ಯುವಜನತೆ ಸಮಾಜದ ಪರಿವರ್ತನೆಗೆ ಮತ್ತು ಸಾಮಾಜಿಕ ಬದಲಾವಣೆಗೆ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ ತಿಳಿಸಿದರು.
ತುಮಕೂರು ನಗರದ ಡಾ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಸಮಕಾಲೀನ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಅರಿವಿನ ಕಾರ್ಯಾಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಸಮಕಾಲೀನ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಸಮಾಜದ ಬದಲಾವಣೆಗೆ ಯುವಜನರು ತೊಡಗಿಸಿಕೊಳ್ಳಲು ಅವಕಾಶಗಳಿವೆ. ಅದರ ಬಳಕೆಯ ವಿಧಾನ ಮತ್ತು ಅದರ ಅಪಾಯಗಳ ಅರಿವು ಅಗತ್ಯವಾಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಮತ್ತು ಸಂಘಟಿತ ಚಳುವಳಿಯ ಆಯಾಮಕ್ಕೆ ಪೂರಕವಾಗಿ ಯುವಜನರು ಸಾಮಾಜಿಕ ಮಾಧ್ಯಮಗಳ ಬಳಕೆ ಮಾಡಬೇಕು” ಎಂದು ತಿಳಿಸಿದರು.
“ವಿವಿಧ ಜಾತಿ, ಧರ್ಮಗಳ ಸಂಸ್ಕೃತಿ, ಆಚಾರ ವಿಚಾರಗಳನ್ನು ಸಂಪರ್ಕ ಮತ್ತು ಸಂವಹನಕ್ಕೆ ವೇದಿಕೆಯಾಗಿ ಜನರ ಮಾಧ್ಯಮವಾಗಿ ಸಾಮಾಜಿಕ ಜಾಲತಾಣ ಅತಿ ಹೆಚ್ಚು ಪ್ರಚಲಿತದಲ್ಲಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಜನಸಂಪರ್ಕ ಸಾಧನವಾಗಿ ಸೋಷಿಯಲ್ ಮೀಡಿಯಾ ಬಳಕೆಯಾಗಲಿ. ಉತ್ತಮ ಸಂದೇಶ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಹರಡುವ ಅರಿವನ್ನು ಜನರಿಗೆ ತಲುಪಿಸುವಂತಹ ಗುಣಗಳು ಯುವಜನರಲ್ಲಿ ಬೆಳೆಯಲಿ” ಎಂದರು.
ಈ ದಿನ.ಕಾಮ್ ಸೆಂಟ್ರಲ್ ಕೋಆರ್ಡಿನೇಟರ್ ಅನಿಲ್ಕುಮಾರ್ ಚಿಕ್ಕದಾಳವಟ್ಟ ಮಾತನಾಡಿ, “ಯುವಜನರು ಸಮುದಾಯಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಸಮಾಜದ ದನಿಯಾಗಿ ಕೆಲಸ ಮಾಡಲು ಯುವಜನರಿಗೆ ಸಾಮಾಜಿಕ ಮಾಧ್ಯಮಗಳು ವೇದಿಕೆಯಾಗಿವೆ. ಹಾಗಾಗಿ ಯುವಜನತೆ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು” ಎಂದು ಹೇಳಿದರು.
“ಸಮಕಾಲೀನ ರಾಜಕೀಯ, ಆರ್ಥಿಕ, ಸಾಮಾಜಿಕ ಘಟನೆಗಳಿಗೆ ಸಾಮಾನ್ಯ ಜನರು ಪ್ರತಿಕ್ರಿಯಿಸಲು ಸಾಮಾಜಿಕ ಜಾಲತಾಣ ಬಳಕೆಯಾಗುತ್ತಿರುವುದು ಒಂದೆಡೆಯಾದರೆ, ಬಂಡವಾಳ ಶಾಹಿಗಳು ಇದೇ ಸಾಮಾಜಿಕ ಜಾಲತಾಣಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಗಿದ್ದು, ಜನರ ಸಂಘಟಿತ ಹೋರಾಟದಿಂದ ವಿಫಲವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹಾಗಾಗಿ ಯುವ ಜನರು ಇಂತಹವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು” ಎಂದರು.
“ಸಾಮಾಜಿಕ ಜಾಲತಾಣಗಳನ್ನು ಸೌಹಾರ್ದತೆ ಬೆಳೆಸಲು ಬಳಸುವ ಮೂಲಕ ಸರ್ವಜನಾಂಗದ ಶಾಂತಿಯ ತೋಟವಾಗಿರುವ ನಾಡಿನಲ್ಲಿ ದ್ವೇಷ ಹರಡದಂತೆ ನೋಡಿಕೊಳ್ಳಬೇಕು. ಜನರ ನೋವಿಗೆ ಮಿಡಿಯುವ ಅಂತಃಕರಣ ಪ್ರತಿಯೊಬ್ಬರಲ್ಲೂ ಬರಬೇಕು” ಎಂದರು.
“ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಪ್ರತಿಯೊಬ್ಬರು ಈ ವಂಚನೆಗಳ ಬಗ್ಗೆ ಎಚ್ಚರ ವಹಿಸಬೇಕು. ವಂಚನೆ ಬಗ್ಗೆ ನಮ್ಮ ನೆರೆಹೊರೆಯವರಿಗೆ ಜಾಗೃತಿ ಮೂಡಿಸಬೇಕು. ಅನುಮಾನದ ಮಾಹಿತಿಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಖಚಿತ ಮಾಡಿಕೊಳ್ಳುವುದರಿಂದ ಇಂತಹ ವಂಚನೆಗಳನ್ನು ನಿಯಂತ್ರಣಕ್ಕೆ ತರಬಹುದು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಮಶಾನ ಜಾಗ ಕೇಳಿದ ದಲಿತ ನಾಯಕನ ಹೊರದಬ್ಬಲು ಸೂಚಿಸಿದ ತಹಶೀಲ್ದಾರ್; ಅನಿರ್ದಿಷ್ಟಾವಧಿ ಧರಣಿ ಕುಳಿತ ಮುಖಂಡರು
ಕಾರ್ಯಕ್ರಮದಲ್ಲಿ ಸ್ಲಂ ಸಮಿತಿಯ ಉಪಾಧ್ಯಕ್ಷ ಶಂಕ್ರಯ್ಯ, ಕಾರ್ಯದರ್ಶಿ ಅರುಣ್ ಟಿ ಜಿ ಪದಾಧಿಕಾರಿಗಳಾದ ತಿರುಮಲಯ್ಯ, ಜಾಬೀರ್ಖಾನ್, ಕೃಷ್ಣಮೂರ್ತಿ, ಶಿವಕುಮಾರ್, ಗುಲ್ನಾಜ್, ಗಣೇಶ್, ಅಶ್ವತ್, ತಿಪ್ಪೇಸ್ವಾಮಿ, ಯುವಪದಾಧಿಕಾರಿಗಳಾದ ಜಯಂತ್, ಮೋಹನ್ ಟಿ ಆರ್, ಪ್ರಥಮ್, ಸುನಿಲ್, ರಾಜು, ರವಿ, ಶಾಬುದ್ದೀನ್, ಅರವಿಂದ್, ನಿವೇಶನ ಹೋರಾಟ ಸಮಿತಿ ಪದಾಧಿಕಾರಿಗಳಾದ ದೇವರಾಜ್, ರಂಗನಾಥ್, ಸುಧಾ, ರತ್ನಮ್ಮ, ಜಿಜಿವಿ ಎಂಟರ್ ಪ್ರೈಸಸ್ ನಾ ದಯಾನಂದ್, ಶಿವಪ್ಪ ಸೇರಿದಂತೆ ಮುಂತಾದವರು ಇದ್ದರು.