ಸ್ಲಂ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸಭೆ ಕರೆಯುವಂತೆ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ನಗರ ನಿವೇಶನ ವಂಚಿತ ಹೋರಾಟ ಸಮಿತಿ ಒತ್ತಾಯಿಸಿವೆ. ಸಂಘಟನೆಗಳ ಮುಖಂಡರು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ ಅಶ್ವಿಜ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಹಕ್ಕೊತ್ತಾಯ ಸ್ವೀಕರಿಸಿ ಮಾತನಾಡಿದ ಅಶ್ವಿಜ ಅವರು, “ಸ್ಲಂ ಜನರ ಹಾಗೂ ನಿವೇಶನ ವಂಚಿತ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲು ಈಗಾಗಲೇ ಸರ್ಕಾರಿ ಭೂಮಿಯನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಲಂ ಬೋರ್ಡ್ಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ವಸತಿ ವಂಚಿತ ನೈಜ ಪಲಾನುಭವಿಗಳ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ನಗರ ಸ್ಲಂ ಜನರ ಕುಂದುಕೊರತೆ ಸಭೆಯನ್ನು ಜುಲೈ ಮೊದಲನೇ ವಾರದಲ್ಲಿ ಆಯೋಜಿಸಲು ಕ್ರಮವಹಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಪದಾಧಿಕಾರಿಗಳಾದ ತಿರುಮಲಯ್ಯ, ಕೃಷ್ಣಮೂರ್ತಿ, ಕೋಡಿಹಳ್ಳ ಸ್ಲಂ ಶಾಖೆಯ ಗಣೇಶ್, ನಿವೇಶನ ಹೋರಾಟ ಸಮಿತಿ ಮಂಗಳಮ್ಮ, ಪೂರ್ಣಿಮಾ, ನರಸಮ್ಮ, ರತ್ನಮ್ಮ ನಾಗರಾತ್ನಮ್ಮ, ಭಾರತಿ ನಗರ ಶಾಖೆಯ ಗಂಗಮ್ಮ, ಶಾರದಮ್ಮ, ಮುಂತಾದವರು ಇದ್ದರು.