ತುರುವೇಕೆರೆ ತಾಲೂಕಿನ ಮುನಿಯೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಲಕ್ಷ್ಮೀ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾಗಿದ್ದ ವೈ.ಗಂಗಣ್ಣ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. 16 ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಗೆ 12 ಸದಸ್ಯರು ಭಾಗವಹಿಸಿದ್ದರು. 4 ಸದಸ್ಯರು ಗೈರು ಹಾಜರಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ವೆಂಕಟೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಗ್ರೇಡ್ 2 ತಹಸೀಲ್ದಾರ್ ಸುಮತಿ ನೂತನ ಅಧ್ಯಕ್ಷರಾಗಿ ಲಕ್ಷ್ಮೀ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಎಂ.ಟಿ.ವೀಣಾ ಮುಂದುವರೆದಿದ್ದಾರೆ. ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ನೂತನ ಅಧ್ಯಕ್ಷರ ಬೆಂಬಲಿಗರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವರಮಹಾಲಕ್ಷಮ್ಮ, ರಾಜೇಶ್ವರಿ, ಎಂ.ಜಿ.ವಿಶ್ವಮೂರ್ತಿ, ಪುಷ್ಪಲತಾ, ಜಿ.ಕಾಂತರಾಜು, ಜಿ.ಗಂಗಾಧರಸ್ವಾಮಿ, ಕಾವ್ಯ, ಬಿ.ಆರ್.ರವೀಶ್, ಕಮಲ ಪಂಚಾಯಿತಿ ಕಾರ್ಯದರ್ಶಿ ಕಲಾವತಿ ಮುದ್ದಕ್ಕನವರು. ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ನಾಮಿನಿ ಸದಸ್ಯ ರುದ್ರೇಶ್, ಗ್ರಾಮದ ಮುಖಂಡರಾದ ಎಂ.ಡಿ.ಮೂರ್ತಿ, ಪ್ರಕಾಶ್, ಲಿಂಗರಾಜು ಸೇರಿ ಇತರರು ಅಭಿನಂದಿಸಿದರು.
ವರದಿ – ನಾಗಭೂಷಣ್ ತುರುವೇಕೆರೆ