ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲಾ ಅತ್ಯಾಚಾರ, ಕೊಲೆ ಪ್ರಕರಣಗಳ ಸಮಗ್ರ ತನಿಖೆಯಾಗಬೇಕು, ಎಸ್.ಐ.ಟಿ. ತನಿಖೆಯಲ್ಲಿ ಸೌಜನ್ಯ,ಅನನ್ಯಭಟ್ ಹಾಗೂ ವೇದವಲ್ಲಿ ಪ್ರಕರಣಗಳನ್ನು ಸೇರಿಸಬೇಕೆಂದು ಆಗ್ರಹಿಸಿ ಸೋಮವಾರ ಜನಪರ ಚಳವಳಿಗಳ ಒಕ್ಕೂಟ,ತುಮಕೂರು ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಾತ್ಯಾತೀತ ಮಾನವ ವೇದಿಕೆಯ ವಿರೂಪಾಕ್ಷ ಡ್ಯಾಗೇರಹಳ್ಳಿ, ವಾಲ್ಮೀಕಿ ಸ್ವಾಭಿಮಾನ ಸಂಘದ ಚಳವಳಿ ರಾಜಣ್ಣ, ವಾಲ್ಮೀಕಿ ಕ್ರಾಂತಿ ಸೇನೆಯ ಕುಪ್ಪೂರು ಶ್ರೀಧರನಾಯ್ಕ್, ದಸಂಸದ ಜಿಲ್ಲಾ ಸಂಚಾಲಕ ಮುರುಳಿ ಕುಂದೂರು ನೇತೃತ್ವದಲ್ಲಿ ಹಲವಾರು ಯುವಕರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ ಮನವಿಯನ್ನು ತುಮಕೂರು ಉಪವಿಭಾಗಾಧಿಕಾರಿ ನಾಹಿದ ಜಮ್ ಜಮ್ ಅವರಿಗೆ ಸಲ್ಲಿಸಿದರು.
ವಾಲ್ಮೀಕಿ ಸ್ವಾಭಿಮಾನಿ ಸಂಘದ ಚಳವಳಿ ರಾಜಣ್ಣ ಮಾತನಾಡಿ ಕಳೆದ ನಲವತ್ತು ವರ್ಷಗಳಿಂದ ಹಿಂದೂಗಳ ಶ್ರದ್ದಾ,ಭಕ್ತಿಯ ಕೇಂದ್ರವಾದ ಧರ್ಮಸ್ಥಳದಲ್ಲಿ ನಡೆದಿರುವ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣ, ಹಾಗೂ ತುಂಡು ಭೂಮಿಗಾಗಿ ಪ್ರಾಣ ಕಳೆದುಕೊಂಡ ಆನೆ ಮಾವುತ ಸೇರಿದಂತೆ ಎಲ್ಲರಿಗೂ ನ್ಯಾಯ ದೊರೆಯಬೇಕು. ಸರಕಾರ ಸಂಘ, ಸಂಸ್ಥೆಗಳು, ಹೋರಾಟಗಾರರ ಒತ್ತಡಕ್ಕೆ ಮಣಿದು ಎಸ್.ಐ.ಟಿ.ರಚಿಸಿದೆ.ಆದರೆ ಎಸ್.ಐಟಿ.ಯಿಂದ ಸೌಜನ್ಯ ಪ್ರಕರಣವನ್ನು ಹೊರಕ್ಕೆ ಇಟ್ಟಿರುವುದು ಸರಿಯಲ್ಲ.ಸೌಜನ್ಯ ಪ್ರಕರಣದಿಂದಲೇ ಧರ್ಮಸ್ಥಳದ ಹತ್ಯಾಕಾಂಡ ಬೆಳಕಿಗೆ ಬರಲು ಕಾರಣವಾಗಿದೆ. ಹಾಗಾಗಿ ಎಸ್.ಐ.ಟಿ ಇದುವರೆಗೂ ಧರ್ಮಸ್ಥಳದ ಅಜು, ಬಾಜು ಪ್ರದೇಶಗಳಲ್ಲಿ ನಡೆದಿರುವ ಎಲ್ಲಾ ಪ್ರಕರಣಗಳನ್ನು ಎಸ್.ಐ.ಟಿ. ತನಿಖೆಯ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿದರು.
ಜಾತ್ಯಾತೀತ ಮಾನವ ವೇದಿಕೆಯ ವಿರೂಪಾಕ್ಷ ಡ್ಯಾಗೇರಹಳ್ಳಿ ಮಾತನಾಡಿ, ರೌಡಿಶೀಟರ್ ಒಬ್ಬನ ಕೊಲೆಯಾದಾಗ ಇಡೀ ರಾಜ್ಯದಾದ್ಯಂತ ಕೇಸರಿ ಬಾವುಟ ಹಿಡಿದು ಹೋರಾಟ ನಡೆಸಿದ್ದ ಹಿಂದುಪರ ಸಂಘಟನೆಗಳು, ಸೌಜನ್ಯ ಪ್ರಕರಣದಲ್ಲಿ ಮೌನಕ್ಕೆ ಶರಣಾಗಿರುವುದು ನಾಚಿಕೇಗೇಡಿನ ಸಂಗತಿ.ಸತ್ತವರ ಜಾತಿ, ಕೊಲೆ ಮಾಡಿದವರ ಧರ್ಮ ನೋಡಿ ಹೋರಾಟಕ್ಕೆ ಇಳಿಯುವ ನಿಮ್ಮಂತಹವರಿಂದಲೇ ನಿಜವಾದ ಹೋರಾಟಗಾರರಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಬಣ)ದ ಜಿಲ್ಲಾ ಸಂಚಾಲಕ ಕುಂದೂರು ಮುರುಳಿ ಮಾತನಾಡಿ,ಭೀಮ ಎಂಬ ವ್ಯಕ್ತಿ ಅತ್ಯಾಚಾರ ಮಾಡಿ, ಕೊಲೆಯಾದ ಹೆಣ್ಣು ಮಕ್ಕಳ ಎಷ್ಟೋ ಹೆಣಗಳನ್ನು ನಾನು ಹೂತು ಹಾಕಿದ್ದೇನೆ ಎಂದು ಪಶ್ಚಾತಾಪದಿಂದ ಹೇಳಿಕೆ ನೀಡಿದ್ದರೂ, ಸ್ಥಳ ಮಹಜರ್ಗೆ ಹಿಂದೇಟು ಹಾಕುವ ಪೊಲೀಸರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಎಸ್.ಐ.ಟಿ. ತನಿಖೆ ನ್ಯಾಯಯುತವಾಗಿ ನಡೆಯಬೇಕು. ಎಲ್ಲಾ ಕೊಲೆ, ಅತ್ಯಾಚಾರ ಪ್ರಕರಣಗಳನ್ನು ಎಸ್.ಐ.ಟಿ.ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಕ್ರಾಂತಿ ಸೇನೆಯ ಕುಪ್ಪೂರು ಶ್ರೀಧರ ನಾಯಕ್,ದಸಂಸ ಮುಖಂಡರಾದ ಕೊಡಿಯಾಲ ಮಹದೇವ್, ಬಂಡೆಕುಮಾರ್, ಅಂಬೇಡ್ಕರ್ ದಂಡು ಜಿಲ್ಲಾಧ್ಯಕ್ಷ ಕುಮಾರ್, ಕಲಾವಿದ ಮನುಚಕ್ರವರ್ತಿ, ಹೋರಾಟಗಾರ ಅನೀಫ್ ಸೇರಿದಂತೆ ಹತ್ತಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.