ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಪ್ರತಿ ವರ್ಷದಂತೆ ಕೊಡಮಾಡುವ 2023ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಕನ್ನಡದಲ್ಲಿ ಪ್ರಕಟವಾಗಿರುವ ಹಿರಿಯ ಸಾಹಿತಿ, ಕತೆಗಾರ ಡಾ.ಮಿರ್ಜಾ ಬಷೀರ್ ಅವರ ʼಅಬ್ರಕಡಬ್ರʼ ಕಥಾಸಂಕಲನ ಆಯ್ಕೆಯಾಗಿದೆ.
ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು ಹೆಚ್ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, “ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದು, ಕೆಪಿಎಸ್ಸಿ ಪರೀಕ್ಷೆ ಮೂಲಕ ಸರ್ಕಾರಿ ಸೇವೆಗೆ ಸೇರ್ಪಡೆಯಾಗಿ, ಪಶು ಸಂಗೋಪನಾ ಇಲಾಖೆಯಲ್ಲಿ ಸುಮಾರು 34 ವರ್ಷಗಳ ಕಾಲ ಪಶು ವೈದ್ಯರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿರುವ ಡಾ.ಮಿರ್ಜಾ ಬಷೀರ್ ಮೂಲತಃ ಚಿತ್ರದುರ್ಗದ ಚಳ್ಳಕೆರೆಯವರು” ಎಂದು ತಿಳಿಸಿದ್ದಾರೆ.
ʼಬಟ್ಟೆಯಿಲ್ಲದ ಊರಿನಲ್ಲಿʼ, ʼಜಿನ್ನಿʼ ಹಾಗೂ ʼಹಾರುವ ಹಕ್ಕಿ ಮತ್ತು ಇರುವೆʼ ಡಾ.ಮಿರ್ಜಾ ಬಷೀರ್ ಅವರ ಇತರ ಪ್ರಕಟಿತ ಕಥಾಸಂಕಲನಗಳು. ʼಗಂಗೆ ಬಾರೆ ಗೌರಿ ಬಾರೆʼ ಇವರ ಪ್ರಕಟಿತ ಪಶುವೈದ್ಯ ವೃತ್ತಿಯ ಅನುಭವ ಕಥನ. ಪ್ರಸ್ತುತದಲ್ಲಿ ತುಮಕೂರಿನಲ್ಲಿ ವಾಸವಾಗಿರುವ ಡಾ.ಮಿರ್ಜಾ ಬಷೀರ್ ಅವರ ಅನೇಕ ಕಥೆಗಳು ನಾಡಿನ ಹಲವು ದಿನಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರ ಕಥೆಗಳು ಹಲವು ವಿಶ್ವವಿದ್ಯಾಲಯಗಳ ಪದವಿ ಪಠ್ಯಗಳಲ್ಲಿ ಸೇರ್ಪಡೆಗೊಂಡಿವೆ. ಇವರ ʼತಬ್ಬಲಿಗಳುʼ ನಾಟಕ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿಗೆ ಪಠ್ಯವಾಗಿದೆ. ಡಾ. ಮಿರ್ಜಾ ಬಷೀರ್ ಅವರ ಕಥೆಗಳು ಕೇರಳ ರಾಜ್ಯದ 9ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಸೇರ್ಪಡೆಗೊಂಡಿದ್ದು, ಕೆಲವು ಕಥೆಗಳು ತೆಲುಗಿಗೆ ಭಾಷಾಂತರವಾಗಿವೆ.

ಡಾ.ಮಿರ್ಜಾ ಬಷೀರ್ ಅವರ ‘ಜಿನ್ನಿ’ ಕಥಾಸಂಕಲನಕ್ಕೆ ಶಿವಮೊಗ್ಗ ಕರ್ನಾಟಕ ಸಂಘದಿಂದ ಲಂಕೇಶ್ ಪ್ರಶಸ್ತಿ ಮತ್ತು ತುಮಕೂರಿನ ಅನನ್ಯ ಪ್ರಕಾಶನದಿಂದ ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ, ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾಸಂಕಲನಕ್ಕೆ ಬೆಂಗಳೂರಿನ ಸ್ವಾಭಿಮಾನಿ ಕರ್ನಾಟಕದಿಂದ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಮತ್ತು ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಹಾಗೂ ‘ಗಂಗೆ ಬಾರೆ ಗೌರಿ ಬಾರೆ’ ಕೃತಿಗೆ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ‘ಅಮ್ಮ’ ಪ್ರಶಸ್ತಿಗಳು ಲಭಿಸಿವೆ. 2024ನೇ ಸಾಲಿನ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಡಾ.ಮಿರ್ಜಾ ಬಷೀರ್ ಅವರನ್ನು ಗೌರವಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಕನ್ನಡ ಅನ್ನದ ಭಾಷೆಯಾಗಬೇಕು : ಡಾ.ಆಶಾರಾಣಿ ಬಗ್ಗನಡು
ದಿವಂಗತ ಯು ಟಿ ಫರೀದ್ ಸ್ಮರಣಾರ್ಥ ನೀಡಲಾಗುವ ʼಮುಸ್ಲಿಂ ಸಾಹಿತ್ಯ ಪ್ರಶಸ್ತಿʼಯು ₹10,000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ 32 ಕೃತಿಗಳು ಬಂದಿದ್ದು, ಹಿರಿಯ ಸಾಹಿತಿ ಡಾ. ಕೆ ಷರೀಫಾ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಡಾ. ಮುಸ್ತಾಫ ಕೆ ಹೆಚ್ ಹಾಗೂ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ತುಮಕೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಉಮರ್ ಯು ಹೆಚ್ ತಿಳಿಸಿದ್ದಾರೆ.