ಎಲ್ಲೆಡೆಯೂ ನುಡಿ ಮಾಲಿನ್ಯ ಹೆಚ್ಚಾಗುತ್ತಿದೆ. ಇಂದು ಸ್ವಚ್ಛಭಾರತ ಬೇಕಿದೆ. ಆದರೆ, ಅದು ಬೀದಿಗಳಲ್ಲಷ್ಟೇ ಅಲ್ಲದೆ ಭಾವನೆ ಮತ್ತು ಮನಸ್ಸುಗಳ ಸ್ವಚ್ಛಭಾರತ ನಿರ್ಮಾಣವಾಗಬೇಕಿದೆ. ಪ್ರಸ್ತುತ ರಾಜಕಾರಣದಲ್ಲಿ ನುಡಿ ನೈತಿಕತೆ ನಾಶವಾಗುತ್ತಿದೆ. ಏಕವಚನ ಹಾಗೂ ಹಿಂಸಾತ್ಮಕ ಪದಗಳನ್ನು ಬಳಸಲಾಗುತ್ತಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಸಿದರು.
ತುಮಕೂರು ನಗರದ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ಈ ದಿನ.ಕಾಮ್ ವತಿಯಿಂದ ಹಮ್ಮಿಕೊಂಡಿದ್ದ ‘ನಮ್ಮ ಕರ್ನಾಟಕ: ನಡೆದ 50 ಹಜ್ಜೆ-ಮುಂದಿನ ದಿಕ್ಕು ವಿಶೇಷ ಸಂಚಿಕೆ ಮತ್ತು ನ್ಯೂಸ್ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆಯನ್ನು ಮಕ್ಕಳಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಮನುವಾದದಿಂದ ಪ್ರೇರಿತವಾಗಿ ಇಂದು ಬಹುತ್ವ ಇಕ್ಕಟ್ಟಿನಲ್ಲಿದೆ. ಏಕ ಸಂಸ್ಕೃತಿಯನ್ನು ಹೇರಲಾಗುತ್ತಿದೆ. ಭಾವೈಕ್ಯತೆ ಮತ್ತು ಸೌಹಾರ್ದಾತೆಗೆ ಬದಲಾಗಿ ದ್ವೇಷವಾದ ರೂಪುಗೊಳ್ಳುತ್ತಿದೆ. ಆದರೆ, ಪ್ರಜಾಪ್ರಭುತ್ವಕ್ಕೆ ತನ್ನದೇ ಆದ ಪರಿಭಾಷೆಯಿದ್ದು, ಬಂಡವಾಳಶಾಹಿಗಳು, ಸರ್ವಾಧಿಕಾರಿಗಳು ಮತ್ತು ಪುರೋಹಿತಶಾಹಿಗಳು ಸೇರಿ ನುಡಿ ಭಾವೈಕ್ಯೆತೆಯನ್ನು ಭ್ರಷ್ಟಗೊಳಿಸುತ್ತಿದ್ದಾರೆ” ಎಂದು ಕಟುವಾಗಿ ಟೀಕಿಸಿದರು.

“ವಿವೇಕಾನಂದರು ಮತ್ತು ಗಾಂಧಿ ಹಿಂದೂ ಧರ್ಮದ ಒಳ ವಿಮರ್ಶಕರು. ಈ ದೇಶದ ಜಾತಿ ಮತ್ತು ವರ್ಣವ್ಯವಸ್ಥೆಯನ್ನು ಕಟುವಾಗಿ ವಿರೋಧ ಮಾಡಿದ್ದರು. ಅವರ ಒಂದು ಮುಖವನ್ನು ಮಾತ್ರ ಪ್ರಚಾರ ಮಾಡಲಾಗುತ್ತಿದ್ದು, ಇನ್ನೊಂದೆಡೆ ಫ್ಯೂಡಲಿಸಂ ವಿಜೃಂಭಿಸುತ್ತಿದೆ. ಪರಸ್ಪರ ಗೌರವಿಸುವಂತಹ ನಡವಳಿಕೆ ಮರೆಯಾಗಿ, ಜಮೀನ್ದಾರಿ ಮತ್ತು ಊಳಿಗಮಾನ್ಯ ಪದ್ಧತಿಯ ಏಕವಚನ ಹಾಗೂ ವ್ಯಕ್ತಿ, ಜಾತಿ, ಧರ್ಮದ ವೈಷಮ್ಯವನ್ನು ಬಿತ್ತಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಪ್ರಸ್ತುತ ಮಾಧ್ಯಮಗಳು ಜನರ ಮನಸ್ಸನ್ನು ಮುಟ್ಟಬೇಕು. ಪರಂಪರೆ ಚಲನಶೀಲತೆ-ಸಂಪ್ರದಾಯ ಜಡತ್ವವನ್ನು ಹೊಂದಿದೆ. ಜನರಿಗೆ ಪರಂಪರೆ ಮೇಲೆ ನಂಬಿಕೆಯಿದೆ. ನಾವು ಪರಂಪರೆಯ ಮೂಲಕ ದೇಶದಲ್ಲಿ ವಿಜೃಂಬಿಸುತ್ತಿರುವ ಫ್ಯೂಡಲ್ಗಳನ್ನು ನಿಗ್ರಹಿಸಲು ಸಾಧ್ಯವಿದೆ. ಹತಾಶರಾಗದೆ ಸಂಕಲ್ಪದಿಂದ ಮುಂದೆ ಹೋಗಬೇಕು” ಎಂದು ತಿಳಿಸಿದರು.

“ದುಷ್ಟ ಸರ್ಕಾರಕ್ಕಿಂತ ಕೆಟ್ಟ ಸರ್ಕಾರ ಒಳ್ಳೆಯದು. ದೇಶದ ಸಂದಿಗ್ಧ ಸ್ಥಿತಿ ನಿವಾರಣೆಗೆ ನೀಲಿ, ಹಸಿರು, ಕೆಂಪು, ಒಂದಾಗಬೇಕು. ಎಲ್ಲರೂ ಸೇರಿ ಒಂದು ಬಾವುಟವನ್ನು ಎತ್ತಿ ಹಿಡಿಯಬೇಕು” ಎಂದು ಕರೆ ನೀಡಿದರು.
ಈ ದಿನ.ಕಾಮ್ನ ಡಾ. ಎಚ್ ವಿ ವಾಸು ಮಾತನಾಡಿ, “ಜನಪರ ಸಂಘಟನೆಗಳು ತಮ್ಮದೇ ಆದ ಮಾಧ್ಯಮಗಳನ್ನು ಕಟ್ಟಿಕೊಳ್ಳದಿದ್ದರೆ ಉಳಿಗಾಲವಿಲ್ಲ. ಕೆಲವೇ ಜನರ ಅಭಿಪ್ರಾಯವನ್ನು ಬಹುಜನರ ಅಭಿಪ್ರಾಯವೆಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಪರ್ಯಾಯ ಮಾಧ್ಯಮ ಕಟ್ಟಬೇಕೆಂಬ ನಿಟ್ಟಿನಲ್ಲಿ ಈ ದಿನ.ಕಾಮ್ ಮಾಧ್ಯಮವನ್ನು ಶುರು ಮಾಡಿದೆವು” ಎಂದರು.
“ಈ ದಿನ.ಕಾಮ್ ಮಾಧ್ಯಮದಿಂದ ರಾಜ್ಯದ ಮೂಲೆ ಮೂಲೆಯಲ್ಲಿನ ಸಮಸ್ಯೆಗಳನ್ನು ಬಿತ್ತರಿಸುವ ಕೆಲಸವಾಗುತ್ತಿದೆ. ಈ ದಿನ ಮಾಧ್ಯಮ ಜನರ ಹೃದಯಾಂತರಾಳಕ್ಕೆ ಇಳಿದಿದೆ. ಸತ್ಯವನ್ನು ಬಿತ್ತರಿಸುವುದೇ ನಮ್ಮ ಧ್ಯೇಯ. ನಾವು ಯಾವ ಸರ್ಕಾರಗಳ ಪರವೂ ಇಲ್ಲ. ಮಾಧ್ಯಮಗಳು ವಿಪಕ್ಷಗಳಾಗಿ ಕೆಲಸ ಮಾಡಬೇಕು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ” ಎಂದು ಕೆಲವು ಉದಾಹರಣೆಗಳನ್ನು ನೀಡುವ ಮೂಲಕ ಸ್ಪಷ್ಟನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ನಿವೃತ್ತ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆಗೆ ಆಗ್ರಹ
ಚಿಂತಕ ಪ್ರೊ. ಕೆ ದೊರೈರಾಜು ಈ ದಿನ.ಕಾಂ ನ್ಯೂಸ್ ಆ್ಯಪ್ ಬಿಡುಗಡೆಗೊಳಿಸಿದರು. ಪರಿಸರವಾದಿ ಸಿ ಯತಿರಾಜು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ ಹ ರಮಾಕುಮಾರಿ, ಸಾಮಾಜಿಕ ಸಾಮಾಜಿಕ ಹೋರಾಟಗಾರರಾದಂತಹ ಪಾರ್ವತಮ್ಮ ರಾಜ್ ಕುಮಾರ್, ತಾಜುದ್ದೀನ್ ಷರೀಫ್, ಎಂ ಆರ್ ರಂಗಮ್ಮ, ಜನಸ್ಪಂದನ ಟ್ರಸ್ಟ್ನ ಟೂಡಾ ಶಶಿಧರ್, ಚಿಂತಕ ನಿಕೇತ್ ರಾಜ್ ಮೌರ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎಐಟಿಯುಸಿ ಗಿರೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಎ ಗೋವಿಂದರಾಜು, ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ. ವೈ ಕೆ ಬಾಲಕೃಷ್ಣಪ್ಪ, ಸ್ಲಂ ಜನಾಂದೋಲನದ ಎ ನರಸಿಂಹಮೂರ್ತಿ, ಸಹಬಾಳ್ವೆ ಸಂಘಟನೆಯ ಅಧ್ಯಕ್ಷೆ ದೀಪಿಕಾ ಇದ್ದರು.