ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬ್ಯಾನರ್, ಫ್ಲೆಕ್ಸ್, ಬಂಟಿಂಗ್, ಹೋರ್ಡಿಂಗ್, ಜನಪ್ರತಿನಿಧಿಗಳ ಭಾವಚಿತ್ರ/ಹೆಸರು, ಗೋಡೆಬರಹ ಸೇರಿದಂತೆ ಈವರೆಗೂ ಸುಮಾರು 5,000ದಷ್ಟು ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ ವಿ ಅಶ್ವಿಜ ಮಾಹಿತಿ ನೀಡಿದರು.
ತುಮಕೂರು ಮಹಾನಗರ ಪಾಲಿಕೆಯು ತಮ್ಮ ಕಚೇರಿಯಲ್ಲಿಂದು ನಿಷ್ಪಕ್ಷಪಾತ ಲೋಕಸಭಾ ಚುನಾವಣೆ ನಡೆಸಲು ಪಾಲಿಕೆಯಿಂದ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
“ಚುನಾವಣಾ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದರಲ್ಲದೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 1,29,047 ಮಂದಿ ಪುರುಷ ಮತದಾರರು, 1,35,456 ಮಂದಿ ಮಹಿಳೆ ಹಾಗೂ 36 ಮಂದಿ ಇತರೆ ಮತದಾರರು ಸೇರಿದಂತೆ ಒಟ್ಟು 2,12,500 ಮತದಾರರಿದ್ದು, ಈ ಪೈಕಿ 1,404 ಮಂದಿ ವಿಕಲಚೇತನ ಮತದಾರರಿದ್ದು, 528 ವಿಐಪಿ, 48 ಸೇವಾ, 4,580 ಯುವ, 85 ವರ್ಷ ಮೇಲ್ಪಟ್ಟ 2,649 ಮಂದಿ ಮತದಾರರದ್ದಾರೆ” ಎಂದು ತಿಳಿಸಿದರು.
“ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವರ್ಗಾವಣೆ/ಸ್ಥಳಾಂತರಗೊಂಡ, ಎರಡು ಬಾರಿ ನಮೂದಾಗಿರುವ, ಮೃತಪಟ್ಟಿರುವ ಮತದಾರರು ಸೇರಿದಂತೆ ಒಟ್ಟು 7,324 ಮಂದಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ” ಎಂದರು.
“ಚುನಾವಣಾ ಆಯೋಗವು ವಿಕಲಚೇತನರು ಹಾಗೂ 85 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತಪತ್ರಗಳ ಮೂಲಕ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಮನೆಯಿಂದಲೇ ಮತದಾನ ಮಾಡಲಿಚ್ಛಿಸುವ ವಿಕಲಚೇತನ ಹಾಗೂ 85+ ಮತದಾರರು ನಮೂನೆ 12ಡಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ನಮೂನೆ 12ಡಿ ಫಾರಂ ಭರ್ತಿ ಮಾಡಿ ಸಲ್ಲಿಸಿದವರಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶವಿರುವುದಿಲ್ಲ” ಎಂದು ಮಾಹಿತಿ ನೀಡಿದರು.
“ಚುನಾವಣಾ ಮಾದರಿ ನೀತಿ ಸಂಹಿತೆ ಸಮರ್ಪಕ ಅನುಷ್ಠಾನಕ್ಕಾಗಿ 21ಸೆಕ್ಟರ್ ಅಧಿಕಾರಿ, 3 ಎಸ್ಎಸ್ಟಿ ತಂಡ, 6ಎಫ್ಎಸ್ಟಿ ತಂಡ, 2 ವಿವಿಟಿ ತಂಡ, 2 ವಿಎಸ್ಟಿ ತಂಡ, 1 ಎಟಿ(ವೆಚ್ಚ)ತಂಡ ಹಾಗೂ ಚುನಾವಣಾ ಕರ್ತವ್ಯಕ್ಕಾಗಿ 940 ಪಿಆರ್ಓ/ಎಪಿಆರ್ಓ/ಪಿಓಗಳನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದರು.
“ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಶಾಂತಿಯುತವಾಗಿ ಮತದಾನ ಮಾಡಲು ಅನುವಾಗುವಂತೆ 97 ಸ್ಥಳಗಳಲ್ಲಿ 235(36 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ) ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಹಿಳೆಯರೇ ನಿರ್ವಹಿಸುವ 5 ಮತಗಟ್ಟೆ, ವಿಕಲಚೇತನ ಹಾಗೂ ಯುವ ಅಧಿಕಾರಿಗಳೇ ನಿರ್ವಹಿಸುವ ತಲಾ ಒಂದೊಂದು ಮತಗಟ್ಟೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದಲ್ಲದೆ ಎಲ್ಲ ಮತಗಟ್ಟೆಗಳಿಗೂ ಮೂಲಸೌಕರ್ಯ ಕಲ್ಪಿಸಲಾಗಿದೆ” ಎಂದರು.
“ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆಯಿಲ್ಲದ ₹50,000ಕ್ಕಿಂತ ಹೆಚ್ಚಿನ ಹಣ/ಸ್ವತ್ತು ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ನಗರದ ಬಟವಾಡಿ, ಶಿರಾ ಗೇಟ್ ಹಾಗೂ ಕುಣಿಗಲ್ ವೃತ್ತದ ಬಳಿ 3ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ 3 ಪಾಳಿ ಆಧಾರದಲ್ಲಿ ವಾರದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹೆಚ್ಚಿನ ನಿಗಾ ವಹಿಸಲು ಪ್ರತಿ ಚೆಕ್ಪೋಸ್ಟ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮೇಲುಸ್ತುವಾರಿಗಾಗಿ ಚೆಕ್ಪೋಸ್ಟ್ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಕಮ್ಯಾಂಡ್ ಸೆಂಟರ್, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಪಾಲಿಕೆ ಕಚೇರಿಗೆ ಸಂಪರ್ಕ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
“ನಗರ ವ್ಯಾಪ್ತಿಯಲ್ಲಿ ಕಳೆದ ಬಾರಿ 120 ಮತಗಟ್ಟೆಗಳಲ್ಲಿ ಶೇ.65 ಹಾಗೂ 1ಮತಗಟ್ಟೆಯಲ್ಲಿ ಶೇ.50ಕ್ಕಿಂತ ಕಡಿಮೆ ಮತದಾನವಾಗಿದ್ದು, ಈ ಮತಗಟ್ಟೆ ವ್ಯಾಪ್ತಿಯ ಎಲ್ಲ ಮನೆಗಳಿಗೂ ಭೇಟಿ ನೀಡಿ ಕಡ್ಡಾಯ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಯಲ್ಲದೆ, ಮತದಾನಕ್ಕಾಗಿ ಯುವ ಜನರನ್ನು ಸೆಳೆಯಲು ಸ್ವೀಪ್ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ರಂಗೋಲಿ, ಅಡುಗೆ ಸ್ಪರ್ಧೆ ಹಾಗೂ ಪುರುಷರಿಗಾಗಿ ಕ್ರಿಕೆಟ್, ಬೈಕ್ ರ್ಯಾಲಿ, ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗುವುದು” ಎಂದು ಹೇಳಿದರು.
“ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕ ದೂರು/ಸಲಹೆ/ಅಭಿಪ್ರಾಯಗಳನ್ನು ನೀಡಲು ಕಂಟ್ರೋಲ್ ರೂಂ ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ 0816-2272200 /9449872599ಕ್ಕೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬಹುಸಂಖ್ಯಾತ ಪರಿಶಿಷ್ಟ ಸಮುದಾಯದವರು ಸಿಎಂ ಆಗಬೇಕು: ಜ್ಞಾನಪ್ರಕಾಶ್ ಸ್ವಾಮೀಜಿ
“ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿಂದು ಮೊದಲ ಇವಿಎಂ ಮತ್ತು ವಿವಿಪ್ಯಾಟ್ಗಳ ರ್ಯಾಂಡಮೈಸೇಷನ್ ನಡೆಸಲಾಗಿದ್ದು, ಚುನಾವಣೆಗೆ ಬಳಸಲು 235 ಮತಗಟ್ಟೆಗಳಿಗೆ 282 ಕಂಟ್ರೋಲ್ ಯುನಿಟ್, 282 ಬ್ಯಾಲೆಟ್ ಯೂನಿಟ್ ಹಾಗೂ 305 ವಿವಿ ಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಸದರಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿಪ್ಯಾಟ್ಗಳನ್ನು ನಗರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲಾಗುವುದು” ಎಂದು ತಿಳಿಸಿದರು.