ತುಮಕೂರು ಜಿಲ್ಲೆಯಾದ್ಯಂತ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಾಗಬೇಕು, ಮಹಾ ನಗರಪಾಲಿಕೆ ವ್ಯಾಪ್ತಿಯ ಪರಿಸ್ಥಿತಿಯ ಗಂಭೀರತೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಕುಡಿಯುವ ನೀರಿನ ಪೂರೈಕೆಗಾಗಿ ಟ್ಯಾಂಕರ್, ಕೊಳವೆ ಬಾವಿ ಮತ್ತು ಇತರೆ ಪರ್ಯಾಯ ನೀರಿನ ವ್ಯವಸ್ಥೆ ಕೈಗೊಳ್ಳಬೇಕು” ಎಂದು ತಿಳಿಸಿದರು.
ಮೈದಾಳ, ಹೆಬ್ಬಾಕ, ಅಮಾನಿಕೆರೆ, ಗಂಗಸಂದ್ರ, ಮರಳೂರು ಕೆರೆಗಳಿಂದ ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೇಮಾವತಿ ಮುಖ್ಯ ಶಾಖಾ ನಾಲೆ 96, 97, 98 ಕಿ.ಮೀ ವ್ಯಾಪ್ತಿಯಲ್ಲಿ ಕಳೆದ ವರ್ಷ ಸುರಿದ ಮಳೆಯಿಂದಾಗಿ ನಾಲೆ ಕುಸಿದು ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದನ್ನು ಈ ತಿಂಗಳ 23 ರೊಳಗಾಗಿ ಕಡ್ಡಾಯವಾಗಿ ಪೂರ್ಣಗೊಳಿಸಿ ಜೂನ್ 25 ರೊಳಗಾಗಿ ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
“ತುಮಕೂರು ನಗರದಲ್ಲಿ ಅಂದಾಜು 4 ಲಕ್ಷ ಜನಸಂಖ್ಯೆ ಇದ್ದು, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿ ನೀರು ಪೂರೈಸಬೇಕಾಗುತ್ತದೆ. ಈಗ ಪ್ರತಿ 5 ದಿನಕ್ಕೊಮ್ಮೆ ನೀರು ಪೂರೈಸುತ್ತಿರುವುದಾಗಿ ತಿಳಿಸಿದ್ದೀರಿ. ಹೀಗಾದಲ್ಲಿ ಜನ ಹೇಗೆ ಬದುಕಬೇಕು. ವಾಸ್ತವ ಪರಿಸ್ಥಿತಿ ಅರಿತಿದ್ದೀರಾ? ಬೇಸಿಗೆಯಲ್ಲಿ ಜನರಿಗೆ ವ್ಯವಸ್ಥಿತವಾಗಿ ನೀರು ಪೂರೈಕೆ ಮಾಡುವ ಸಂಬಂಧ ಈ ಹಿಂದೆಯೇ ಏಕೆ ಯೋಜನೆ ರೂಪಿಸಿಲ್ಲವ” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
“ಜಿಲ್ಲೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇನ್ನು 10 ವರ್ಷದಲ್ಲಿ ತುಮಕೂರು ಜಿಲ್ಲೆ ಊಹಿಸಲಸಾಧ್ಯ ವೇಗದಲ್ಲಿ ಬೆಳೆಯಲಿದೆ. ಮೆಟ್ರೋ ರೈಲು ಸೇರಿದಂತೆ ಬೆಂಗಳೂರಿನಿಂದ ಹಲವು ಯೋಜನೆಗಳು ಮುಂದಿನ ದಿನಗಳಲ್ಲಿ ತುಮಕೂರಿಗೆ ವರ್ಗಾಯಿಸಲ್ಪಟ್ಟಲ್ಲಿ ಜಿಲ್ಲೆ ಮತ್ತಷ್ಟು ವೇಗವಾಗಿ ಬೆಳೆಯುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಪರ್ಯಾಯ ವ್ಯವಸ್ಥೆಗಳು ಕಾಲಕ್ಕೆ ತಕ್ಕಂತೆ ನಡೆಯಬೇಕು” ಎಂದು ಸೂಚಿಸಿದರು.
“ತುಮಕೂರು ನಗರದ 35 ವಾರ್ಡ್ಗಳಿಗೆ ಒಟ್ಟು 70 ಸಾವಿರ ನೀರಿನ ಗೃಹ ಸಂಪರ್ಕಗಳಿದ್ದು, ಬುಗುಡನಹಳ್ಳಿ ಕೆರೆ ನಗರಕ್ಕೆ ನೀರಿನ ಮೂಲವಾಗಿರುತ್ತದೆ. ಈ ಕೆರೆಯ ಸಾಮರ್ಥ್ಯ 300 ಎಂಸಿಎಫ್ಟಿ ಇದ್ದು, ಪ್ರಸ್ತುತ ಕೆರೆಯಲ್ಲಿರುವ ನೀರಿನ ಪ್ರಮಾಣ 32 ಎಂಸಿಎಫ್ಟಿ, ನಗರದ ಪ್ರತಿದಿನದ ಬೇಡಿಕೆ 54 ಎಂಎಲ್ಡಿ, ಪ್ರಸ್ತುತ ಸರಬರಾಜು ಮಾಡುತ್ತಿರುವ ಹೇಮಾವತಿ ನೀರಿನ ಪ್ರಮಾಣ 38 ಎಂಎಲ್ಡಿ ಇದ್ದು, 2022-23ನೇ ಸಾಲಿನಲ್ಲಿ ಹೇಮಾವತಿ ನಾಲೆಯಿಂದ ಬುಗುಡನಹಳ್ಳಿ ಕೆರೆಗೆ ಒಟ್ಟು 322.75 ಎಂಸಿಎಫ್ಟಿ ನೀರನ್ನು ಹರಿಸಲಾಗಿದೆ” ಎಂದು ಪಾಲಿಕೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
“ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಜುಲೈ ಅಂತ್ಯದವರೆಗೂ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಜುಲೈ ಕೊನೆಯ ವಾರದಲ್ಲಿ ಕೆರೆಗೆ ನೀರು ಹರಿಸಲು ಪ್ರಾರಂಭಿಸಲಾಗಿತ್ತು. ಡಿಸೆಂಬರ್ ಕೊನೆಯ ವಾರದಲ್ಲಿ ನಾಲಾ ನೀರು ಸರಬರಾಜು ನಿಲ್ಲಿಸಲಾಯಿತು. ಒಟ್ಟು ಪಾಲಿಕೆ ವ್ಯಾಪ್ತಿಯ ಕೊಳವೆ ಬಾವಿಗಳ ಸಂಖ್ಯೆ 700 ಇದ್ದು, ಕೊಳವೆ ಬಾವಿಗಳಿಂದ ಸರಬರಾಜಾಗುವ ನೀರಿನ ಪ್ರಮಾಣ 05 ಎಂಎಲ್ಡಿ ಇದೆ. ನಗರದಲ್ಲಿ ನೀರಿನ ಅಭಾವ ಇರುವ ಕಡೆ ಪ್ರಸ್ತುತ ಪಾಲಿಕೆ ಒಡೆತನದ 6 ಟ್ಯಾಂಕರ್ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ” ಎಂದು ಹೇಳಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗಾಗಿ ಗುಬ್ಬಿ ತಾಲೂಕಿನ ಹೇಮಾವತಿ ನಾಲೆ ಹಾಗೂ ತುಮಕೂರು ತಾಲೂಕಿನ ಬುಗುಡನಹಳ್ಳಿ ಕೆರೆ ಶುದ್ಧೀಕರಣ ವ್ಯವಸ್ಥೆಯನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಬ್ಬಿ ತಾಲೂಕಿನ ಈಡಕನಹಳ್ಳಿ ಗ್ರಾಮದ ಬಳಿಯ ಹೇಮಾವತಿ ನಾಲೆಯ ಕಾಮಗಾರಿ ವೀಕ್ಷಿಸಿ ಪರಿಶೀಲನೆ ನಡೆಸಿದರು. ಹೇಮಾವತಿ ಕಾರ್ಯ ನಿರ್ವಾಹಕ ಅಭಿಯಂತರ ವರದಯ್ಯಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಗ್ರಾಮೀಣ ಅಭಿವೃದ್ಧಿಯಿಂದ ದೇಶದ ಉನ್ನತಿ ಸಾಧ್ಯ: ಶಾಸಕ ಕೋನರಡ್ಡಿ
ಹೇಮಾವತಿ ಅಣೆಕಟ್ಟಿನಿಂದ ಜಿಲ್ಲೆಯ ಶಾಖಾ ಕಾಲುವೆ ಮುಖಾಂತರ ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ 1.135 ಟಿಎಂಸಿ ಕುಡಿಯುವ ನೀರು ಹಂಚಿಕೆಯಾಗಿದ್ದು, ತುಮಕೂರು ಶಾಖಾ ನಾಲೆಯ ಸರಪಳಿ 123.475 ಕಿ.ಮೀ. ನಲ್ಲಿರುವ ಎಸ್ಕೇಪ್ ಹಳ್ಳದ ಮುಖಾಂತರ ತುಮಕೂರು ತಾಲೂಕಿನ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತದೆ. ಬುಗುಡನಹಳ್ಳಿ ಕೆರೆಯ ಪೂರ್ಣ ನೀರಿನ ಸಾಮರ್ಥ್ಯ 363.00 ಎಂಸಿಎಫ್ಟಿ ಹಾಗೂ ಗರಿಷ್ಟ ನೀರಿನ ಮಟ್ಟ 793.60 ಮೀ. ಗಳಾಗಿದ್ದು, ಜನವರಿ 2023ರಲ್ಲಿ ತುಂಬಿಸಲಾಗಿದೆ.
ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆ ಹಾಗೂ ಕುಡಿಯುವ ನೀರು ಶುದ್ಧೀಕರಣ ವ್ಯವಸ್ಥೆಯನ್ನು ಜಿಲ್ಲಾ ಉಸಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ವೀಕ್ಷಿಸಿದರು.