ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ರಾಶಿ ಮಾಡಿಟ್ಟಿದ್ದ ಅವಶ್ಯ ಜಲ್ಲಿ ಕಲ್ಲುಗಳ ನಡುವೆ ಉಳಿದಿದ್ದ ಜೀವಂತ ಜಿಲೆಟಿನ್ ಕಡ್ಡಿ ಬಗ್ಗೆ ಅರಿಯದ ವಿದ್ಯಾರ್ಥಿಯೊಬ್ಬ ಕುತೂಹಲದಲ್ಲಿ ಜಿಲೆಟಿನ್ ಕಡ್ಡಿ ಮುಟ್ಟಿದಾಗ ಸ್ಫೋಟಗೊಂಡ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
ಗುಬ್ಬಿ ತಾಲೂಜಿನ ಸಿ.ಎಸ್.ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಕೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಗೊಂಡ ವಿದ್ಯಾರ್ಥಿಯನ್ನು ಮೋನಿಶ್ ಗೌಡ(15) ಎಂದು ಗುರುತಿಸಲಾಗಿದೆ.
ಇಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ದಸರಾ ರಜೆ ಹಿನ್ನೆಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸ್ಪೆಷಲ್ ಕ್ಲಾಸಿಗಾಗಿ ಆಗಮಿಸುತ್ತಿದ್ದ ಸಮಯದಲ್ಲಿ ಇಡಗೂರು ಗ್ರಾಮದ ವಿದ್ಯಾರ್ಥಿ ಮೋನಿಶ್ ಗೌಡ, ಕಲ್ಲು ಬಂಡೆ ಚೂರುಗಳ ಮಧ್ಯೆ ಕಂಡ ವೈರ್ ಸಹಿತ ಇದ್ದ ಜಿಲೆಟಿನ್ ಕಡ್ಡಿ ಕಂಡು ಕುತೂಹಲದಿಂದ ತೆಗೆದುಕೊಂಡಿದ್ದಾನೆ.
ಶಾಲಾ ಆವರಣಕ್ಕೆ ತೆರಳಿದ ನಂತರ ಬಿಸಿಯಾದ ಅನುಭವಕ್ಕೆ ಭಯಗೊಂಡು ಜಿಲೆಟಿನ್ ಕಡ್ಡಿ ಎಸೆಯಲು ಮುಂದಾದಾಗ ಸ್ಫೋಟಗೊಂಡು ಬಲಗೈ ಬೆರಳುಗಳು ತುಂಡಾಗಿರುವುದಾಗಿ ತಿಳಿದು ಬಂದಿದೆ. ಸುಮಾರು ಒಂದು ಕಿಮೀ ಸುತ್ತಳತೆಯಲ್ಲಿ ಇಡೀ ಗ್ರಾಮಕ್ಕೆ ಕೇಳಿಸಿದ ಸ್ಫೋಟದ ಶಬ್ದ ಇಡೀ ಗ್ರಾಮಸ್ಥರಿಗೆ ಆತಂಕ ತಂದಿತ್ತು.

ಇಡಗೂರು ಗ್ರಾಮ ಪಂಚಾಯಿತಿ ಮೂಲಕ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಕೆಲಸ ಆರಂಭಿಸಿ ಅಲ್ಲಿನ ಹಳ್ಳ ಮುಚ್ಚಲು ಬೆಳ್ಳೂರು ಕ್ರಾಸ್ ಸಮೀಪದಿಂದ ತಂದ ಬಂಡೆ ಕಲ್ಲುಗಳ ರಾಶಿಯಲ್ಲಿ ವೈರ್ ಸಹಿತ ಜಿಲೆಟಿನ್ ಕಡ್ಡಿಗಳು ಕಾಣುತ್ತಿದ್ದು, ಈ ಬಂಡೆ ಕಲ್ಲುಗಳ ಮಧ್ಯೆ ಕಾಣುವ ವೈರ್ ಕುತೂಹಲದಲ್ಲಿ ಬಾಲಕ ಮುಟ್ಟಿದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದ ಕೂಡಲೇ ಸ್ಪೆಷಲ್ ಕ್ಲಾಸಿಗಾಗಿ ಆಗಮಿಸಿದ್ದ ಮಕ್ಕಳು, ಶಿಕ್ಷಕರು ಆತಂಕದಲ್ಲಿದ್ದರು. ಭಯದ ವಾತಾವರಣ ಮಧ್ಯೆ ಕೂಡಲೇ ಗಾಯಾಳು ವಿದ್ಯಾರ್ಥಿಯನ್ನು ತುಮಕೂರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು, ಚಿಕಿತ್ಸೆಗೆ ದಾಖಲು ಮಾಡಲಾಯಿತು.

ಘಟನೆ ಬಗ್ಗೆ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಸಿಪಿಐ ಗೋಪಿನಾಥ್ ತಕ್ಷಣ ಘಟನೆ ನಡೆದ ಸ್ಥಳ ಪರಿಶೀಲಿಸಿದರು.ಇನ್ನೂ ಜೀವಂತ ಜಿಲೆಟಿನ್ ಕಡ್ಡಿ ಇರುವ ಬಗ್ಗೆ ಖಚಿತ ಮಾಡಿಕೊಂಡು ಕೂಡಲೇ ಈ ಕಲ್ಲು ರಾಶಿ ಸುತ್ತಲಿನ ನೂರು ಮೀಟರ್ ನಿರ್ಬಂಧ ವಿಧಿಸಿದ್ದು, ಸುರಕ್ಷತಾ ಕ್ರಮವಾಗಿ ಮರಳು ತಂದು ಹಾಕಿಸಿದ್ದಾರೆ. ಜಿಲೆಟಿನ್ ಕಡ್ಡಿ ಕಂಡ ಎಲ್ಲ ಕಲ್ಲು ಬಂಡೆ ರಾಶಿಯನ್ನು ಸುರಕ್ಷಿತವಾಗಿ ಹೊರಗೆ ತೆಗೆಯಲು ಸೂಚನೆ ನೀಡಿದ್ದಾರೆ.
ಸ್ಥಳೀಯ ಪಂಚಾಯಿತಿ ಸದಸ್ಯ ಸುಶಾಂತಗೌಡ ಈ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಬಗ್ಗೆ ತಿಳಿದು ಪೊಲೀಸರು ಕೂಡಲೇ ಸ್ಥಳಕ್ಕೆ ಬರಲು ಸೂಚಿಸಿ ಗಾಯಾಳು ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನಡೆಸಲು ಸೂಚಿಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡರು.
ಇದನ್ನು ಓದಿದ್ದೀರಾ? ಕಲಬುರಗಿ | ಶೈಕ್ಷಣಿಕ ಸುಧಾರಣಾ ಸಮಿತಿಗೆ ಗುರುರಾಜ ಕರಜಗಿ ನೇಮಕ ಖಂಡನೀಯ: ವೆಲ್ಪೇರ್ ಪಾರ್ಟಿ
ಸ್ಥಳಕ್ಕೆ ಭೂ ಮತ್ತು ಗಣಿಗಾರಿಕೆ ಉಪ ನಿರ್ದೇಶಕ ಲೋಕೇಶ್ ಕುಮಾರ್ ಹಾಗೂ ಭೂ ವಿಜ್ಞಾನಿ ಸಂತೋಷ್ ಕುಮಾರ್ ಜೆಲಟಿನ್ ಕಡ್ಡಿ ಬಗ್ಗೆ ಪರಿಶೀಲನೆ ನಡೆಸಿದರು. ತಾಪಂ ಇಓ ಶಿವಪ್ರಕಾಶ್, ಕಂದಾಯ ನಿರೀಕ್ಷಕಿ ಪ್ರಮೀಳಾ, ಗ್ರಾಮ ಲೆಕ್ಕಿಗ ಅಭಿಷೇಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

