ಅಂಬೇಡ್ಕರ್ ಬರೆದ ಸಂವಿಧಾನದಿಂದ ಯುವಜನರನ್ನು ಅಂಬೇಡ್ಕರ್ ಬಯಸಿದ ಸಂವಿಧಾನದ ಕಡೆಗೆ ನಡೆಸುವುದು ನಮ್ಮ ಜವಾಬ್ದಾರಿ ಎಂದು ಹಿರಿಯ ಪತ್ರಕರ್ತ ಶಿವಸುಂದರ್ ಹೇಳಿದರು.
ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಜನಸ್ಪಂದನ ಟ್ರಸ್ಟ್ ಹಾಗೂ ತುಮಕೂರು ವಿವಿ ಸಹಯೋಗದಲ್ಲಿ ಆಯೋಜಿಸಿದ್ದ ‘ಸಂವಿಧಾನ ಅರಿವು’ ಕಾರ್ಯಾಗಾರದಲ್ಲಿ ಮಾತನಾಡಿದರು.
“ನನ್ನ ಸಾಮಾಜಿಕ-ಆರ್ಥಿಕ ಹಕ್ಕುಗಳು ಎಲ್ಲಿವೆ?(Where are my socio-economic rights?) ಎನ್ನುವುದು ಅಂಬೇಡ್ಕರ್ ಕೇಳಿದ ಮಹತ್ವದ ಪ್ರಶ್ನೆ. ಈ ಪ್ರಶ್ನೆ ಇಂದಿಗೂ ಜೀವಂತವಿದೆ. ಪ್ರಶ್ನಿಸುವುದು ಬಹಳ ಮುಖ್ಯ. ಯಾರನ್ನೂ ಒಮ್ಮೆಗೇ ನಂಬಬಾರದು. ಇದೇ ಪ್ರಜಾಪ್ರಭುತ್ವದ ಅರ್ಥ ಮತ್ತು ಪ್ರಜಾಪ್ರಭುತ್ವ ನಮಗೆ ಕೊಟ್ಟಿರುವ ಅಧಿಕಾರ. ನಮ್ಮ ಪ್ರಧಾನ ನಾಗರಿಕತೆಯಲ್ಲಿ ಸಮಾನತೆ ಎಂಬುದು ಇರಲಿಲ್ಲ. ಇದಕ್ಕೆ ವಿರುದ್ಧವಾಗಿ ಬುದ್ಧ, ಬಸವ ಮೊದಲಾದವರು ಸಮಾನತೆಯನ್ನು ಬೋಧಿಸಿದರು. ಸಂವಿಧಾನ ಮೊದಲ ಬಾರಿಗೆ ʼನಾವೆಲ್ಲರೂ ಸಮಾನರುʼ ಎಂದು ಅಧಿಕೃತವಾಗಿ ಘೋಷಿಸಿತು. ಹುಟ್ಟು ನಮ್ಮ ಭವಿಷ್ಯವನ್ನು ನಿರ್ಧರಿಸಬಾರದು ಎಂಬುದು ನಮ್ಮ ಸಂವಿಧಾನದ ಆಶಯವೂ ಹೌದು” ಎಂದರು.
“ಅಸಮಾನತೆಯನ್ನೇ ಉಸಿರಾಡುತ್ತಿದ್ದ ನಮ್ಮ ದೇಶದಲ್ಲಿ ನಾಗರಿಕರಾಗಿ ನಾವೆಲ್ಲರೂ ಸಮಾನರು ಎನ್ನುವ ಪರಿಕಲ್ಪನೆ ಬಹಳ ಕ್ರಾಂತಿಕಾರಕವಾದದ್ದು. ಅಂಬೇಡ್ಕರ್ ಅವರು ತಮ್ಮ ಕೊನೆ ಭಾಷಣದಲ್ಲಿ ಹೇಳುವ ಕೆಲವು ಮಾತುಗಳು ನಮ್ಮ ಸಂವಿಧಾನದ ಪ್ರಸ್ತಾವನೆಯಷ್ಟೇ ಮುಖ್ಯವಾದವು. ಇದು ಸಂವಿಧಾನ ಬರೆದ ನಂತರ ಅಂಬೇಡ್ಕರ್ ದೇಶದ ಜನತೆಗೆ ನೀಡಿದ ಗಂಭೀರ ಎಚ್ಚರಿಕೆ ಇದು” ಎಂದರು.
“ನಾವು ಅನುಸರಿಸಿಕೊಂಡು ಹೋಗುವ ಸಂಸ್ಥೆಗಳ ಕಾರಣದಿಂದಾಗಿ ಅಸಮಾನತೆ ಹಾಗೆಯೇ ಮುಂದುವರೆಯುತ್ತಿದೆಯೆಂದು ಅಂಬೇಡ್ಕರ್ ಹೇಳುತ್ತಾರೆ. ಬ್ರಾಹ್ಮಣಶಾಹಿ ವ್ಯವಸ್ಥೆ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳೆರಡೂ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಪೋಷಿಸುತ್ತಲೇ ಇರುತ್ತವೆ. ಇವುಗಳಲ್ಲಿ ಸಮಾನತೆ ಬರಹ ಹೊರತು ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ” ಎಂದು ಹೇಳಿದರು.
“ಹಿಂದೂ ಧರ್ಮದ ಒಳಗೆ ನಾಗರಿಕ ಸುಧಾರಣೆ ಸಾಧ್ಯವಿಲ್ಲ. ಏಕೆಂದರೆ, ಹಿಂದೂ ಧರ್ಮ ನಿಂತಿರುವುದೇ ಜಾತಿಗಳ ಮೇಲೆ ಮತ್ತು ಜಾತಿ ವ್ಯವಸ್ಥೆ ನಿಂತಿರುವುದೇ ಕ್ರೂರವಾದ, ಅಮಾನವೀಯವಾದ ಅಸಮಾನತೆ ಮತ್ತು ಅಸ್ಪೃಶ್ಯತೆಯ ಮೇಲೆ. ಹಾಗಾಗಿಯೇ ಅಂಬೇಡ್ಕರ್ ಇದರಿಂದ ಹೊರ ಹೋಗುವುದಾಗಿ ಘೋಷಿಸಿದರು” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಅಂಬೇಡ್ಕರ್ ಅರ್ಥವಾಗದೆ ಭಾರತ ಅರ್ಥವಾಗುವುದಿಲ್ಲ: ಪ್ರಾಧ್ಯಾಪಕ ಡಾ. ಶ್ರೀನಿವಾಸ್
“ನಮ್ಮ ದೇಶದಲ್ಲಿ ಅಂಬೇಡ್ಕರ್ ಸಂವಿಧಾನವಿದ್ದರೆ, ಇಂದಿಗೂ ನಮ್ಮಮನೆಗಳಲ್ಲಿ ಮನುವಿನ ಸಂವಿಧಾನವಿದೆ. ನಮ್ಮ ಪೊಲಿಟಿಕಲ್ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವೂ ಜಾರಿಗೆ ಬರಬೇಕು. ಕೇಲವ ರಾಜಕೀಯ ಪ್ರಭುತ್ವದಿಂದ ಸ್ತ್ರೀಪುರುಷ ಅಸಮಾನತೆ, ಜಾತಿ ಅಸಮಾನತೆ ನಿವಾರಣೆಯಾಗುವುದಿಲ್ಲ. ಅಸಮಾನತೆ ಜೀವಂತವಿರುವಾಗ ಕೇವಲ ರಾಜಕೀಯ ಪ್ರಜಾಪ್ರಭುತ್ವ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ” ಎಂದು ಹೇಳಿದರು.
“ಅಂಬೇಡ್ಕರ್ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಜಾರಿಗೆ ತರುವ ಬಹುದೊಡ್ಡ ಕನಸನ್ನು ಕಂಡಿದ್ದರು. ಅದಕ್ಕಾಗಿ ತಮ್ಮದೇ ಆದ ವಿಶಿಷ್ಟ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನೂ ಅಂಬೇಡ್ಕರ್ ಸೂಚಿಸಿದ್ದರು” ಎಂದು ತಿಳಿಸಿದರು.