ತುಮಕೂರಿನ ನೂತನ ಬಸ್ ನಿಲ್ದಾಣಕ್ಕೆ ದೇವರಾಜು ಅರಸು ಬಸ್ ನಿಲ್ದಾಣವೆಂದು ನಾಮಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.
“ತುಮಕೂರು ನಗರದಲ್ಲಿ ಇಡೀ ಜಿಲ್ಲೆಗೆ ಸರ್ಕಾರದಿಂದ ಕೊಡುವ ಸೌಲಭ್ಯಗಳಡಿ 30 ಸಾವಿರ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಣೆ ಮಾಡಲಾಗಿದೆ. 657 ಕೋಟಿ 27 ಲಕ್ಷ ರೂ. ವೆಚ್ಚ ತಗುಲಿದೆ. ಜತೆಗೆ ನೂತನವಾಗಿ ಬಸ್ ನಿಲ್ದಾಣ ಉದ್ಘಾಟಿಸಲಾಗಿದ್ದು, ʼದೇವರಾಜ ಅರಸು ಬಸ್ ನಿಲ್ದಾಣʼವೆಂದು ಎಂದು ನಾಮಕರಣ ಮಾಡಲಾಗಿದೆ. ದೇವರಾಜ ಅರಸು ಅವರ ಹೆಸರಲ್ಲಿ ಬಸ್ ನಿಲ್ದಾಣ ಕಾರ್ಯ ನಿರ್ವಹಿಸಲಿದೆ” ಎಂದರು.
“ಸರ್ಕಾರದಲ್ಲಿ ಹಣ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎನ್ನುವವರಿಗೆ ಈ ಕಾರ್ಯಕ್ರಮಗಳೇ ಉತ್ತರ. ನಮ್ಮ ಸರ್ಕಾರ ದಿವಾಳಿಯಾಗಿಲ್ಲ. ಗ್ಯಾರಂಟಿ ಯೋಜನೆ ಜಾರಿ ಮಾಡಲಿಕ್ಕೆ ಸಾಧ್ಯವಿಲ್ಲ. ಜಾರಿಯಾದರೆ ಸರ್ಕಾರ ದಿವಾಳಿಯಾಗಲಿದೆ ಎಂದು ಪ್ರಧಾನಿಯವರೇ ಹೇಳಿದ್ದರು. ಆದರೆ ನಾವು ದಿವಾಳಿಯಾಗಿಲ್ಲ. 3.80 ಸಾವಿರ ಕೋಟಿ ರೂ. ಬಜೆಟ್ ಮಂಡಿಸಲಾಗುವುದು” ಎಂದರು.
“ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುತ್ತೇವೆ. ಜೊತೆಗೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡುತ್ತೇವೆ. ಯಾವುದೇ ಯೋಜನೆ ನಿಂತಿಲ್ಲ. ಈ ವರ್ಷ ಗ್ಯಾರಂಟಿ ಯೋಜನೆಗೆ
₹38,000 ಕೋಟಿ ನೀಡಲಾಗಿದೆ. ಸಂಪನ್ಮೂಲ ಕ್ರೋಢೀಕರಣ ಮಾಡಲಾಗಿದೆ. ಮುಂದಿನ ವರ್ಷ ₹58,000 ಕೋಟಿ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸುವುದಿಲ್ಲ, ಮುಂದುವರೆಯುತ್ತವೆ. ಐದು ವರ್ಷದ ಅವಧಿಯಲ್ಲಿ ಐದು ಗ್ಯಾರಂಟಿಗಳೂ ಮುಂದುವರೆಯಲಿವೆ” ಎಂದರು.
“ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಹಾಗಾಗಿ ನಿಮಗೆಲ್ಲರಿಗೂ ಅಭಿನಂದನೆ. ನಿಮ್ಮೆಲ್ಲರ ಆಶೀರ್ವಾದದಿಂದ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಅಧಿಕಾರಕ್ಕೆ ಬಂದ ನಂತರ ಎಲ್ಲ ಜನಾಂಗಕ್ಕೂ ಅನುಕೂಲ ಮಾಡಲಾಗಿದೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೇವೆ. ಇದರ ಜೊತೆಗೆ ಇನ್ನೂ 20ರಿಂದ 30 ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಕೊಟ್ಟಿದ್ದೇವೆ” ಎಂದರು
ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, “ಜನರಿಗೆ ಸರ್ಕಾರದ ಕಾರ್ಯಕ್ರಮವನ್ನು ಎಂಬ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂ. ವೆಚ್ಚದ ಅದ್ಬುತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಲ್ಪತರು ನಾಡು ಅನೇಕ ಹಿರಿಮೆಯನ್ನು ಹೊಂದಿದೆ. ಧಾರ್ಮಿಕ ಕ್ಷೇತ್ರವಾಗಿದ್ದು, ತುಮಕೂರು ಜಿಲ್ಲೆ ಎರಡನೇ ಬೆಂಗಳೂರು ಜಿಲ್ಲೆಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
“ತುಮಕೂರಿಗೆ ತನ್ನದೇ ಆದ ಶಕ್ತಿಯಿದೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಬೇಕಿದೆ. ಹಾಗಾಗಿ ಮುಂದಿನ 50 ವರ್ಷಕ್ಕೆ ಹೊಸ ಬೆಂಗಳೂರು ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಬೇಕು. ಬೆಂಗಳೂರು ನಗರವನ್ನು ವಿಸ್ತರಣೆ ಮಾಡಬೇಕೆಂದರೆ ಬೆಂಗಳೂರಿನ ಆಸುಪಾಸುಗಳ ಪ್ರದೇಶವನ್ನು ಅಭಿವೃದ್ಧಿ ಮಾಡಬೇಕು. ಹಾಗಾಗಿ ತುಮಕೂರು ಜಿಲ್ಲೆಯಲ್ಲಿ ಈ ಕಾರಿಡಾರ್ಗಳಲ್ಲಿ ಅಭಿವೃದ್ಧಿ ಮಾಡಬೇಕಿದೆ. ಹೆಚ್ಚು ಒತ್ತು ಕೊಡಬೇಕಿದೆ” ಎಂದರು.
“136 ಮಂದಿ ಶಾಸಕರನ್ನು ಆಯ್ಕೆ ಮಾಡಿ ಕಾಂಗ್ರೆಸ್ಗೆ ಅಧಿಕಾರ ಕೊಟ್ಟಿದ್ದೀರಾ. ಐದು ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ತಲುಪುತ್ತಿವೆ” ಎಂದರು.
“ಸಿದ್ದರಾಮಯ್ಯ ಅವರ ಕನಸಿನ ಗ್ಯಾರಂಟಿಯಿಂದಾಗಿ ದೊಡ್ಡ ಬದಲಾವಣೆಯಾಗಿದೆ. ಆರ್ಥಿಕ ಶಕ್ತಿ ತಂದಿದೆ. ನಾವು ಬರಿ ಗ್ಯಾರಂಟಿ ಯೋಜನೆ ಬಗ್ಗೆ ಅಷ್ಟೇ ಅಲೋಚನೆ ಮಾಡುತ್ತಿಲ್ಲ. ಇನ್ನೂ ಹಲವು ಕಾರ್ಯಕ್ರಮ ಆಯೋಜನೆಗೆ ಚಿಂತನೆ ಮಾಡಲಾಗಿದೆ. ನಾನು ತುಮಕೂರಿಗೆ ಬಂದಾಗ ಪಾವಗಡ ಸೋಲಾರ್ ಪಾರ್ಕ್ ನೆನಪಿಗೆ ಬರುತ್ತದೆ. ಇನ್ನೂ 10,000 ಹೆಕ್ಟೇರ್ನಲ್ಲಿ ಸೋಲಾರ್ ಪಾರ್ಕ್ ವಿಸ್ತರಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ” ಎಂದರು
“ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆಯಲ್ಲಿ ಕಾಲಿಟ್ಟಿದೆ. ₹22,000 ಕೋಟಿ ವೆಚ್ಚದ ಯೋಜನೆಯಿಂದ ಜಿಲ್ಲೆಗೆ ನೆರವಾಗಲಿದೆ. ಭದ್ರ ಮೇಲ್ದಂಡೆ ಯೋಜನೆಗೆ ನೆರವು ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಚ್ ಕೆ ಪಾಟೀಲ್ ಚಾಲನೆ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, “ಶೋಷಿತರು, ಬಡವರ ಜೀವನಕ್ಕೆ ಕಷ್ಟವಾಗಬಾರದೆಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 5,75,373 ಫಲಾನುಭವಿಗಳಿಗೆ
₹546 ಕೋಟಿ ಹಣ ನೀಡಲಾಗಿದೆ. ಶಕ್ತಿ ಯೋಜನೆಯಡಿ 3.87 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆದಿದ್ದು, ಇದಕ್ಕಾಗಿ ₹110 ಕೋಟಿ ಖರ್ಚಾಗಿದೆ. ಅಂತೆಯೇ 6.86 ಸಾವಿರ ಫಲಾನುಭವಿಗಳು ವಿದ್ಯುತ್ ಭಾಗ್ಯ ಯೋಜನೆ ಸೌಲಭ್ಯ ಪಡೆದಿದ್ದಾರೆ. ಇನ್ನು ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ನೀಡಲಾಗುತ್ತಿದ್ದ, ಉಳಿದ 5 ಕೆಜೆ ಅಕ್ಕಿಗೆ ಹಣವನ್ನು ಕೊಡಲಾಗುತ್ತಿದೆ. ಇದರ ಸೌಲಭ್ಯವನ್ನು 5.98 ಸಾವಿರ ಜನ ಅನುಭವ ಪಡೆದುಕೊಂಡಿದ್ದಾರೆ. ಯುವನಿಧಿ ಯೋಜನೆಯಡಿ ನೋಂದಣಿ ಆರಂಭವಾಗಿದ್ದು, 3,400 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ” ಎಂದರು.