ಸುಪ್ರೀಂಕೋರ್ಟಿನ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕು. ಅಲ್ಲಿಯವರೆಗೆ ಸರಕಾರದ ನೇಮಕಾತಿಗಳಿಗೆ ತಡೆಯೊಡ್ಡಬೇಕು ಎಂದು ಆಗ್ರಹಿಸಿ ಮಾದಿಗ ಸಮೂಹಗಳ ಒಕ್ಕೂಟದಿಂದ ಪಕ್ಷಾತೀತವಾಗಿ ಸೋಮವಾರ ಬೃಹತ್ ತಮಟೆ ಚಳವಳಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳಿಂದ ಆಗಮಿಸಿದ್ದ ಮಾದಿಗ ಸಮುದಾಯದ ಬಂಧುಗಳು,ನಗರದ ಟೌನ್ಹಾಲ್ ಬಳಿ ಸಮಾವೇಶಗೊಂಡು,ಅಲ್ಲಿಂದ ನೂರಾರು ತಮಟೆ ಸದ್ದಿನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿ,ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾದಿಗ ದಂಡೋರದ ಪಾವಗಡ ಶ್ರೀರಾಮ್, ಶತ ಶತಮಾನಗಳಿಂದ ಶೋಷನೆ, ವಂಚನೆಗೆ ಒಳಗಾದ ಮಾದಿಗ ಸಮುದಾಯ, ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹೆಸರಿನಲ್ಲಿ ಸುಮಾರು ಮೂರು ದಶಕಗಳಿಂದ ರಾಜ್ಯಾದ್ಯಂತ ನಡೆಸಿದ ಹಲವು ರೀತಿಯ ವಿಶೇಷ ಹಾಗೂ ಉಗ್ರ ರೀತಿಯ ಪ್ರತಿಭಟನೆಗಳ ಪ್ರತಿಫಲವಾಗಿ 2003ರಲ್ಲಿ ಅಂದಿನ ಎಸ್.ಎಂ.ಕೃಷ್ಣ ಸರಕಾರ ಒಳಮೀಸಲಾತಿ ಆಯೋಗ ರಚಿಸಲಾಯಿತು. ಮೂವರು ನ್ಯಾಯಾಧೀಶರ ರಾಜೀನಾಮೆ ನಂತರ ನ್ಯಾ.ಎ.ಜೆ.ಸದಾಶಿವ ಆವರ ನೇತೃತ್ವದ ಆಯೋಗ ಸರಕಾರದ ನೌಕರವರ್ಗವನ್ನು ಬಳಸಿಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಿ 2012ರಲ್ಲಿ ವರದಿ ನೀಡಿದ್ದರೂ ಇದುವರೆಗೂ ವರದಿಯನ್ನು ಜಾರಿ ಮಾಡಲು ಸರಕಾರಗಳು ಹಿಂದೇಟು ಹಾಕುತ್ತಾ ಬಂದಿವೆ. 2024ರ ಆಗಸ್ಟ್ 01ರ ಸುಪ್ರಿಂ ಕೋರ್ಟ್ ತೀರ್ಪು ಸಹ ಒಳಮೀಸಲಾತಿ ಜಾರಿ, ಆಯಾಯ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಹೇಳಿದೆ. ಹಾಗಾಗಿ ಸರಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು.ಅಲ್ಲಿಯವರೆಗೆ ನೇಮಕಾತಿಗಳಿಗೆ ತಡೆ ಹಾಕಬೇಕೆಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗವು ಅಧಿಕ ಸಂಖ್ಯೆಯಲ್ಲಿಯಿದೆ ಎಂಬ ವಿಷಯವನ್ನು ಎಲ್ಲಾ ಆಯೋಗಗಳೂ ತಮ್ಮ ವಸ್ತುನಿಷ್ಠ ವರದಿಗಳಲ್ಲಿ ಸ್ಪಷ್ಟಿಕರಣ ನೀಡಿವೆ. 1976 ರ ಎಲ್.ಜಿ ಹಾವನೂರು ಆಯೋಗವು ತನ್ನ ವರದಿಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ಮಾದಿಗ ಜನಾಂಗದ ಜನಸಂಖ್ಯೆ ಶೇ.58 ಇರುತ್ತದೆ ಎಂಬ ವಿಷಯವನ್ನು ಸ್ಪಷ್ಟಪಡಿಸಿದೆ. ನ್ಯಾ.ಹೆಚ್.ಕಾಂತರಾಜ್ ಆಯೋಗವೂ ಸಹ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಮಾದಿಗರ ಜನಸಂಖ್ಯೆ ಅಧಿಕವಾಗಿದೆ ಎಂಬ ವಿಷಯವನ್ನು ಸ್ಪಷ್ಟಪಡಿಸಿದೆ.ಆದರೂ ದತ್ತಾಂಶಗಳ ಕೊರತೆಯ ನೆಪವೊಡ್ಡಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರವೂ ಸರಕಾರ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕೆಂಬುದು ಸಮಸ್ತ ಮಾದಿಗ ಸಮುದಾಯದ ಒತ್ತಾಯವಾಗಿದೆ ಎಂದರು.

ವೈದ್ಯ ಡಾ.ಲಕ್ಷ್ಮೀಕಾಂತ್ ಮಾತನಾಡಿ, 2011 ರ ಜನಗಣತಿಯ ವರದಿಯಂತೆ ಕರ್ನಾಟಕ ರಾಜ್ಯದಲ್ಲಿ ಪ,ಜಾ ಜನಸಂಖ್ಯೆ ಸುಮಾರು 1,04,74,992 ಒಂದು ಕೋಟಿ ನಲವತ್ತೆಂಟು ಲಕ್ಷ ಎಂದು ಅಂಕಿ ಅಂಶಗಳು ಹೇಳುತ್ತವೆ. ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಪತಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.17 ಕ್ಕೆ ಏರಿಸಿ ಹೊರಡಿಸಿದ ಸರಕಾರ ಆದೇಶದಂತೆ 6 ಲಕ್ಷ ಜನಸಂಖ್ಯೆಗೆ ಶೇ.1 ರಷ್ಟು ಮೀಸಲಾತಿಯ ದೊರೆಯುತ್ತದೆ. ಶೇ.17 ರ ಮೀಸಲಾತಿಯಲ್ಲಿ 32,62,390 ಜನಸಂಖ್ಯೆ ಹೊಂದಿರುವ ಮಾದಿಗ ಮತ್ತು ಅದರ ಸಂಬಂಧಿತ 29 ಜಾತಿಗಳಿಗೆ ಶೇ. 6 ರಷ್ಟು, 32,59,480 ಜನಸಂಖ್ಯೆಯ ಹೊಲೆಯ ಮತ್ತು ಅದರ ಸಂಬಂಧಿತ 26 ಜಾತಿಗಳಿಗೆ ಶೇ. 5.5 ರಷ್ಟು, 26,51,067 ಜನಸಂಖ್ಯೆಯ ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳಿಗೆ ಶೇ.4.5 ಮತ್ತು 58,557ರಷ್ಟಿರುವ ಇತರೆ ಅಸ್ಪೃಶ್ಯ ಜಾತಿಗಳಿಗೆ ಶೇ. 1 ರಷ್ಟು ಮೀಸಲಾತಿ ಯನ್ನು ನೀಡಲು ಶಿಫಾರಸ್ಸು ಮಾಡಿರುವ ಎಲ್ಲಾ ಸ್ಪಷ್ಟ ಮಾಹಿತಿ ಸರಕಾರದಲ್ಲಿದೆ.ಆದರೂ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುವುದು ಸರಿಯಲ್ಲ.ಕೂಡಲೇ ಜಾರಿ ಮಾಡಬೇಕು.ಒಂದು ವೇಳೆ ನಿರ್ಲಕ್ಷ್ಯ ತೋರಿದರೆ,2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪುನರರಾವರ್ತನೆಗೊಳ್ಳಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಒಳಮೀಸಲಾತಿ ಮಾದಿಗ ಸಮುದಾಯಗಳ ಬಹುದಿನಗಳ ಬೇಡಿಕೆ.ಚಿತ್ರದುರ್ಗದ ಐಕ್ಯತಾ ಸಮಾವೇಶ ಹಾಗೂ 2023ರ ಚುನಾವಣೆಯ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.ಸರಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದರೂ, ಸುಪ್ರಿಂಕೋರ್ಟಿನ ತೀರ್ಪು ಬಂದ ಎರಡು ತಿಂಗಳು ಕಳೆದರೂ ಈ ಬಗ್ಗೆ ಸ್ಪಷ್ಟ ನಿಲುವು ತಾಳದಿರುವುದು ದುರಾದೃಷ್ಟಕರ.ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರದಲ್ಲಿ ಉಳಿಯುವುದು ಕಷ್ಟವಾಗಲಿದೆ ಎಂಬ ಎಚ್ಚರಿಕೆಯನ್ನು ಈ ತಮಟೆ ಚಳುವಳಿಯ ಮೂಲಕ ನೀಡುತ್ತಿರುವುದಾಗಿ ತಿಳಿಸಿದರು.

ಮಾದಿಗ ದಂಡೋರದ ಕೊಡಿಯಾಲ ಮಹದೇವ ಮಾತನಾಡಿ, ಮಾದಿಗ ಸಮುದಾಯದ ಮೂರು ದಶಕಗಳ ಹೋರಾಟ ಇದಾಗಿದೆ.ಒಳಮೀಸಲಾತಿಗಾಗಿ ಎಲ್ಲಾ ರೀತಿಯ ಹೋರಾಟಗಳನ್ನು ಸಮುದಾಯ ಮಾಡಿದೆ.ಇದಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್ ಸಹ ತೀರ್ಪು ನೀಡಿದ್ದರೂ ದಲಿತಪರ ಎಂದು ಸಿದ್ದರಾಮಯ್ಯ ನೇತೃತ್ವದ ಸರಕಾರ ದತ್ತಾಂಶದ ನೆಪವೊಡ್ಡಿ ಹಿಂದೇಟು ಹಾಕುತ್ತಿದೆ.ಇದು ಸರಿಯಲ್ಲ ತೆಲಂಗಾಣದ ರೀತಿ ನೇಮಕಾತಿಗಳನ್ನು ಮುಂದೂಡಿ,ಒಳಮೀಸಲಾತಿ ಜಾರಿ ನಂತರ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಹೋರಾಟಗಾರ ಕೊಟ್ಟ ಶಂಕರ್,ಮಾರುತಿ ಗಂಗಹನುಮಯ್ಯ,ಡಾ.ಬಸವರಾಜು,ಕೇಬಲ್ ರಘು ಸೇರಿದಂತೆ ಹಲವರು ಹೋರಾಟಗಾರರನ್ನು ಕುರಿತು ಮಾತನಾಡಿದರು. ತಮಟೆ ಚಳವಳಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಡಿ.ಟಿ.ವೆಂಕಟೇಶ್,ರಾಜಸಿಂಹ,ನರಸೀಯಪ್ಪ,ನರಸಿಂಹಯ್ಯ,ಎಂ.ವಿ.ರಾಘವೇದ್ರಸ್ವಾಮಿ,ಸಿದ್ದೇಶ ನೆಗಲಾಲ್, ನಿವೃತ್ತ ಇಂಜಿನಿಯರ್ ಶಿವಕುಮಾರ್,ಯೋಗೀಶ್,ಸೋರೆಕುಂಟೆ,ಮಹಲಿಂಗಯ್ಯ,ಹನುಮಂತರಾಯಪ್ಪ,ಚೇಳೂರು ಶಿವನಂಜಪ್ಪ, ಬಂಡೆಕುಮಾರ್, ಡಾ.ಮುಕುಂದ್,ಡಾ.ಹನುಮಂತರಾಯಪ್ಪ,ಲಕ್ಷ್ಮೀರಂಗಯ್ಯ,ಡಾ.ಹುಲಿಕುಂಟೆಮೂರ್ತಿ,ಡಾ.ನರಸಿಂಹಮೂರ್ತಿ,ರಾಮಯ್ಯ,ನಾಗರಾಜು,ಕುಂದೂರು ಮುರುಳಿ, ವಿರೂಪಾಕ್ಷ ಡ್ಯಾಗೇರಹಳ್ಳಿ, ಗೂಳೂರು ಸಿದ್ದರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.