ತುಮಕೂರು ಸಮರ್ಪಕ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲಗೊಂಡ ಬೆಸ್ಕಾಂ ಸುಟ್ಟ ಟಿಸಿ ಬದಲಿಸುವಲ್ಲಿ ಸಂಪೂರ್ಣ ಬೇಜವಾಬ್ದಾರಿ ತೋರುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಜೊತೆಗೆ ಸಿಬ್ಬಂದಿ ಕೊರತೆ ಕಾರಣ ನೀಡಿ ಗುಬ್ಬಿ ತಾಲೂಕಿನ 17 ಮಂದಿ ಸಿಬ್ಬಂದಿಯನ್ನು ಬೇರೆಡೆಗೆ ನಿಯೋಜನೆ ಮಾಡಿದೆ. ಜವಾಬ್ದಾರಿ ಹೊತ್ತ ಎಸ್ಒ ಅಧಿಕಾರಿಗಳಿಗೆ ಒಂದು ಕಚೇರಿ ಇಲ್ಲದೆ ರೈತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಂಪೂರ್ಣ ವೈಫಲ್ಯ ಕಂಡ ಬೆಸ್ಕಾಂ ಕೂಡಲೇ ಎಚ್ಚೆತ್ತು ಕೊಳ್ಳದಿದ್ದರೆ ರೈತ ವರ್ಗದ ಆಕ್ರೋಶ ಕಟ್ಟೆ ಒಡೆಯಲಿದೆ.
ಸುಡು ಬಿಸಿಲಿನ ಪ್ರಸಕ್ತ ಬೇಸಿಗೆ ಕಾಲ ಪ್ರತೀ ವರ್ಷಕ್ಕಿಂತ ಅತ್ಯಧಿಕ ಉಷ್ಣಾಂಶ ಕಂಡಿದೆ. ಕೃಷಿಕರ ತೋಟ, ಹೊಲ, ಗದ್ದೆಗಳು ಸಂಪೂರ್ಣ ತೇವಾಂಶ ಕಳೆದುಕೊಳ್ಳುತ್ತಿದ್ದು, ಹನಿ ಹನಿ ನೀರಿಗೆ ಹಾತೊರೆಯುತ್ತಿವೆ. ಇವೆಲ್ಲಾ ಕಂಡ ರೈತನ ಮನಸ್ಸು ಕೂಡಾ ಜಿಗುಪ್ಸೆಗೆ ಒಳಗಾಗಿದೆ. ನೀರಿಗಾಗಿ ಪರದಾಡುವ ರೈತರಿಗೆ ಸೂಕ್ತ ಕರೆಂಟ್ ಸಹ ಇಲಾಖೆ ನೀಡುತ್ತಿಲ್ಲ. ಕರೆಂಟ್ ಸ್ಥಗಿತಗೊಳ್ಳುವ ಸಮಯಕ್ಕಿಂತ ಎಷ್ಟು ಸಮಯ ಕರೆಂಟ್ ಇತ್ತು ಎಂಬ ಲೆಕ್ಕ ಹಾಕುವ ದುಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ದಿನಗಟ್ಟಲೆ ವಿದ್ಯುತ್ ಸ್ಥಗಿತ ಮಾಡುವ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ದುರಸ್ಥಿ ಮಾಡುವ ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ. ಕೊರತೆಗೆ ಮೊದಲ ಕಾರಣ ಗುಬ್ಬಿಯಿಂದ ತುಮಕೂರಿಗೆ ನಿಯೋಜನೆಗೊಂಡ 17 ಮಂದಿ ಸಿಬ್ಬಂದಿ ಲೆಕ್ಕ ಮಾತ್ರ ಇಲ್ಲಿದೆ. ಆದರೆ, ರೈತರ ದೂರು ಕೇಳುವವರಿಲ್ಲ. ಸಂಬಂಧಪಟ್ಟ ಎಸ್ಒಗಳು ಮೊಬೈಲ್ ಕರೆಗೆ ಸಿಗುತ್ತಿಲ್ಲ. ಮೇಲಾಧಿಕಾರಿಗಳು ಕಾಲ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಗಂಭೀರ ಆರೋಪ ಮಾಡಿದ್ದು, ನಮ್ಮಲ್ಲಿನ ದುರಸ್ಥಿ ಕಾರ್ಯ ನಿರ್ವಹಿಸಬೇಕಾದ ಸಿಬ್ಬಂದಿ ಬೇರೆಡೆ ಕೆಲಸ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ಇಲ್ಲಿ ಸುಟ್ಟ ಟಿಸಿ ಬದಲಿಸಲು ಹತ್ತು ದಿನ ಕಳೆದರೂ ಕೆಲಸ ಆಗುತ್ತಿಲ್ಲ. ದೂರು ಆಲಿಸಲು ಲೈನ್ ಮ್ಯಾನ್ ಎರಡು ದಿನ, ಎಸ್ಒ ಅಧಿಕಾರಿ ಎರಡು ದಿನ, ಎಇಇ ಎರಡು ದಿನ ಹೀಗೆ ಕಾಲ ಕಳೆಯುತ್ತಾರೆ ಎಂದು ದೂರಿದರು.
ಕರೆ ಮಾಡಿದರೆ ರಿಸೀವ್ ಮಾಡದ ಅಧಿಕಾರಿಗಳನ್ನು ಹುಡುಕಿ ಹೊರಟರೆ ಕೈಗೆ ಸಿಗೋದಿಲ್ಲ. ಅತೀ ಹೆಚ್ಚು ಜವಾಬ್ದಾರಿ ಹೊತ್ತ ಎಸ್ಒ ಅಧಿಕಾರಿಗಳಿಗೆ ಅವರದೇ ಒಂದು ಕಚೇರಿಯೂ ಇಲ್ಲ. ನಿಶ್ಚಿತ ಒಂದು ಟೇಬಲ್ ಕುರ್ಚಿ ಅವರಿಗಿಲ್ಲ. ಮರದ ನೆರಳಲ್ಲಿ ನಿಂತು ರೈತರನ್ನು ಸಂಪರ್ಕಿಸುವ ದುಸ್ಥಿತಿ ಕಂಡು ಬರುತ್ತಿದೆ. ಗುಬ್ಬಿ ಬೆಸ್ಕಾಂ ಕಚೇರಿಯಲ್ಲಿ ಎರಡೂ ವರ್ಷವಾದರೂ ಉಪಯೋಗಕ್ಕೆ ಬಾರದ ಎಸ್ಒ ಅಧಿಕಾರಿಗಳ ಕಚೇರಿ ತೆರೆಯುವ ಮನಸ್ಥಿತಿ ಕಾಣುತ್ತಿಲ್ಲ. ರೈತರ ದೂರು ಕೇಳುವಂತಹ ಸಿಬ್ಬಂದಿ ಸಿಗದೇ ಬೇಸತ್ತ ರೈತರು ದಿಢೀರ್ ಧರಣಿ ಮಾಡಿದ ನಿದರ್ಶನ ಸಾಕಷ್ಟಿದೆ ಎಂದು ರೈತ ಸಂಘ ಬೆಸ್ಕಾಂ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದೆ.
ಗುಬ್ಬಿ ಸಮೀಪದ ಚಿಕ್ಕೋನಹಳ್ಳಿಪಾಳ್ಯ ಗ್ರಾಮದಲ್ಲಿ ಟಿಸಿ ಸುಟ್ಟ ಏಳು ದಿನ ಕಳೆದಿದೆ. ಇನ್ನೂ ಯಾರೊಬ್ಬ ಅಧಿಕಾರಿ ಇತ್ತ ಸುಳಿದಿಲ್ಲ. ಕೂಗಳತೆ ದೂರದ ಹಳ್ಳಿಗೆ ಈ ಸ್ಥಿತಿ ಇದೆ. ಇನ್ನು ತಾಲೂಕಿನ ಗಡಿ ಭಾಗದ ಹಳ್ಳಿಗರ ಪರಿಸ್ಥಿತಿ ಹೇಳತೀರದಾಗಿದೆ. ಓವರ್ ಲೋಡ್, ಟ್ರಿಪ್ ಅನ್ನೋದು ಕಸಬ ಹೋಬಳಿಯಲ್ಲಿ ಮಾಮೂಲಿಯಾಗಿದೆ. ಸರ್ಕಾರವೇ ರೈತರಿಗೆ ಏಳು ಗಂಟೆ ಕರೆಂಟ್ ನೀಡುವುದಾಗಿ ಹೇಳುತ್ತಿದೆ. ಆದರೆ, ಗುಬ್ಬಿ ಬೆಸ್ಕಾಂ ಇಲಾಖೆ ನಮ್ಮ ರೈತರಿಗೆ ಮೂರು ಗಂಟೆ ಸಹ ಅಚ್ಚುಕಟ್ಟಾಗಿ ಕರೆಂಟ್ ನೀಡುತ್ತಿಲ್ಲ. ಹೀಗೆ ಮುಂದುವರಿದಲ್ಲಿ ಬೇಸಿಗೆ ಕಾಲದಲ್ಲಿ ರೈತನ ಬೆಳೆಗಳು ಒಣಗಿ ನಿಲ್ಲುತ್ತದೆ. ಹಳ್ಳಿಯಿಂದ ರೈತರು ಗುಳೆ ಹೋಗುವುದು ಖಚಿತ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.