ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹರಿಹರದಿಂದ ಪ್ರಾರಂಭಗೊಂಡಿರುವ ಕ್ರಾಂತಿಕಾರಿ ಪಾದಯಾತ್ರೆ ಮಾರ್ಚ್ 21ರಂದು ಬೆಂಗಳೂರು ತಲುಪಲಿದೆ ಎಂದು ಒಳಮೀಸಲಾತಿ ಹೋರಾಟಗಾರ ಭಾಸ್ಕರ್ ಪ್ರಸಾದ್ ತಿಳಿಸಿದರು.
ತುಮಕೂರು ನಗರದಲ್ಲಿ ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ‘ಒಳಮೀಸಲಾತಿ ಹೋರಾಟದ ಮುಂದಿನ ನಡೆಗಳ ಬಗ್ಗೆ ಸಭೆ’ ನಡೆಸಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರು ಸಹ ಯಾವುದೇ ಸರ್ಕಾರ ಇದುವರೆಗೂ ಒಳಮೀಸಲಾತಿ ಬಗ್ಗೆ ಗಟ್ಟಿ ನಿರ್ಧಾರ ಕೈಗೊಳ್ಳದೆ ನಮ್ಮ ಸಮುದಾಯವನ್ನು ಕಡೆಗಡನೆ ಮಾಡುತ್ತಿವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಹುವುದಕ್ಕೆ ನಮ್ಮ ಸಮುದಾಯದ ಮತಗಳೇ ಮಹುಮುಖ್ಯವಾಗಿದ್ದರೂ, ಸಿದ್ದರಾಮಯ್ಯನವರ ಸರ್ಕಾರ ಒಳಮೀಸಲಾತಿ ಜಾರಿಗೆ ಬಗ್ಗೆ ಹಿಂದೇಟು ಹಾಕುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸರ್ಕಾರವನ್ನು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಸಮುದಾಯದ ನಾಯಕರು ಒಳಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕು. ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಇದು ಕಡೆಯ ಹೊರಟವಾಗಿದ್ದು, ಒಳಮೀಸಲಾತಿ ಜಾರಿಗೆ ಮಾಡದಿದ್ದಲ್ಲಿ ವಿಧಾನ ಸೌಧದ ಮುಂದೆ ಅತ್ಮಹುತಿಗಳಾಗುತ್ತವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ವಕೀಲ ಹರಿರಾಮ್ ಮಾತನಾಡಿ ಕಳೆದ 35 ವರ್ಷಗಳ ಹೋರಾಟಕ್ಕೆ ಇದುವರೆಗೂ ಒಂದು ತಾರ್ಕಿಕ ಅಂತ್ಯ ಕಾಣದಿರುವುದು ಶೋಚನೀಯ ಸಂಗತಿ ಮತ್ತು ದಲಿತ ಸಮುದಾಯಗಳ ಮೇಲೆ ಸರ್ಕಾರಗಳಿಗಿರುವ ಆಸಕ್ತಿ ಎದ್ದು ಕಾಣುತ್ತಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಅನುಸರಿಸುತ್ತಿರುವ ದೇಶದಲ್ಲಿ ಬದುಕನ್ನು ಕಟ್ಟಿ ಕೊಳ್ಳುವ ಸಲುವಾಗಿ ಭಿಕ್ಷೆ ಬೇಡುವ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿ ಒಂದು ಜಾತಿಗೆ ಸೀಮಿತವಲ್ಲ ಒಳಮೀಸಲಾತಿ ಕೇವಲ ಒಂದು ಜಾತಿಗೆ ಸೀಮಿತ ಎಂದು ಅನೇಕರು ಅಪಪ್ರಚಾರ ಮಾಡುತ್ತಿದ್ದು, ಒಳಮೀಸಲಾತಿ ಜಾರಿಯಿಂದ ಪರಿಶಿಷ್ಟ ಜಾತಿಯ ಮಾದಿಗ, ಹೊಲೆಯ, ಲಂಬಾಣಿ, ಕೊರಚ , ಕೊರಮ ಸೇರಿದಂತೆ 101 ಉಪಜಾತಿಗಳಿಗೆ ಅನುಕೂಲವಾಗಲಿದೆ. ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯಾಗಲಿದೆ. ಆದರೆ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಜಾತಿ ಜಾತಿಗಳ ನಡುವೆ ಅಪಪ್ರಚಾರದ ಮೂಲಕ ವಿಷ ಬೀಜ ಬಿತ್ತುತ್ತಿವೆ. ಪರಿಶಿಷ್ಟ ಸಮುದಾಯಗಳು ಎಚ್ಚೆತ್ತುಕೊಂಡು ಸರ್ಕಾರದ ಕಣ್ತೆರೆಸಬೇಕು ಎಂದು ತಿಳಿಸಿದರು.

ಹೋರಾಟಗಾರರು ಮತ್ತು ಹಿರಿಯ ವಕೀಲ ಅರುಣ್ ಕುಮಾರ್ ಮಾತನಾಡಿ, ಒಳಮೀಸಲಾತಿ ಹೋರಾಟ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಈ ಬಾರಿ ಒಳಮೀಸಲಾತಿ ಜಾರಿ ಮಾಡಿಸಲೇ ಬೇಕು. ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದರು, ರಾಜ್ಯ ಸರ್ಕಾರ ಕುಂಟು ನೆಪಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದೆ. 2001ರ ಸದಾಶಿವ ಆಯೋಗದ ಜಾತಿಗಣತಿ ಪ್ರಕಾರ ಮತ್ತು 2011ರ ಮಧುಸ್ವಾಮಿ ಸಮಿತಿಯ ಜಾತಿಗಣತಿ ಪ್ರಕಾರ ಸರ್ಕಾರ ತಡಮಾಡದೆ ತಕ್ಷಣವೇ ಒಳಮೀಸಲಾತಿಯನ್ನು ಜಾರಿ ಗೊಳಿಸಿ ತಳ ಸಮುದಾಯಗಳ ಋಣ ತೀರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅನೇಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
