತ್ ಉಲ್ಲಾ, ಮುಖಂಡರಾದ ಸಮೀರ್, ಅಬುಸಾಲಿಯಾ, ಶಬ್ಬೀರ್ ಅಹಮದ್, ಶಿವಣ್ಣ, ಅಸ್ಲಾಂ ಪಾಷ, ಶರ್ಫ್ ವುದ್ಧಿನ್, ಪ್ರಸನ್ನ, ತಾಹೀರ್, ಗುತ್ತಿಗೆದಾರ ಅರುಣ್, ಕೆಆರ್ಐಡಿಎಲ್ ಮಂಜುನಾಥ ಇತರರು ಇದ್ದರು.