ರೈತ ಸಂಘಕ್ಕೆ ಎನ್.ಡಿ ಸುಂದರೇಶ್ ಅವರು ಹಾಕಿಕೊಟ್ಟ ಸೈದ್ಧಾಂತಿಕ ನೆಲೆಗಟ್ಟಿನ ಫಲವಾಗಿ, ಒಂದು ಸಂಘಟನೆ ಅರ್ಧ ಶತಮಾನದತ್ತ ದಾಪುಗಾಲು ಹಾಕುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದರಾಜು ಹೇಳಿದರು.
ತುಮಕೂರು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಎನ್ ಡಿ ಸುಂದರೇಶ್ ಅವರ 31ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗ್ರಾಮಕ್ಕೆ ಕಂದಾಯ ವಸೂಲಿಗೆ ಓರ್ವ ಆರ್ ಐ ಬಂದರೂ ರೈತರು ಮನೆಬಿಟ್ಟು ಹೋಗುವಂತಹ ದುಸ್ಥಿತಿ ಇತ್ತು. ಅದನ್ನು ತಪ್ಪಿಸಿ, ರೈತರಿಂದ ಜಪ್ತಿ ಮಾಡಿದ್ದ ಎತ್ತು, ಆಕಳುಗಳನ್ನು ಮರುಜಪ್ತಿ ಮಾಡಿ ಅಧಿಕಾರಿಗಳು ಗ್ರಾಮಗಳಿಗೆ ಬರಲು ಯೋಚಿಸುವಂತೆ ಮಾಡಿದ್ದು ರೈತ ಸಂಘ. ಹತ್ತಾರು ಕೇಸುಗಳನ್ನು ಹಾಕಿಸಿಕೊಂಡರೂ ತಾವು ನಂಬಿದ್ದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೊನೆಯವರೆಗೆ ಜೀವಿಸಿದವರು. ಅಂತಹವರ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ” ಎಂದರು.
“ತುಮಕೂರು ತಾಲೂಕು ರೈತ ಸಂಘದದಿಂದ ಪ್ರಥಮವೆಂಬಂತೆ ಹೆಬ್ಬೂರಿನಲ್ಲಿ ಸುಮಾರು ₹80 ಲಕ್ಷ ವೆಚ್ಚದಲ್ಲಿ ರೈತ ಭವನ ನಿರ್ಮಾಣ ಮಾಡಲಾಗಿದೆ. ಕೆ ಎಸ್ ಪುಟ್ಟಣ್ಣಯ್ಯ ಅವರು ವಿಧಿವಶರಾದ ಫೆಬ್ರವರಿ 18ರಂದು ರೈತ ಭವನದ ಉದ್ಘಾಟನೆ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ರೈತಭವನದ ಮುಂದೆ ಕೆ ಎಸ್ ಪುಟ್ಟಣ್ಣಯ್ಯ ಅವರ ಪುತ್ಥಳಿ ಆನಾವರಣ ಮಾಡಬೇಕೆಂದುಕೊಂಡಿದ್ದೇವೆ. ಹಾಗಾಗಿ ರೈತ ಮುಖಂಡರು ಹೆಚ್ಚಿನ ನೆರವು ನೀಡಬೇಕು” ಎಂದು ಮನವಿ ಮಾಡಿದರು.
ರೈತ ಸಂಘದ ಹಿರಿಯ ಮುಖಂಡ ಎಚ್ ರಾಮಚಂದ್ರಪ್ಪ ಮಾತನಾಡಿ, “ತಾಯಿ ಹೃದಯದ, ಜಾತಿ-ಮತ, ಮೂಢನಂಬಿಕೆ, ಕಟ್ಟುಪಾಡುಗಳಿಂದ ಬಹುದೂರವೇ ಉಳಿದಿದ್ದ ಎಂ ಡಿ ಸುಂದರೇಶ್, ಕೆಟ್ಟ ಸಾಮಾಜಿಕ ಪರಿಸ್ಥಿತಿಯ ವಿರೋಧಿಯಾಗಿದ್ದರು. ಅವರ ಹೋರಾಟಗಳು ಕೇವಲ ಮನವಿ ಪತ್ರಕ್ಕೆ ಸಿಮೀತವಾಗದೆ, ಸರ್ಕಾರದ ಅಡಳಿತ ಯಂತ್ರವೇ ಗಲಿಬಿಲಿಗೆ ಒಳಗಾಗುವಂತೆ ಹೋರಾಟಗಳನ್ನು ರೂಪಿಸುತ್ತಿದ್ದರು. ಸಮ ಸಮಾಜದ ಕನಸು ಕಂಡು, ಅದರತ್ತ ಸದಾ ದುಡಿಯುತ್ತಿದ್ದರು. ಯಾವ ವಿಚಾರಕ್ಕೂ ರಾಜಿ ಮಾಡಿಕೊಳ್ಳದ ಅವರ ಸ್ವಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನೆಡೆಯಬೇಕಾಗಿದೆ” ಎಂದರು.
ಹಿರಿಯ ಮುಖಂಡ ದೊಡ್ಡ ಮಾಳಯ್ಯ ಮಾತನಾಡಿ, “ಎನ್ ಡಿ ಸುಂದರೇಶ್ ರೈತ ಸಂಘದ ಸಂಸ್ಥಾಪಕರಲ್ಲಿ ಒಬ್ಬರು, ಶಿವಮೊಗ್ಗದಲ್ಲಿ ಆರಂಭವಾದ ಕುಬ್ಬು ಬೆಳೆಗಾರರ ಹೋರಾಟ ವೇದಿಕೆಯೇ ಮುಂದೆ ರುದ್ರಪ್ಪ, ಎಂ ಡಿ ನಂಜುಂಡಸ್ವಾಮಿ ಸೇರಿದಂತೆ ಇತರರ ಒಡನಾಟದ ಫಲವಾಗಿ ಕರ್ನಾಟಕ ರಾಜ್ಯ ರೈತ ಸಂಘವಾಗಿ ಮಾರ್ಪಾಡಾಯಿತು. ರೈತ ಸಂಘವೆಂಬುದು ಕೇವಲ ರೈತರ ಸಮಸ್ಯೆಗಳ ಬಗ್ಗೆ ಹುಟ್ಟಿಕೊಂಡ ಸಂಘವಲ್ಲ. ಪ್ರತಿ ಶ್ರಮಜೀವಿಯ ಪಾಲು ಕೇಳಲು ಹುಟ್ಟಿದ ಜಾತಿ, ಧರ್ಮ ಮೀರಿದ ಚಳವಳಿ. ಸರ್ಕಾರಕ್ಕೆ ಅರ್ಥವಾಗುವ ಮೊದಲೇ ರೈತ ಸಂಘ ಅದರ ವಿರುದ್ದ ಹೋರಾಟ ರೂಪಿಸಿತ್ತು. ಎನ್ ಡಿ ಸುಂದರೇಶ್ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ನಡೆದರೆ ಮಾತ್ರ ರೈತ ಸಂಘ ಮತ್ತಷ್ಟು ಬಲಿಷ್ಠವಾಗಲಿದೆ” ಎಂದರು.
ರೈತ ಸಂಘದ ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ ಮಾತನಾಡಿ, “ರೈತ ಸಂಘದಲ್ಲಿದ್ದು ಕೆಲಸ ಮಾಡಿ ಹುತಾತ್ಮರಾಗಿರುವ ಎಲ್ಲ ನಾಯಕರ ಕುರಿತು ಪುಸ್ತಕವೊಂದನ್ನು ಹೊರತರುವ ಅಗತ್ಯವಿದೆ. ಇದರಿಂದ ಹೊಸದಾಗಿ ರೈತ ಸಂಘಕ್ಕೆ ಬರುವ ಯುವಕರಿಗೆ ಮಾರ್ಗದರ್ಶನವಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾಂಗ್ರೆಸ್ ಸಂಸದರ ವಿರುದ್ಧ ಬಿಜೆಪಿ ಪ್ರತಿಭಟನೆ
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಶಂಕರಪ್ಪ ಮಾತನಾಡಿ, “ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಅಶೋಕ ನಗರದ ಎನ್ ಡಿ ಸುಂದರೇಶ್, ಮೈಸೂರು ವಿಶ್ವವಿದ್ಯಾಲಯಲ್ಲಿ ಓದುವಾಗಲೇ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡವರು. 1972ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಒಕ್ಕೂಟ ರಚಿಸಿ, ಚಳವಳಿ ಆರಂಭಿಸಿದ್ದು, ಮುಂದೆ ರೈತ ಸಂಘವಾಗಿ ಬೆಳೆಯಿತು. ಸಮಾನ ಮನಸ್ಕ ಗೆಳೆಯರಾದ ಎಚ್ ಎಸ್ ರುದ್ರಪ್ಪ, ಪ್ರೊ. ಎಂ ಡಿ ನಂಜುಂಡಸ್ವಾಮಿ, ಪಾಂಡುರಂಗ ಅವರೊಂದಿಗೆ ಸೇರಿ 187 ರೈತರ ಸಾವಿಗೆ ಕಾರಣವಾದ ನರಗುಂದ, ನವಲಗುಂದ ರೈತ ಚಳವಳಿಯ ನೇತೃತ್ವ ವಹಿಸಿ, ರೈತರ ಸಾವಿಗೆ ಕಾರಣವಾದ ಗುಂಡೂರಾವ್ ಸರ್ಕಾರವನ್ನು ಕೆಳಕ್ಕೆ ಇಳಿಸಿದ ಕೀರ್ತಿ ರೈತ ಸಂಘಕ್ಕೆ ಸೇರುತ್ತದೆ. ಎನ್ ಡಿ ಸುಂದರೇಶ್ ಅವರ ಕಾಲದ ಪ್ರತಿಭಟನೆಗಳು ಫಲಿತಾಂಶವಿಲ್ಲದೆ ಮುಕ್ತಾಯಗೊಂಡ ದಿನಗಳಿಲ್ಲ” ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಶಿರಾ ತಾಲೂಕು ಅಧ್ಯಕ್ಷ ಕೆಂಚಪ್ಪ, ಗುಬ್ಬಿ ಲೋಕೇಶ್, ರಂಗಹನುಮಯ್ಯ ಸೇರಿದಂತೆ ಇತರರು ಇದ್ದರು.