ಪತ್ರಿಕೋದ್ಯಮ ಪ್ರಸ್ತುತದ ಕಾವಲು ದಾರಿಯಲ್ಲಿದ್ದು, ನೈಜ ಮತ್ತು ವಸ್ತುನಿಷ್ಠ ಸುದ್ದಿಗಳು ಕಣ್ಮರೆಯಾಗುತ್ತಿವೆ. ಇಂದು ತೇಜೋವದೆಂತಹ ಸುದ್ದಿಗಳು ಹೆಚ್ಚಾಗುತ್ತಿದ್ದು ಪತ್ರಕರ್ತರು ವಸ್ತುನಿಷ್ಠ ಮತ್ತು ಅನ್ವೇಷಣಾತ್ಮಕ ಸುದ್ದಿಗಳನ್ನು ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೀ ನಿ ಪುರುಷೋತ್ತಮ್ ಅವರು ತಿಳಿಸಿದರು.
ಎಸ್ಎಸ್ಐಟಿ ಕ್ಯಾಂಪಸ್ನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ರೇಡಿಯೋ ಸಿದ್ದಾರ್ಥ 90.8 ಬಾನುಲಿ ಕೇಂದ್ರದಿಂದ ಮಂಗಳವಾರ ಆಯೋಜನೆ ಮಾಡಲಾಗಿದ್ದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
“ಮಾಧ್ಯಮ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜನರ ಒಗ್ಗೂಡುವಿಕೆ ಯುವ ಬರಹಗಾರರ ಬರಹಗಳು ಸಮಸಮಾಜದ ನಿರ್ಮಾಣ ಮತ್ತು ಬದಲಾವಣೆಗೆ ಕಾರಣವಾಗಿದ್ದು, ಪತ್ರಕರ್ತರು ಸುದ್ದಿ ನೀಡುವ ಬರದಲ್ಲಿ ನ್ಯಾಯಸಮ್ಮತವನ್ನು ಮರೆಯುತ್ತಿದ್ದಾರೆ. ಹೀಗಾಗಬಾರದು ನ್ಯಾಯ ಮತ್ತು ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ನೀಡಬೇಕು. ಇಂದು ಡಿಜಿಟಲ್ ಮಾಧ್ಯಮ ಸ್ಪರ್ಧೆ ಒಡ್ಡುವ ತವಕದಲ್ಲಿ ನೀಡುತ್ತಿರುವ ಅನಾಹುತದ ಸುದ್ದಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದು, ಸೋಶಿಯಲ್ ಮೀಡಿಯಾಗಳು ಅವುಗಳ ನಿಲುವುಗಳನ್ನು ಬದಲಿಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ದಿನ.ಕಾಮ್ ತುಮಕೂರು ಜಿಲ್ಲಾ ವರದಿಗಾರ ಚಂದನ್ ಡಿ ಮಾತನಾಡಿ, “ಮಂಗಳೂರು ಸಮಾಚಾರ ಪತ್ರಿಕೆ ಪತ್ರಿಕಾ ದಿನಾಚರಣೆಗೆ ಪ್ರೇರಕ ಶಕ್ತಿಯಾಗಿದೆ. ಅಚ್ಚುಮಳೆ ಜೋಡಿಸಿ ಪತ್ರಿಕೆ ಮುದ್ರಣ ಮಾಡುತ್ತಿದ್ದ ಕಾಲಘಟ್ಟದಿಂದ ಇಂದಿನ ಡಿಜಿಟಲ್ ಆನ್ಲೈನ್ ಪತ್ರಿಕೆಗಳು ಹಲವು ಬದಲಾವಣೆಗಳನ್ನು ಕಂಡುಕೊಂಡಿವೆ. ಪತ್ರಿಕೆಗಳು ತನ್ನ ಬರಹದಿಂದಾಗಿ ಜನರ ಗಮನ ಸೆಳೆದು ಸಮಾಜದಲ್ಲಿ ಉಳಿದುಕೊಂಡಿವೆ. ಇಂದು ಡಿಜಿಟಲ್ ರೂಪದಲ್ಲಿ ಓದುವುದು ನೋಡುವುದು ಮತ್ತು ಕೇಳುವುದು ಜನರಿಗೆ ತುಂಬಾ ಹತ್ತಿರವಾದ ಸಮೂಹ ಮಾಧ್ಯಮವಾಗಿದೆ. ಆದರೆ ಇಲ್ಲಿ ವಿಶ್ವಾಸ ಕಳೆದುಕೊಳ್ಳುವ ಅನೇಕ ಸುದ್ದಿಗಳನ್ನು ಗಮನಿಸಬಹುದಾಗಿದೆ” ಎಂದು ಹೇಳಿದರು.
“ಡಿಜಿಟಲ್ ಮೀಡಿಯಾದಲ್ಲಿ ವಿಶ್ವಾಸ ಗಟ್ಟಿಗೊಳಿಸುವ ಅನೇಕ ಬದಲಾವಣೆಗಳು ಬರಬೇಕಾಗಿದೆ. ನಾಗರಿಕ ಪತ್ರಿಕೋದ್ಯಮ ಇಂದು ನವಮಾಧ್ಯಮಕ್ಕೆ ದಾಪುಗಾಲು ಇಡುತ್ತಿದ್ದು, ಸವಿಂಧಾನದ ಆಶಯಗಳನ್ನು ಈಡೇರಿಸುವಲ್ಲಿ ಈ ಡಿಜಿಟಲ್ ಮಾಧ್ಯಮ ಪ್ರಮುಖ ಪಾತ್ರ ವಹಿಸಬೇಕಾಗಿದೆ” ಎಂದು ತಿಳಿಸಿದರು.
ಈ ಸುದ್ದಿಓದಿದ್ದೀರಾ? ಪಕ್ಷದ ಶಿಸ್ತು ಉಲ್ಲಂಘನೆ: ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ಗೆ ಶೋಕಾಸ್ ನೋಟಿಸ್
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ ಟಿ ಮುದ್ದೇಶ್ ಮಾತನಾಡಿ, “ನಮ್ಮ ಅಧ್ಯಯನ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ ಪತ್ರಿಕಾ ದಿನಾಚರಣೆಯ ಅಂಗವಾಗಿ ನಮ್ಮ ವಿದ್ಯಾರ್ಥಿಗಳು ರೇಡಿಯೋ ಸಿದ್ದಾರ್ಥದಲ್ಲಿ ಅನೇಕ ಹಿರಿಯ ಪತ್ರಕರ್ತರೊಡನೆ ಚರ್ಚೆ ಸಂವಾದ ನಡೆಸಿ ಅವರ ಅನುಭವದ ಸಾರವನ್ನು ಕೇಳಿದ್ದಾರೆ. ಬದಲಾವಣೆ ಕಾಲಘಟ್ಟದಲ್ಲಿರುವ ನವ ಪತ್ರಿಕೋದ್ಯಮಕ್ಕೆ ದಾಪುಗಾಲಿಡುವ ನಮ್ಮ ವಿದ್ಯಾರ್ಥಿಗಳನ್ನು ಸುಸಜ್ಜಿತವಾಗಿ ತಯಾರು ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರುಗಳಾದ ಶ್ವೇತಾ ಎಂ ಪಿ, ನವೀನ್, ರವಿಕುಮಾರ್ ಸಿ ಹೆಚ್, ಗೌತಮ್, ಶಿವಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.