ಬೆಂಬಲ ಬೆಲೆಯಲ್ಲಿ ನಾಫೆಡ್ ಮೂಲಕ ಕೊಬ್ಬರಿ ಖರೀದಿಯನ್ನು ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಿದ್ದು, ಅದಕ್ಕೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಯಾವುದೇ ಕಾರಣ ನೀಡಿಲ್ಲ.
ಫೆಬ್ರವರಿ 1ರಿಂದ ನಾಫೆಡ್ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ನಿರ್ಧರಿಸಲಾಗಿತ್ತು. ಇದಕ್ಕೂ ಮುನ್ನ ಜನವರಿ 20ರಿಂದ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಈಗ ಎರಡನೇ ಬಾರಿಗೆ ಮುಂದೂಡಿದ್ದು, ಕೊಬ್ಬರಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.
“ಮಧ್ಯವರ್ತಿಗಳು, ವರ್ತಕರ ಹಾವಳಿ ತಪ್ಪಿಸುವ ಸಲುವಾಗಿ ತೆಂಗು ಬೆಳೆಯುವ ರೈತರಿಂದ ಬಯೋ ಮೆಟ್ರಿಕ್ ಪಡೆದು ಕೊಬ್ಬರಿ ಖರೀದಿಸಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ತಂತ್ರಾಂಶ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿತ್ತು. ಆದರೆ ಈವರೆಗೂ ಆ ಕೆಲಸ ಪೂರ್ಣಗೊಂಡಿಲ್ಲ. ಹಾಗಾಗಿ ಖರೀದಿ ಮತ್ತಷ್ಟು ತಡವಾಗಬಹುದು” ಎಂಬ ಮಾತುಗಳು ಕೇಳಿಬಂದಿವೆ.
“ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜನವರಿ 24ರಂದು ತುಮಕೂರು ನಗರದ ಎಪಿಎಂಸಿ ಪ್ರಾಂಗಣದಲ್ಲಿ ತರಾತುರಿಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಫೆಬ್ರವರಿ 1ರಿಂದ ಕೊಬ್ಬರಿ ಖರೀದಿ ಆರಂಭವಾಗಲಿದೆ. ಮತ್ತೆ ಮುಂದೂಡುವುದಿಲ್ಲವೆಂದು ರೈತರಿಗೆ ಭರವಸೆ ನೀಡಿದ್ದರು. ಆದರೂ ಖರೀದಿ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ” ಎಂಬುದು ರೈತರ ಆರೋಪವಾಗಿದೆ.
“ಮುಂದಿನ ಖರೀದಿ ದಿನಾಂಕ ನೀಡದೆ ತಾತ್ಕಾಲಿಕವಾಗಿ ಮುಂದೂಡಲಾಗಿದೆಯೆಂದು ಮಹಾಮಂಡಳದ ಅಧಿಕಾರಿಗಳು ಹೇಳುತ್ತಿದ್ದಾರೆ. ದಿನಾಂಕ ನೀಡದೆ ಮುಂದೂಡಿರುವುದನ್ನು ಗಮನಿಸಿದರೆ ಇನ್ನೂ ಎಷ್ಟು ದಿನಗಳು ಬೇಕಾಗುತ್ತದೆ. ಅಲ್ಲಿಯವರೆಗೂ ರೈತರು ಏನು ಮಾಡಬೇಕು. ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ತಡ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ ಜನರಿಗೆ ಫೆ.9ರ ಬಂದ್ ಬೇಕಿಲ್ಲ: ಸಚಿವ ಚಲುವರಾಯಸ್ವಾಮಿ
“ತಂತ್ರಾಂಶ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನಂತೆ ಬಯೋ ಮೆಟ್ರಿಕ್ ಇಲ್ಲದೆ ಖರೀದಿ ಮಾಡಿ ರೈತರನ್ನು ವಂಚಿಸಲು ಮತ್ತೊಂದು ಸೂತ್ರ ರೂಪಿಸಿದಂತೆ ಕಾಣುತ್ತದೆ” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.