ಕುವೆಂಪು ಅವರ ಮನುಕುಲದ ಹಿತ, ಸರಳತೆ, ಲೋಕ ಕಲ್ಯಾಣ, ಅಹಿಂಸೆ ಹಾಗೂ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಸಕಾರಾತ್ಮಕ ಚಿಂತನೆಗಳನ್ನು ಆತ್ಮದಲ್ಲಿ ಸ್ಥಾಪಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠವು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ವಿಶ್ವಮಾನವ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮನುಜಮತ ವಿಶ್ವಪಥದಂತಹ ಮಹಾನ್ ಚಿಂತನೆಗಳನ್ನು ಸಾರಿದ ಕುವೆಂಪು ಅವರ ವಿಚಾರ ಪ್ರವಾಹವನ್ನು ಚರ್ಚೆಯ ಮೂಲಕ ಕೇಂದ್ರೀಕರಿಸುವ ಕೆಲಸಗಳಾಗಬೇಕು. ಕುವೆಂಪು ಅವರ ಚಿಂತನೆಗಳಲ್ಲಿ, ಬರೆವಣಿಗೆಯಲ್ಲಿ ಸಾಂಸ್ಕೃತಿಕ ಮಹತ್ವ, ಸಂವೇದನಾಶೀಲತೆ ನೆಲೆಸಿತ್ತು. ಬಸವಣ್ಣ, ಬುದ್ಧ, ಅಕ್ಕಮಹಾದೇವಿ, ಕುಮಾರವ್ಯಾಸ ಹೀಗೆ ಕನ್ನಡ ಭಾಷಾ ಸಾಹಿತ್ಯಕ್ಕೆ ಪೂರಕವಾಗುವ ಎಲ್ಲ ಮಹನೀಯರ ಅಂಶಗಳನ್ನು ಕುವೆಂಪು ಅವರ ಸಾಹಿತ್ಯ ನೆಲೆಯಲ್ಲಿ ನಾವು ಕಾಣಬಹುದು” ಎಂದರು.
ಡಾ. ಡಿ ವಿ ಗುಂಡಪ್ಪ ಕನ್ನಡ ಆಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ ನಿತ್ಯಾನಂದ ಬಿ ಶೆಟ್ಟಿ ಮಾತನಾಡಿ, “ಕುವೆಂಪು ಅವರು ಲೋಕದ ಚಿಂತನೆಗಳನ್ನು ಭಾಷೆಯ ಮೂಲಕ ಪಲ್ಲಟಗೊಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದ ಅವರ ಕೃತಿಗಳು ಆಧುನಿಕ ಚಿಂತನೆಗಳಲ್ಲಿ ಹಾಗೂ ವೈಚಾರಿಕವಾಗಿ ನೆಲೆಗೊಂಡವು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಮಾತನಾಡಿ, “ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಕುವೆಂಪು ಅವರ ವಿಚಾರಧಾರೆಗಳು ಅವಶ್ಯಕ. ಅವರ ಚಿಂತನೆಗಳನ್ನು, ಪ್ರತಿ ಪದ ಪ್ರಯೋಗದ ಆಳ-ಅಗಲವನ್ನುಅಧ್ಯಯನ ಮಾಡಿ ಅರಿವಿಗೆ ತಂದುಕೊಳ್ಳಬೇಕು” ಎಂದು ಹೇಳಿದರು.
ತುಮಕೂರು ವಿವಿ ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ.ಗೀತಾ ವಸಂತ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಇದ್ದರು.