ಧರ್ಮದ ಹೆಸರಿನಲ್ಲಿ ಎಲ್ಲಡೆ ದ್ವೇಷ ಬಿತ್ತಲಾಗುತ್ತಿದೆ. ಧಾರ್ಮಿಕ ದ್ವೇಷ ವಿರುದ್ಧ ‘ದ್ವೇಷ ಅಳಿಸೋಣ ದೇಶ ಉಳಿಸೋಣ’ ಎಂಬ ಅಭಿಯಾನವನ್ನು ನ.1 ರಿಂದ ಆರಂಭಿಸಿದ್ದೇವೆ. ಅಭಿಯಾನವು ನ.10ರವರೆಗೆ ರಾಜ್ಯಾದ್ಯಂತ ನಡೆಯಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಷರೀಫ್ ತಿಳಿಸಿದ್ದಾರೆ.
ಅಭಿಯಾನದ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಧರ್ಮದ ಹೆಸರಲ್ಲಿ ದ್ವೇಷ ಹುಟ್ಟಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹರಡಿ ಜನರ ನೆಮ್ಮದಿ ಕೆಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕೆಲವರು ಇದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಆತಂಕ ವ್ಯಕ್ತಪಡಿಸಿದರು.
“ಸ್ವಾರ್ಥ ರಾಜಕಾರಣಿಗಳು ಅಧಿಕಾರ ಭದ್ರಪಡಿಸಿಕೊಳ್ಳಲು ಜನರ ನಡುವೆ ದ್ವೇಷದ ಕಿಚ್ಚು ಹಚ್ಚುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ನಮ್ಮ ಕನ್ನಡನಾಡಿನಲ್ಲಿ ಪ್ರಚೋದನಕಾರಿ ಭಾಷಣಗಳು ವ್ಯಾಪಕವಾಗಿ ನಡೆಯುತ್ತಿವೆ. ಇದರ ಪರಿಣಾಮವಾಗಿ ಜಾತಿ ಮತ್ತು ಕೋಮು ಸಂಘರ್ಷ ನಡೆದು ಅಮಾಯಕರ ಕೊಲೆಯಲ್ಲಿ ಮುಕ್ತಾಯವಾಗುತ್ತಿದೆ. ಇದು ರಾಜ್ಯದ ಸೌಹಾರ್ದ ವಾತಾವರಣ ಮತ್ತು ಅಭಿವೃದ್ಧಿಗೆ ಮಾರಕ” ಎಂದು ವಿವರಿಸಿದ್ದಾರೆ.
“ಸಮಾಜದಲ್ಲಿ ಅಶಾಂತಿಯ ವಾತಾವರಣ ಇದ್ದರೆ ಕನ್ನಡಿಗರು ನೆಮ್ಮದಿಯಿಂದ ಬದುಕಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪರಿಸ್ಥಿತಿಯ ಗಂಭೀರತೆ ಅರಿತು ರಾಜ್ಯದ ನಾಗರಿಕರಲ್ಲಿ ದ್ವೇಷ ರಾಜಕೀಯ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಸ್ಥಾನಮಾನ ಕುಗ್ಗುತ್ತಿರುವ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಭಿಯಾನದಲ್ಲಿ ಮೌಲ್ಯಾಧಾರಿತ ರಾಜಕೀಯ, ಪ್ರೀತಿ, ಶಾಂತಿ ಸಹೋದರತೆ ಭಾವ ಹರಡಿ ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ದ್ವನಿ ಎತ್ತಲು ಪ್ರೇರೇಪಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.