ಬಿಜೆಪಿಯವರು ಮಾಡಿರುವಂತಹ ಮತಗಳ್ಳತನದ ಕುರಿತು ಕೆ.ಎನ್ ರಾಜಣ್ಣ ನವರು ನೀಡಿರುವ ಹೇಳಿಕೆಯ ವಿಡಿಯೋವನ್ನು ನೂರು ಬಾರಿ ಪರಿಶೀಲಿಸಿದ್ದೇನೆ. ಅದರಲ್ಲಿ ಒಂದು ಅಣು ದೋಷವೂ ಕಂಡು ಬಂದಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಮೂಲಕ ನಮ್ಮ ತಳ ಸಮುದಾಯದ ನಾಯಕನ ತಲೆದಂಡ ಮಾಡಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಹೆತ್ತೇನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದನ್ನು ವಿರೋಧಿಸಿ ಕೆಎನ್ಆರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ‘ನಗರದ ಟೌನ್ಹಾಲ್ನ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಮಂಜುನಾಥ್ ಹೆತ್ತೇನಹಳ್ಳಿ ಅವರು, ದಮನಿತ ಸಮುದಯಗಳಿಂದ ಎದ್ದು ಎಲ್ಲಾ ಸಮುದಾಯಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಿರುವ ಶ್ರೇಷ್ಠ ನಾಯಕ ಕೆ.ಎನ್ ರಾಜಣ್ಣನವರಿಗೆ ಆಗಿರುವಂತಹ ಅನ್ಯಾಯವನ್ನು ಒಕ್ಕೊರಲಿಂದ ಖಂಡಿಸುತ್ತೇವೆ. ನಾವಿಲ್ಲಿ ಸೇರಿರುವುದು ಕುದಿಯುತ್ತಿರುವ ರಕ್ತ ತುಂಬಿದ ಹೃದಯದಿಂದ ನ್ಯಾಯ ಕೇಳಲೇ ಹೊರತು ಎಂಜಲು ತುಂಬಿದ ನಾಲಿಗೆಯಲ್ಲಿ ಅಲ್ಲ. ತಳ ಸಮುದಾಯಗಳು ಇಂದು ರಾಜಣ್ಣನವರ ಜೊತೆಯಲ್ಲಿ ಗಟ್ಟಿಯಾಗಿ ನಿಂತಿವೆ ಎಂಬುದನ್ನು ಹೈಕಮಾಂಡ್ ಮನವರಿಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಜಣ್ಣ ಮಾಡಿದ ತಪ್ಪಾದರೂ ಏನು? ಅದನ್ನು ನಮ್ಮ ಪಕ್ಷದ ನಾಯಕರೇ ಹೇಳಬೇಕು. ಈ ಹಿಂದೆಯೂ ಬಿಜೆಪಿ ಮತಗಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ನಾವು ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ, ಇದರಲ್ಲಿ ತಪ್ಪೇನಿದೆ?ಕಾಂಗ್ರೆಸ್ ಅಜೆಂಡಗಳಲ್ಲೊಂದಾದ ಜಾತಿಗಣತಿಯ ವಿರುದ್ಧ ಕಾಂಗ್ರೆಸ್ನ ನಾಯಕರೇ ಅಪಸ್ವರ ಎತ್ತಿದ್ದರು. ಅವರಿಗೆ ನೀಡಲಾಗದ ಶಿಕ್ಷೆ ನಮ್ಮ ತಳ ಸಮುದಾಯಗಳ ನಾಯಕರಿಗೆ ನೀಡಿದ್ದಾರೂ ಏಕೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ಗೆ ಕೇಳಬೇಕಿದೆ ಎಂದು ಗುಡುಗಿದರು.
ಕುವೆಂಪು ಅವರ ಶೂದ್ರ ತಪಸ್ವಿ ಕೃತಿಯಲ್ಲಿ ‘ಶೂದ್ರನೊಬ್ಬ ತಪಸ್ಸು ಮಾಡುತ್ತಿದ್ದಾನೆ ಎಂದು ದೂರ್ತನೊಬ್ಬ ಬಂದು ಶ್ರೀರಾಮನಿಗೆ ಹೇಳಿದ್ದಕ್ಕೆ, ಶ್ರೀರಾಮ ಹಿಂದೆ ಮುಂದೆ ನೋಡದೆ ಶೂದ್ರನ ಶಿರಶ್ಚೇದನ ಮಾಡುತ್ತಾನೆ. ಇಲ್ಲೂ ಅದೇ ನಡೆಯನ್ನು ರಾಜಣ್ಣನವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಪ್ರದರ್ಶಿಸಿದೆ. ಶೂದ್ರ ಸಮುದಾಯದಿಂದ ಬಂದ ಕೆ.ಎನ್ ರಾಜಣ್ಣನವರು ರಾಜಕೀಯ ತಪಸ್ಸು ಮಾಡಿ ರಾಜಕೀಯ ಉತ್ತುಂಗಕ್ಕೇರಿದ್ದಾರೆ. ಅಂತಹ ನಾಯಕನನ್ನು ಪಿತೂರಿ ಮಾಡಿ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದು ತಳ ಸಮುದಾಯಗಳಿಗೆ ಮಾಡಿದ ಅವಮಾನ ಎಂದು ಖಂಡನೆ ವ್ಯಕ್ತಪಡಿಸಿದರು.

2400 ವರ್ಷಗಳ ಹಿಂದೆ ರಾಜಕಾರಣವನ್ನುದ್ದೇಶಿಸಿ ಪ್ಲೇಟೋ ಹೇಳಿದ್ದರು, ‘ಮತದಾರ ಫಿಲಾಸಫರ್ ಆಗಿರಬೇಕು, ಇಲ್ಲವೇ ಮತದಾರರಿಂದ ಆಯ್ಕೆಯಾಗುವ ನಾಯಕ ಫಿಲಾಸಫರ್ ಆಗಿರಬೇಕು’ ಎಂದು. ರಾಜಣ್ಣ ನವರು ನಿಜವಾಗಲೂ ಒಬ್ಬ ಸ್ವತಂತ್ರ್ಯವಾಗಿ ಆಲೋಚಿಸಬಲ್ಲ ತತ್ವಜ್ಞಾನಿ. ಅಂದು ಪ್ಲೇಟೋ ಹೇಳಿದ್ದು, ಇಂದು ರಾಜಣ್ಣನವರು ನಡೆದುಕೊಂಡಿದ್ದು ಎರಡೂ ಒಂದೇ ಆಗಿದೆ. ಇಂತಹ ನಾಯಕನ ತೇಜೋವಧೆ ಮಾಡುವುದನ್ನು ತಳ ಸಮುದಾಯಗಳು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರಲ್ಲದೆ, ಕಾಂಗ್ರೆಸ್ ಹೈ ಕಮಾಂಡ್ ಎಚ್ಚೆತ್ತುಕೊಂಡು ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ರಾಜಣ್ಣ ಅವರನ್ನು ಸಂಪುಟಕ್ಕೆ ಪುನರ್ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಕೆ.ಎನ್ ರಾಜಣ್ಣನವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ರ್ಯಾಲಿಯು ಟೌನ್ಹಾಲ್ ಮೂಲಕ ಡಿಸಿ ಕಚೇರಿಯ ವರೆಗೂ ನಡೆಯಿತು.
ಈ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ಹಿಂದುಳಿದ ವರ್ಗಗಳ ಅಧ್ಯಕ್ಷ ಧನ್ಯಕುಮಾರ್, ಕುರುಬರ ಸಂಘದ ಮಾಲಿಂಗಪ್ಪ, ಕಾರ್ಪೊರೇಟರ್ ಜಿಯಾಉಲ್ಲಾ ಖಾನ್, ಕ್ರಿಬ್ಕೋ ನಿರ್ದೇಶಕರು ಹಾಗೂ ಕೆಂಪಮ್ಮ ದೇವಸ್ಥಾನದ ಧರ್ಮದರ್ಶಿ ಕೆಂಪಹನುಮಯ್ಯ, ಸುವರ್ಣಮ್ಮ, ಮದಕರಿ ಪ್ರತಾಪ್, ಲಂಕೆಪ್ಪ ಪುಲಮಘಟ್ಟ ಹಾಗೂ ಜಿಲ್ಲೆಯ ಪ್ರಮುಖರು ಹಾಜರಿದ್ದರು.