ರಾಜ್ಯದ ವಿಧಾನ ಪರಿಷತ್ನ 3 ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವಿ ಕ್ಷೇತ್ರ ಸೇರಿ ಒಟ್ಟು 6 ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ ನಡೆಯುತ್ತಿದ್ದು, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ಅವರನ್ನು ಬೆಂಬಲಿಸುವಂತೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ಬಾಬು ಮನವಿ ಮಾಡಿದರು.
“ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಡಿ ಟಿ ಶ್ರೀನಿವಾಸ್ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ತಳಮಟ್ಟದಿಂದ ಶಿಕ್ಷಕರ ಸಮಸ್ಯೆಗಳನ್ನು ಬಲ್ಲವರಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಶಿಕ್ಷಕರ ಸಮಸ್ಯೆಗಳ ಧ್ವನಿಯಾಗಿ ಕೆಲಸ ಮಾಡುತ್ತಾರೆ” ಎಂದು ಪತ್ರಿಕಾಗೋಷ್ಠಟಿಯಲ್ಲಿ ತಿಳಿಸಿದ್ದಾರೆ.
ಆಗ್ನೇಯ ಶಿಕ್ಷಕ ಕ್ಷೇತ್ರದಲ್ಲಿ 23,514 ಮಂದಿ ಮತದಾರರು ನೋಂದಣಿಯಾಗಿದ್ದು, ತುಮಕೂರು ಜಿಲ್ಲೆಯಿಂದ 7599, ಚಿತ್ರದುರ್ಗ ಜಿಲ್ಲೆಯಿಂದ 4915, ಕೋಲಾರ ಜಿಲ್ಲೆಯಿಂದ 4149, ದಾವಣಗೆರೆ ಜಿಲ್ಲೆಯಿಂದ 3984 , ಚಿಕ್ಕಬಳ್ಳಾಪುರ ಜಿಲ್ಲೆಯಿಂದ 3510 ಮಂದಿ ಮತದಾರರು ನೋಂದಾಯಿಸಿದ್ದಾರೆ.
“ಜೂನ್ 3ರಂದು ನಡೆಯಲಿರುವ 6 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರೆಲ್ಲರನ್ನು ಗೆಲ್ಲಿಸಬೇಕು” ಎಂದು ಕೋರಿದರು.
“ಜೂನ್ 13ರಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸುವರು. ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಸಚಿವರು, ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ” ಎಂದರು.
“2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರಿಗೆ ಸಂಬಂಧಪಟ್ಟಂತೆ ಅಂದಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ತನ್ವೀರ್ಸೇಠ್ ಅವರು ಶಿಕ್ಷಕರ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಹಾಗೂ ಶಿಕ್ಷಣ ಇಲಾಖೆ ಪ್ರಮುಖ ಅಧಿಕಾರಿಗಳೊಂದಿಗೆ ನಿರಂತವಾಗಿ 2 ಬಾರಿ ಸಭೆ ನಡೆಸಿ ಸಮಸ್ಯೆಗೆ ಸ್ಪಂದಿಸಿದ್ದರು” ಎಂದು ತಿಳಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಶಿಕ್ಷಣ ಸಚಿವರುಗಳಾದ ಮಧುಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಅವರು ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ” ಎಂದರು.
“ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 44,422 ಕೋಟಿ ರೂ. ಹಣವನ್ನು ಶಿಕ್ಷಕ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ 850 ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಇದರೊಂದಿಗೆ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಂಡಿದ್ದಾರೆ. ಶಿಕ್ಷಕರು, ಉಪನ್ಯಾಸಕರ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಶ್ರಮಿಸುತ್ತಿದೆ” ಎಂದು ಹೇಳಿದರು.
“ತುಮಕೂರು- ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದನ್ನು ಸ್ವಾಗತಿಸುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇನ್ನು ಸಮಯ ಇರುವುದರಿಂದ ಮೈತ್ರಿ ಪಕ್ಷಗಳ ನಾಯಕರು ಪ್ರಜ್ವಲ್ ರೇವಣ್ಣನ ಪೋಟೋ ಹಾಕಿಕೊಂಡು ಮತ ಕೇಳಲಿ, ನಮ್ಮದೇನೂ ಅಭ್ಯಂತರವಿಲ್ಲ” ಎಂದು ರಮೇಶ್ ಬಾಬು ವ್ಯಂಗ್ಯವಾಡಿದರು.
“ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಈ ಎರಡೂ ಪಕ್ಷಗಳ ಮೈತ್ರಿಗೆ ಪ್ರಬುದ್ಧ ಶಿಕ್ಷಕ ಮತದಾರರು ಉತ್ತರ ನೀಡಿದ್ದಾರೆ. ಇನ್ನುಳಿದ ಚುನಾವಣೆಗಳಲ್ಲಿ ಪ್ರಜ್ವಲ್ ಫೋಟೋ ಹಾಕಿಕೊಂಡು ಮತ ಕೇಳಲು ಹೋಗಲಿ” ಎಂದರು.
ರಮೇಶ್ಬಾಬು ಸಹ ಜೆಡಿಎಸ್ ಪಕ್ಷದಿಂದ ಬಂದವರಲ್ವಾ ಎಂಬ ಪತ್ರಕರ್ತ ಪ್ರಶ್ನೆಗೆ, “ದೇವೇಗೌಡರು ಸಹ ಮೂಲ ಕಾಂಗ್ರೆಸ್ ಪಕ್ಷದಿಂದ ಬಂದವರು. ಈ ದೇಶದಲ್ಲಿ ಎಲ್ಲ ಪಕ್ಷಗಳಿಗೂ ಮಾತೃ ಪಕ್ಷ ಕಾಂಗ್ರೆಸ್. ಹಾಗಾಗಿ ದೇವೇಗೌಡರು ಕೂಡಾ ಕಾಂಗ್ರೆಸ್ ಪಕ್ಷದಿಂದ ಬಂದವರು” ಎಂದು ಪ್ರತಿಕ್ರಿಯಿಸಿದರು.
“ನಾನು, ಎಸ್ ಆರ್ ಶ್ರೀನಿವಾಸ್, ಮಧು ಬಂಗಾರಪ್ಪ, ಎಂ ಸಿ ನಾಣಯ್ಯ, ಪಿಜಿಆರ್ ಸಿಂಧ್ಯಾ ಅವರನ್ನೆಲ್ಲ ಕುಮಾರಸ್ವಾಮಿ ಅವರು ಆಚೆ ಕಳುಹಿಸುವಂತಹ ವಾತಾವರಣ ಸೃಷ್ಟಿ ಮಾಡಿದರು. ನಾವ್ಯಾರೂ ನಾವಾಗಿಯೇ ಆಚೆ ಬಂದವರಲ್ಲ. ಜೆಡಿಎಸ್ನಲ್ಲಿ ಕುಮಾರಸ್ವಾಮಿರವರಿಗಿಂತ ನಾನೇ ಸೀನಿಯರ್. ಅವರು ನಡೆಸಿಕೊಂಡ ರೀತಿಯಿಂದ ಎಲ್ಲರೂ ಬೇಸರಗೊಂಡು ಜೆಡಿಎಸ್ ಪಕ್ಷವನ್ನು ಬಿಟ್ಟು ಬಂದಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ವಿಶ್ವಗುರು ಬಸವೇಶ್ವರರ 190ನೇ ಜಯಂತಿಯಂದು ಸಾಮೂಹಿಕ ವಿವಾಹ
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹಮದ್, ಷಣ್ಮುಖಪ್ಪ, ದಿವಾಕರ್, ಲೋಕೇಶ್, ಸುಜಾತ ಸೇರಿದಂತೆ ಇತರರು ಇದ್ದರು.
