ಮಂಜೂರಾಗಿರುವ ಸ್ಮಶಾನ ಭೂಮಿ ಹಸ್ತಾಂತರ ಮಾಡಿಕೊಡುವಂತೆ ಮನವಿ ಮಾಡಲು ಮುಂದಾದ ದಲಿತ ಮುಖಂಡರನ್ನು ನಿಂದಿಸಿದ್ದು, ʼಕೆಲಸಕ್ಕೆ ಬಾರದವರನ್ನು ಹೊರದಬ್ಬಿʼ ಎಂದು ಸೂಚಿಸಿ ಅವಮಾನಿಸಿದ್ದಾರೆ. ಅಲ್ಲದೆ ದಲಿತರನ್ನು ನಿರ್ಲಕ್ಷಿಸಿದ ಸಮಾಜ ಕಲ್ಯಾಣಾಧಿಕಾರಿಯನ್ನು ಪ್ರಶ್ನಿಸಿದ ಮುಖಂಡರ ವಿರುದ್ಧವೂ ಪೊಲೀಸ್ ದೂರು ನೀಡಿದ್ದಾರೆ.
ಈ ಎಲ್ಲ ದಲಿತ ವಿರೋಧಿ ಆಡಳಿತ ಧಿಕ್ಕರಿಸಿ ಗುಬ್ಬಿ ಪಟ್ಟಣದ ತಾಲೂಕು ಕಚೇರಿ ಎದುರು ದಲಿತಪರ ಸಂಘಟನೆಗಳ ಒಕ್ಕೂಟ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ತಲುಪಿದ ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ರೈತ ಸಂಘದ ಪದಾಧಿಕಾರಿಗಳು ತಾಲೂಕು ಆಡಳಿತದ ವಿರುದ್ದ ಘೋಷಣೆ ಕೂಗಿ ದಲಿತರನ್ನು ನಿಂದಿಸಿದ ತಹಶೀಲ್ದಾರ್ ಆರತಿ ಅವರ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಸುದೀರ್ಘ ಎಂಟು ಗಂಟೆಗಳ ಕಾಲ ಧರಣಿ ನಡೆಸಿದರು.
ಜಿ.ಹೊಸಹಳ್ಳಿ ದಲಿತ ಮುಖಂಡ ರವಿಕುಮಾರ್ ಮಾತನಾಡಿ, “ಸ್ಮಶಾನಕ್ಕೆ ಮಂಜೂರಾದ ಭೂಮಿಯನ್ನು ಸಾರ್ವಜನಿಕರಿಗೆ ಹಸ್ತಾಂತರ ಮಾಡಲು ಕಳೆದ ನಾಲ್ಕು ವರ್ಷಗಳಿಂದ ವಿಳಂಬ ಮಾಡುತ್ತಿದ್ದಾರೆ. ಅಲ್ಲಿ ಆಗಿರುವ ಒತ್ತುವರಿ ತೆರವು ಮಾಡಬೇಕೆಂದು ತಹಶೀಲ್ದಾರ್ ಬಳಿ ಚರ್ಚಿಸಲು ಬಂದ ಸಂದರ್ಭದಲ್ಲಿ ಸ್ಮಶಾನ ಭೂಮಿ ವಿಚಾರವಾಗಿ ಹಾರಿಕೆ ಉತ್ತರ ನೀಡಿದ್ದಾರೆ” ಎಂದು ಆರೋಪಿಸಿದರು.
“ಹೊಸಹಳ್ಳಿ ಉಪಾಧ್ಯಕ್ಷೆ ಪತಿಯಾಗಿ ನನ್ನನ್ನು ಜನರು ಪ್ರಶ್ನಿಸುತ್ತಿದ್ದಾರೆಂದು ಪ್ರಶ್ನಿಸಿದ ವೇಳೆ ತಹಶೀಲ್ದಾರ್ ಆರತಿ ಅವರು ಅಸಡ್ಡೆಯಾಗಿ ವರ್ತಿಸಿ ಅವಹೇಳನವಾಗಿ ಮಾತನಾಡಿದ್ದಾರೆ. ಬಡವನೊಬ್ಬ ಸತ್ತರೆ ಜಾಗವಿಲ್ಲ ಎಂದಾಗ ನಿಮ್ಮ ಮನೆಯಂಗಳದಲ್ಲಿ ಅಂತ್ಯಕ್ರಿಯೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಈ ಬಗ್ಗೆ ಕೇಳಿದಾಗ ಹೊರದಬ್ಬಲು ಸೂಚಿಸಿದ್ದಾರೆ” ಎಂದು ತಮ್ಮ ಅಳಲು ತೋಡಿಕೊಂಡರು.
“ನನಗೆ ಆಗಿರುವ ಅವಮಾನಕ್ಕೆ ಕೂಡಲೇ ಉತ್ತರ ನೀಡಬೇಕು. ಜಿಲ್ಲಾಧಿಕಾರಿಯವರು ಬಂದು ಸ್ಮಶಾನ ಭೂಮಿ ಒತ್ತುವರಿ ತೆರವು ಮಾಡಬೇಕು” ಎಂದು ಆಗ್ರಹಿಸಿದರು.
ದಲಿತ ಮುಖಂಡ ಎನ್ ಎ ನಾಗರಾಜು ಮಾತನಾಡಿ, “ಸ್ಮಶಾನ ಜಾಗಕ್ಕೆ ಕಳೆದ ಹಲವು ವರ್ಷಗಳಿಂದ ಬೇಡಿಕೆ ಇಟ್ಟರೂ ಈವರೆಗೆ ಜಮೀನು ನೀಡಿಲ್ಲ. ಜಿ.ಹೊಸಹಳ್ಳಿ ಸ್ಮಶಾನ ಭೂಮಿ ಬಗ್ಗೆ ಮಾತನಾಡಿದ ರವಿಕುಮಾರ್ ಅವರನ್ನು ನಿಂದಿಸಿ ಕೆಲಸಕ್ಕೆ ಬಾರದವರು ಎಂದು ಹೇಳಿರುವುದು ಖಂಡನೀಯ. ದಲಿತ ಸಂಘಟನೆಗಳ ಒಕ್ಕೂಟ ಹೋರಾಟ ಮಾಡುವ ವಿಚಾರ ತಿಳಿದು ತಹಶೀಲ್ದಾರ್ ಉತ್ತರ ನೀಡಲಾಗದ ತಹಶೀಲ್ದಾರ್ ಮೇಡಂ ಫಲಾಯನ ಮಾಡಿದ್ದಾರೆ. ಜತೆಗೆ ಸಮಾಜ ಕಲ್ಯಾಣ ಅಧಿಕಾರಿ ವೀಣಾ ಅವರೂ ಕೂಡ ದಲಿತರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ದೀಕ್ಷಾ ಭೂಮಿ ಪ್ರವಾಸ ವೇಳೆ ಪ್ರಶ್ನಿಸಿದ ದಲಿತ ಮುಖಂಡರ ವಿರುದ್ಧ ಪೊಲೀಸ್ ದೂರು ಸಲ್ಲಿಸಿದ್ದಾರೆ. ಇದು ದಲಿತ ವಿರೋಧಿ ನೀತಿಯಾಗಿದೆ” ಎಂದು ಕಿಡಿಕಾರಿದರು.
ಮುಖಂಡ ಚೇಳೂರು ಶಿವನಂಜಪ್ಪ ಹಾಗೂ ರೈತಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, “ಹೋರಾಟ ಶಕ್ತಿ ಅರಿತು ಕಚೇರಿಯಿಂದ ಹೊರ ನಡೆದ ತಹಶೀಲ್ದಾರ್ ಉತ್ತರ ನೀಡದೆ, ಪಲಾಯನ ಮಾಡಿದ್ದಾರೆ. ಕೆಲಸ ಮಾಡುವಾಗ ಸಾರ್ವಜನಿಕರನ್ನು ಕಡೆಗಣಿಸುವುದು ಸರಿಯಲ್ಲ. ಸಾರ್ವಜನಿಕ ವಲಯದಲ್ಲಿ ಆಡಳಿತ ಮಾಡಬೇಕಾದ ದಂಡಾಧಿಕಾರಿಗಳು ಅವಹೇಳನ ಮಾತನಾಡಿರುವುದು ವಿಪರ್ಯಾಸ. ದಲಿತರ ಕುಂದು ಕೊರತೆಗಳನ್ನು ಆಲಿಸಬೇಕಾದ ಯಾವುದೇ ಸಭೆ ನಡೆಸಿಲ್ಲ. ಕೇವಲ ಪಹಣಿಯಲ್ಲಿ ಕಾಣುವ ಸ್ಮಶಾನ ವಾಸ್ತವದಲ್ಲಿ ಒತ್ತುವರಿಯಾಗಿದೆ. ತೆರವು ಮಾಡಿ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ತಹಶೀಲ್ದಾರ್ ವಿಫಲರಾಗಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಆಯಾ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನೂ ನೇರಪಾವತಿಗೆ ಒಳಪಡಿಸುವಂತೆ ಆಗ್ರಹ
ಸಂಜೆ ವೇಳೆ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಪ್ರತಿಭಟನಾಕಾರರನ್ನು ಕುರಿತು ಮಾತನಾಡಿ, “ಜಿಲ್ಲಾಧಿಕಾರಿ ಜೊತೆ ಮಾತನಾಡಿ ನಿಮ್ಮ ಸಮಸ್ಯೆ ಬಗ್ಗೆ ಸೂಕ್ತ ಪರಿಹಾರ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ.
ಧರಣಿಯಲ್ಲಿ ನಾಗರಾಜು, ಬೆಟ್ಟಸ್ವಾಮಿ, ವಿದ್ಯಾಸಾಗರ, ಮಧು ಗುಬ್ಬಿ, ನಾಗಸಂದ್ರ ವಿಜಯಕುಮಾರ್, ಈಶ್ವರಯ್ಯ, ನರಸಿಯಪ್ಪ, ಬಸವರಾಜು, ಶ್ರೀಧರ್ ಸೇರಿದಂತೆ ಹೋಬಳಿ ಮಟ್ಟದ ದಲಿತ ಮುಖಂಡರು ಇದ್ದರು.