ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಚಿತ್ತರಂಜನ್ ರವರನ್ನು ಈ ಠಾಣೆಯಿಂದ ಎತ್ತಂಗಡಿ ಮಾಡಲು ಕೆಲವು ಪಟ್ಟಭದ್ರಹಿತಾಸಕ್ತಿಗಳು ಮುಂದಾಗಿವೆ. ಖಡಕ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ರಿರುವ ಚಿತ್ತರಂಜನ್ ರವರನ್ನು ಇಲ್ಲಿಂದ ಎತ್ತಂಗಡಿ ಮಾಡಿದಲ್ಲಿ ತುರುವೇಕೆರೆ ಸರ್ಕಲ್ ಇನ್ಸ್ ಪೆಕ್ಟರ್ ಕಛೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ದಂಡಿನಶಿವರ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ದಂಡಿನಶಿವರದ ಅಂಬೇಡ್ಕರ್ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಐ ಚಿತ್ತರಂಜನ್ ರವರು ಈ ಠಾಣೆಗೆ ಆಗಮಿಸಿದ ನಂತರ ಇಡೀ ದಂಡಿನಶಿವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳಕಾಕರ ಕಾಟವಿಲ್ಲದಂತಾಗಿದೆ. ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಮಾಡುತ್ತಿದ್ದವರಿಗೆ ಸಿಂಹಸ್ವಪ್ನವಾಗಿದ್ದಾರೆ. ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಹಲವಾರು ಮಂದಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಸಮಾಜದ್ರೋಹಿಗಳಿಗೆ ಕಾನೂನು ಕ್ರಮ ಜರುಗಿಸುವ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಮದ್ಯದಂಗಡಿಗಳು ಬೆಳಗ್ಗೆ 6 ಗಂಟೆಗೇ ತೆರೆಯುತ್ತಿದ್ದವು. ಇದರಿಂದಾಗಿ ಕುಡುಕರ ಹಾವಳಿ ಬೆಳಗ್ಗೆಯೇ ಪ್ರಾರಂಭವಾಗುತ್ತಿತ್ತು. ಮದ್ಯದಂಗಡಿಗಳ ಮಾಲೀಕರನ್ನು ಕರೆದು ಎಚ್ಚರಿಕೆ ನೀಡಿ ಸಮಯ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಕಾನೂನು ಪರಿಪಾಲನೆ ಮಾಡುತ್ತಿರುವ ಇಂತಹ ಖಡಕ್ ಅಧಿಕಾರಿಯನ್ನು ಕೆಲವು ಪಟ್ಟಭದ್ರಹಿತಾಸಕ್ತಿಗಳು ಈ ಠಾಣೆಯಿಂದ ವರ್ಗಾಯಿಸಲು ಮುಂದಾಗಿವೆ. ಇದಕ್ಕೆ ಜನಪ್ರತಿನಿಧಿಗಳೂ ಸಹ ಕೈ ಜೋಡಿಸಿದ್ದಾರೆ. ಈ ಎಸೈ ಚಿತ್ತರಂಜನ್ ರವರು ಜನ ಸಾಮಾನ್ಯರಿಗೆ ಪೋಲಿಸ್ ಠಾಣೆಯಲ್ಲಿ ಗೌರವ ನೀಡುತ್ತಿದ್ದಾರೆ. ಪೋಲಿಸ್ ಠಾಣೆಯನ್ನು ಜನಸ್ನೇಹಿಯಾಗಿ ಪರಿವರ್ತಿಸಿದ್ದಾರೆ. ಇಂತಹ ಜನಪರ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಪ್ರಯತ್ನಿಸಿದಲ್ಲಿ ತಾಲೂಕು ಕೇಂದ್ರದಲ್ಲಿ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಸಂಚಾಲಕ ದಂಡಿನಶಿವರ ಕುಮಾರ್ ಎಚ್ಚರಿಸಿದ್ದಾರೆ. ಕಾಣದ ಕೈಗಳು ವರ್ಗಾವಣೆಗೆ ಪ್ರಯತ್ನಿಸಿದಲ್ಲಿ ಅಂತಹವರ ಮನೆ ಮುಂದೆಯೂ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಡಿ.ಆರ್.ಲಕ್ಷ್ಮೀಶ್, ಪದಾದಿಕಾರಿಗಳಾದ ಶೇಖರ್, ದಂಡಿನ ಶಿವರ ಹೋಬಳಿ ಸಂಚಾಲಕ ಶಂಕರ್ ಉಪಸ್ಥಿತರಿದ್ದರು.
ವರದಿ – ಎಸ್. ನಾಗಭೂಷಣ್