ನೊಳಂಬ ಲಿಂಗಾಯಿತ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಗರ ಪ್ರದೇಶದಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಬೇಕು ಎಂದು ಕೆರಗೋಡಿ ರಂಗಾಪುರ ಮಠದ ಶ್ರೀಗುರುಪರದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.
ತುರುವೇಕೆರೆ ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯಿತ ಸಂಘದಿಂದ ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 9 ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಲಿಂಗಾಯಿತ ಸಮುದಾಯದ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕಿದೆ. ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡುವಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿರುವ ನಮ್ಮ ಸಮುದಾಯ ಮಕ್ಕಳಿಗೆ ಬೆಂಗಳೂರು, ಮೈಸೂರು ನಗರದಲ್ಲಿ ನೊಳಂಬ ಲಿಂಗಾಯಿತ ಸಂಘ ಹಾಸ್ಟಲ್ ವ್ಯವಸ್ಥೆ ಕಲ್ಪಿಸಿದೆ. ಇಂತಹ ಹಾಸ್ಟಲ್ಗಳನ್ನು ರಾಜ್ಯದ ಪ್ರತಿಷ್ಟಿತ ನಗರಗಳಲ್ಲಿಯೂ ವಿಸ್ತರಿಸಬೇಕಿದೆ ಎಂದರು.
ಭಕ್ತರ ಸಹಾಯದಿಂದ ಮಠ ಮಂದಿರಗಳು ನಡೆಯುವಂತೆ ದಾನಿಗಳ ನೆರವಿನಿಂದ ಸಂಘ ಸಂಸ್ಥೆಗಳು ಸೇವೆ ಮಾಡುತ್ತಿವೆ. ನಮ್ಮ ಸಮುದಾಯ ಅಭಿವೃದ್ದಿಗೆ ನೊಳಂಬ ಲಿಂಗಾಯಿತ ಸಂಘ ಶ್ರಮಿಸುತ್ತಿದ್ದು ಸಮುದಾಯದ ಎಲ್ಲರೂ ಸಹಕಾರ ನೀಡಬೇಕು. ಸಮುದಾಯ ಅಭಿವೃದ್ದಿಗೆ ನಮ್ಮ ಸಹಕಾರ ಸದಾ ಇದ್ದು ತಿಪಟೂರು ತಾಲೂಕಿನಿಂದ ಸ್ಥಾಪನೆಯಾದ ನೊಳಂಬ ಲಿಂಗಾಯಿತ ಸಂಘಕ್ಕೆ ನಿವೇಶನ ಇಲ್ಲ. ಈ ಕುರಿತು ಕೇಂದ್ರ ಸಂಘದವರು ಮನವಿ ಮಾಡಿದ್ದು ಅತೀ ಶೀಘ್ರದಲ್ಲಿಯೇ ತಿಪಟೂರು ಪಟ್ಟಣದಲ್ಲಿ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ರಾಜ್ಯದ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಬೇಕಿದೆ. ಸಿದ್ದರಾಮಯ್ಯ ಮಾಡಿಸಿರುವ ರಾಜ್ಯದ ಜಾತಿ ಗಣತಿಯಲ್ಲಿ ದೊಡ್ಡ ಸಮಾಜಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ದೊಡ್ಡ ಸಮಾಜವಾದ ಒಕ್ಕಲಿಗ, ಲಿಂಗಾಯಿತ ಸಮಾಜದಲ್ಲಿ ಹಲವು ಉಪ ಜಾತಿಗಳಿದ್ದು ಅವುಗಳನ್ನು ಒಂದೇ ಜಾತಿಗೆ ಸೇರಿಸಬೇಕು ಅದನ್ನು ಬಿಟ್ಟು ಉಪ ಜಾತಿಗಳನ್ನು ಮಾಡಿ ಒಡೆಯುತ್ತಿದ್ದಾರೆ. ಈ ಜಾತಿಗಣತಿಯನ್ನು ವಿರೋಧಿಸಬೇಕಿದೆ ಎಂದರು.
ಈ ಸಂಧರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಉದಾರವಾಗಿ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ನೊಳಂಬ ಲಿಂಗಾಯಿತ ರಾಜ್ಯ ಸಂಘದ ಅಧ್ಯಕ್ಷ ಬಿಕೆ. ಚಂದ್ರಶೇಖರ್ ಇನ್ನಿರರು ಇದ್ದರು.
ವರದಿ- ಎಸ್. ನಾಗಭೂಷಣ್