ಕವಿರಾಜಮಾರ್ಗ ಪ್ರಾತಿನಿಧಿಕ ಕೃತಿಯಾಗಿ, ಕನ್ನಡ ವರ್ಣಮಾಲೆಯನ್ನು ಉತ್ಕೃಷ್ಟಗೊಳಿಸಿದ ಕಾವ್ಯವಾಗಿ, ಕನ್ನಡವು ʼಸಹ ಅಸ್ತಿತ್ವʼವನ್ನು ಸಹಿಸುವ, ಒಪ್ಪಿಕೊಳ್ಳುವ ಗುಣವನ್ನು ವಿಶ್ಲೇಷಿಸುವ, ಶಾಸ್ತ್ರಗ್ರಂಥ ಬರೆಯುವ ವಿಧಾನವನ್ನು ಮರುದರ್ಶನ ಪಡಿಸುತ್ತಾ, ಕನ್ನಡದ ವಿವೇಕವನ್ನು ಮೇಳೈಸುವ ಕೃತಿಯಾಗಿ ಕನ್ನಡಿಗರ ಜನಮಾನಸದಲ್ಲಿ ಬೆರೆತಿದೆ ಎಂದು ಬರಹಗಾರ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ವಿವಿಯ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಶ್ರೀ ವಿಜಯ ವಿರಚಿತ ಕವಿರಾಜಮಾರ್ಗ- 125ʼ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
“ಸಹ ಅಸ್ತಿತ್ವವನ್ನು ಸಹಿಸುವ ಗುಣ ಕನ್ನಡಿಗರಲ್ಲಿದೆ. ಭಿನ್ನ ಅಸ್ತಿತ್ವಗಳನ್ನು ಕನ್ನಡಿಗರು ಒಪ್ಪಿದ್ದಾರೆ. ರಾಶಜ್ಯದಲ್ಲಿ ವಿಭಿನ್ನ ಧರ್ಮಗಳಿದ್ದವು. ಯಾವುದೇ ಧರ್ಮವು ಮತ್ತೊಂದು ಧರ್ಮವನ್ನು ಮುಗಿಸುವ ಪ್ರಯತ್ನ ಮಾಡಲಿಲ್ಲ. ನಮ್ಮಲ್ಲಿ ಕಲಹ ತುಂಬಾ ಕಡಿಮೆ. ಇದನ್ನೇ ಕವಿರಾಜಮಾರ್ಗ ಕೃತಿಯಲ್ಲಿ ಕೃತಿಕಾರ ಹೇಳಿದ್ದಾನೆ” ಎಂದರು.
“ಕನ್ನಡದಲ್ಲಿ ಕೃತಿಗಳು ಬರಬೇಕೆನ್ನುವ ಆಶಯವನ್ನು ಕವಿರಾಜಮಾರ್ಗ ಪ್ರಸ್ತುತಪಡಿಸುತ್ತದೆ. ಪಂಪನ ‘ವಿಕ್ರಮಾರ್ಜುನ ವಿಜಯ’ ಸ್ವಭಾವದಲ್ಲಿ ಮಹಾಕಾವ್ಯವಾಗಿದ್ದೂ, ವರ್ಣನೆ, ವಿವರಣೆಯ ಬದಲು ಧ್ವನಿ ಸಾಹಿತ್ಯದೊಂದಿಗೆ ಜನಸಾಮಾನ್ಯರನ್ನು ಮುಟ್ಟುವ ಕವಿರಾಜಮಾರ್ಗದ ಮಾರ್ಗವನ್ನು ಅನುಸರಿಸಿದೆ. ಕನ್ನಡ ತನ್ನ ಸ್ವಂತಿಕೆಯನ್ನು ಗಳಿಸಿಕೊಳ್ಳುವ ಮೀಮಾಂಸೆಯಾಗಿದೆ” ಎಂದರು.
“ಎಲ್ಲೂ ಹುಸಿಹೋಗದ ಅರ್ಥದಲ್ಲಿ ಭಾಷಾ ಪ್ರಯೋಗದೊಂದಿಗೆ 9ನೆಯ ಶತಮಾನದಲ್ಲಿ ಕನ್ನಡದ ಕೃತಿಶಕ್ತಿ ಹಳ್ಳವಾಗಿ ಆರಂಭವಾಗಿ, 12ನೇ ಶತಮಾನದಲ್ಲಿ ನದಿಯಾಯಿತು. 14ನೇ ಶತಮಾನದಲ್ಲಿ ದಾಸರು ಆಡು ಭಾಷೆಯ ಮೂಲಕ ಕನ್ನಡದ ಅಸ್ಮಿತೆಯನ್ನು, ಬಳಕೆಯನ್ನು ಪ್ರತಿಪಾದಿಸಿದರು. ಕಾವ್ಯವನ್ನು ಕುಳಿತು ಓದದೆಯೂ ಕಾವ್ಯಶಕ್ತಿಯನ್ನು ಪ್ರಕಾಶಿಸಿದರು” ಎಂದು ತಿಳಿಸಿದರು.
ಅನುಭವದ, ಅನುಭಾವದ ಕತೆಗಳಿಗೆ, ದೇವ ಭಾಷೆ, ಧರ್ಮ ಭಾಷೆ, ಶಾಸ್ತ್ರ, ಕಾವ್ಯ ಸಾಹಿತ್ಯಕ್ಕೆ, ಕೃತಿಗಳನ್ನು ರಚಿಸುವುದಕ್ಕೆ ಕನ್ನಡವೇ ಸಾಕೆಂದು ತೊರಿಸಿದವರು ರನ್ನ, ಪಂಪ, ದಾಸರು ಹಾಗೂ ಶರಣರು. ಗ್ರಂಥ ಪಠಣವನ್ನು ಮಾಡದೆ, ಹಲವಾರು ಕುಲಕಸುಬಿನ ಅನುಭವದಿಂದ ಕಾವ್ಯ ಸೃಷ್ಟಿಸಿದರು. ಬದುಕಿನ ಹಿರಿಮೆಯನ್ನು ಸಾರುವ ಕನ್ನಡಿಯೇ ಕನ್ನಡ ಭಾಷೆಯೆಂದು ತೋರಿಸಿದರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಸದರ ಅಮಾನತು ಪ್ರಜಾಪ್ರಭುತ್ವದ ಹತ್ಯೆ; ಎಸ್ಡಿಪಿಐ ಆಕ್ರೋಶ
ಕಾರ್ಯಕ್ರಮದಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ ಪ್ರಸನ್ನಕುಮಾರ್, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ ಶೇಟ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ರಾಷ್ಟ್ರೀಯ ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ನಾಗಭೂಷಣ ಬಗ್ಗನಡು ಇದ್ದರು.