ವಿಜಯನಗರ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19ನೇ ಗೇಟನ್ನು ತಕ್ಷಣವೇ ದುರಸ್ತಿ ಮಾಡಬೇಕು, ಕ್ರಸ್ಟ್ಗೇಟ್ ಕಳಪೆ ನಿರ್ವಹಣೆ ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಆಗ್ರಹಿಸಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಕೂಡಲೆ ಗೇಟ್ ಸರಿಪಡಿಸಲು ಮತ್ತು ಮೇಲುಗಡೆ ನೀರು ನಿಲುಗಡೆಗೆ ಕ್ರಮ ವಹಿಸಲು ಸರ್ಕಾರ ಮುತುವರ್ಜಿ ವಹಿಸಬೇಕು. ಕ್ರಸ್ಟ್ ಗೇಟ್ಗಳ ನಿರಂತರ ಪರಿಶೀಲನೆ ಮತ್ತು ಅಗತ್ಯ ಕ್ರಮವಹಿಸುವಲ್ಲಿ ಆದ ಲೋಪದಿಂದಾಗಿಯೇ ತುಂಗಭದ್ರಾ ಆಣೆಕಟ್ಟೆಯ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದಿದೆ. ಅಣೆಕಟ್ಟಿನಲ್ಲಿನ ನೀರು ಬರಿದು ಮಾಡುವ ಅವಘಡಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ 2019 ರಲ್ಲಿ ಇದೇ ಅಣೆಕಟ್ಟಿನ ಎಡದಂಡೆ ಮೇಲ್ಮಟ್ಟದ ಕಾಲುವೆಯ ಬಳಿ ಗೇಟ್ ಮುರಿದು ಸಣ್ಣ ಪ್ರಮಾಣದ ಅವಘಡ ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾದ ಅನುಭವ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಲ್ಲಿದ್ದರೂ ಕೂಡ ಸೂಕ್ತ ನಿರ್ವಹಣೆಯ ಲೋಪ ಮರಳಿ ಉಂಟಾಗಿರುವುದು ಅವರುಗಳ ಬೇಜವಾಬ್ದಾರಿ ನಡೆಯಾಗಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕರ್ನಾಟಕ ರಾಜ್ಯ ಸಮಿತಿ ಕಟುವಾಗಿ ಟೀಕಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಅವಘಡವನ್ನು ಸರಿಪಡಿಸಲು ಅಣೆಕಟ್ಟೆಯಲ್ಲಿ ಸಂಗ್ರಹವಾದ ಶೇ 60 ಪ್ರಮಾಣದ 65 ಟಿಎಂಸಿ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಇದರಿಂದಾಗಿ, ಈ ಅಣೆಕಟ್ಟೆಯ ಫಲಾನುಭವಿಗಳಾದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸುಮಾರು 30 ಲಕ್ಷ ಎಕರೆ ನೀರಾವರಿ ಪ್ರದೇಶದ ರೈತರ ಭವಿಷ್ಯಕ್ಕೆ ತೀವ್ರ ಆತಂಕ ಉಂಟು ಮಾಡಿದೆ. ತಕ್ಷಣವೇ ಅವಘಡವನ್ನು ಸರಿ ಪಡಿಸಲು ಮತ್ತು ನೀರನ್ನು ಉಳಿಸಿಕೊಳ್ಳಲು ತೀವ್ರ ಕ್ರಮಗಳಾಗದಿದ್ದಲ್ಲಿ ಈ ಮೂರು ರಾಜ್ಯಗಳ ರೈತರು ತಲಾ ಎಕರೆಗೆ ಲಕ್ಷಾಂತರ ರೂ ಬೆಳೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ನೀರು ಸಂಗ್ರಹವಾಗುವ ಭರವಸೆಯೂ ಇಲ್ಲ. ಹೀಗಾಗಿ, ಒಟ್ಟಾಗಿ ಗಮನಿಸುವಾಗ ನಷ್ಠದ ಪ್ರಮಾಣ 30,000 ಕೋಟಿ ರೂ. ಗಳಷ್ಟಾಗಲಿದೆ ಎಂದು ರೈತ ಮುಖಂಡ ಹೆಚ್ ಆರ್ ಬಸವರಾಜಪ್ಪ ತಿಳಿಸಿದ್ದಾರೆ.
ಕಳೆದ ವರ್ಷದ ಬರಗಾಲದಿಂದಾಗಿ ಕರ್ನಾಟಕದ ಈ ಭಾಗದ ರೈತರು ನೀರಿನ ಕೊರತೆಯಿಂದ ಬೆಳೆ ನಷ್ಠ ಅನುಭವಿಸಿದ್ದಾರೆ. ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಸೂಕ್ತ ಪರಿಹಾರಗಳನ್ನು ನೀಡಿಲ್ಲ. ಮಾತ್ರವಲ್ಲ, ಬೆಳೆ ವಿಮೆಯನ್ನು ಸಮರ್ಪಕವಾಗಿ ಸಿಗುವಂತೆ ಕ್ರಮವಹಿಸಿಲ್ಲ. ಹೀಗಾಗಿ, ಈ ಬೆಳೆ ನಷ್ಟವು ಈ ಭಾಗದಲ್ಲಿ ರೈತರ ಆತ್ಮಹತ್ಯೆಗಳನ್ನು ತೀವ್ರವಾಗಿ ಹೆಚ್ಚಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ, ರಾಜ್ಯ ಸರ್ಕಾರ ಸಾಲದ ಬಾಧೆಯನ್ನು ತಡೆಯಲು ಅಗತ್ಯ ಕ್ರಮವಹಿಸಬೇಕು. ಮತ್ತು
ಪರಿಸ್ಥಿತಿಯನ್ನು ಸಮರ್ಪಕವಾಗಿ ಅವಲೋಕಿಸಿ, ನದಿಯ ಮೇಲು ಭಾಗದಲ್ಲಿ ನೀರನ್ನು ಸಂರಕ್ಷಿಸಲು ಅಗತ್ಯ ಕ್ರಮವಹಿಸಬೇಕು. ಸಮರೋಪಾದಿಯಲ್ಲಿ ಪರಣಿತರೊಂದಿಗೆ ಗೇಟ್ ನಿರ್ವಹಿಸಲು ಮುಂದಾಗುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬಲವಾಗಿ ಒತ್ತಾಯಿಸುವುದಾಗಿ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ತಿಳಿಸಿದ್ದಾರೆ.
