ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ಪಕ್ಷ)ದ ಅಭ್ಯರ್ಥಿ ಎಸ್ ಎನ್ ಸ್ವಾಮಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ತುಮಕೂರು ನಗರದ ಟೌನ್ ಹಾಲ್ನಿಂದ ಮೆರವಣಿಗೆಯಲ್ಲಿ ತೆರಳಿ ಎಸ್ಯುಸಿಐ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ರೈತರು, ಕಾರ್ಮಿಕರು ದುಡಿಯುವ ಜನಗಳ ಸಮಸ್ಯೆಗಳ ಧ್ವನಿಯನ್ನು ಸಂಸತ್ತಿನಲ್ಲಿ ಚರ್ಚಿಸಲು ಎಸ್ ಎನ್ ಸ್ವಾಮಿಯವರನ್ನು ಬೆಂಬಲಿಸಿ, ಎಸ್ಯುಸಿಐ ಪಕ್ಷವನ್ನು ಬಲಪಡಿಸಿ ಎಂಬ ಘೋಷಣೆಗಳೊಂದಿಗೆ ಕಾರ್ಯಕರ್ತರು ಕೂಗುತ್ತ ಮೆರವಣಿಗೆ ನಡೆಸಿದರು.
ಮೆರವಣಿಗೆಗೆ ಮುಂಚೆ ಅಭ್ಯರ್ಥಿ ಎಸ್ ಎನ್ ಸ್ವಾಮಿ ಮಾತನಾಡಿ, “ಸಮಾಜದಲ್ಲಿ ಬಡವರು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ. ನಮ್ಮನ್ನು ಆಳುತ್ತಿರುವ ಪಕ್ಷಗಳು ಬಂಡವಾಳ ಶಾಹಿಗಳ ಶ್ರೀಮಂತ ಮನೆತನಗಳ ಲಾಭವನ್ನು ಹೆಚ್ಚಿಸುತ್ತಿವೆ. ದೇಶದಲ್ಲಿ ಜನರು ಬೆಲೆ ಏರಿಕೆ ನಿರುದ್ಯೋಗದಂಥ ಸಮಸ್ಯೆಗಳನ್ನು ತೀವ್ರವಾಗಿ ಎದುರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಡಪಂಥೀಯ ಸಿಪಿಐ, ಸಿಪಿಐಎಂ ಪಕ್ಷಗಳು ಕೆಲವೊಂದು ಸೀಟುಗಳ ಲಾಭಕ್ಕಾಗಿ ಚುನಾವಣಾ ರಾಜಕೀಯದಲ್ಲಿ ಮುಳುಗಿವೆ” ಎಂದು ಹೇಳಿದರು.
“ಕಮ್ಯುನಿಷ್ಟ್ ವಿಚಾರಕ್ಕೆ ಕಾರ್ಮಿಕರನ್ನು ಸಜ್ಜುಗೊಳಿಸಬೇಕಾಗಿದ್ದ ಆ ಪಕ್ಷಗಳು ಇಂಡಿಯಾ ಮೈತ್ರಿ ಕೂಟಕ್ಕೆ ಬೆಂಬಲ ಸೂಚಿಸಿವೆ. ಆದ್ದರಿಂದ ಈ ಚುನಾವಣೆಯಲ್ಲಿ ನಮ್ಮ ಪಕ್ಷವು ತನ್ನ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಬಲವಾದ ಪರಿಣಾಮ ಬೀರಲು ಏಕಾಂಗಿಯಾಗಿ 19 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ” ಎಂದು ಹೇಳಿದರು.
“ತುಮಕೂರು ಲೋಕಸಭಾ ಕ್ಷೇತ್ರದಿಂದ ನನ್ನನ್ನು ಕಣಕ್ಕಿಳಿಸಿದ್ದು, ಪ್ರಜ್ಞಾವಂತ, ವಿಚಾರವಂತ ದುಡಿಯುವ ಜನರು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಮೆರವಣಿಗೆ ಮಧ್ಯೆ ಅವರು ಸ್ವಾತಂತ್ರ ಚೌಕದಲ್ಲಿನ ಹುತಾತ್ಮರ ಸ್ತಂಭಕ್ಕೆ ಮಾಲಾರ್ಪಣೆ ಮಾಡಿ, “ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುವುದು ಅವರ ಆಶಯಗಳನ್ನು ಪೂರ್ಣಗೊಳಿಸಲು ಮತ್ತು ನಮ್ಮ ಪಕ್ಷವು ದುಡಿಯುವ ಜನರ ಕೈಗೆ ಅಧಿಕಾರ ನೀಡಲು ಶ್ರಮಿಸುತ್ತದೆ” ಎಂದು ತಿಳಿಸಿದರು.
ಪಕ್ಷದ ರಾಜ್ಯ ನಾಯಕ ಕೆ ವಿ ಭಟ್ ಮಾತನಾಡಿ, “ನಮ್ಮ ಪಕ್ಷವು ಜನರ ಸಮಸ್ಯೆಗಳ ಬಗ್ಗೆ ಹೋರಾಟ ಕಟ್ಟುತ್ತಿದೆ. ಹಲವಾರು ಚಳವಳಿಗೆ ನಾಯಕತ್ವ ನೀಡಿ ತುಮಕೂರಿನಲ್ಲಿ ಪಕ್ಷದ ಜವಾಬ್ದಾರಿ ಹೊತ್ತಿರುವ ಎಸ್ ಎನ್ ಸ್ವಾಮಿಯವರು ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸುವವರು. ಅವರು ಸೂಕ್ತವಾದ ಅಭ್ಯರ್ಥಿಯಾಗಿದ್ದಾರೆ. ತುಮಕೂರಿನ ನಾಯಕರು ಅವರನ್ನು ಬೆಂಬಲಿಸುವ ಮೂಲಕ ಗೆಲ್ಲಿಸಬೇಕು” ಎಂದು ಹೇಳಿದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಎಸ್ ಎನ್ ಸ್ವಾಮಿಯವರು ನಾಮ ಪತ್ರ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಂವಿಧಾನ ಉಳಿವಿಗಾಗಿ ಮತ ಚಲಾಯಿಸಿ: ಮಾಜಿ ಸಚಿವೆ ಲಲಿತಾ ನಾಯಕ್
ಪಕ್ಷದ ರಾಜ್ಯ ನಾಯಕ ಎಚ್ ಪಿ ಶಿವಪ್ರಕಾಶ್, ತುಮಕೂರು ಸಂಘಟನಾ ಸಮಿತಿಯ ಸದಸ್ಯರುಗಳಾದ ಎಂ ವಿ ಕಲ್ಯಾಣಿ, ಮಂಜುಳ ಗೋನವಾರ, ಲೋಕೇಶ್ ಭೈರನಾಯಕನಹಳ್ಳಿ, ರತ್ನಮ್ಮ, ಅಶ್ವಿನಿ, ಪಾರ್ವತಮ್ಮ, ಪ್ರವೀಣ್, ಅಣ್ಣಪ್ಪ, ಪ್ರಶಾಂತ್ ಸೇರಿದಂತೆ ಪಕ್ಷದ ಬೆಂಬಲಿಗರು ಇದ್ದರು.