ಮಂಗಳೂರಿನ ಸಂತ ಜೆರೋಸಾ ಶಾಲೆಯ ಪ್ರಕರಣದಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿಯವರು ನಡೆದುಕೊಂಡ ರೀತಿ ನಾಚಿಕೆಗೇಡಿನದ್ದು ಎಂದು ಉಡುಪಿಯಲ್ಲಿ ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಏನೋ ಒಂದು ವಿಚಾರ ನಡೆದಿದ್ದನ್ನೆ ನೆಪವಾಗಿಟ್ಟುಕೊಂಡು, ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲೆಯ ಗೇಟಿನ ಹೊರಗಡೆ ಮುಗ್ದ ಮಕ್ಕಳನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದ್ದು ಅಲ್ಲದೆ, ಘೋಷಣೆಗಳನ್ನು ಕೂಗಲು ಪ್ರೇರೇಪಿಸಿರುವುದು ಖಂಡನೀಯ. ಅವರು ಓರ್ವ ಶಾಸಕರು ಎಂಬುದನ್ನು ಮರೆತು ನಡೆದುಕೊಂಡ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದಾಗಿದೆ. ಓರ್ವ ಶಾಸಕರಾಗಿ ಆಯ್ಕೆಯಾದವರು ವಿವಿಧ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಶಾಸನ ರಚನೆಯಲ್ಲಿ ವಿಶೇಷ ಜವಾಬ್ದಾರಿ ಹೊಂದಿರುವ ಓರ್ವ ಶಾಸಕ ಕೇವಲ ಒಂದು ಪಕ್ಷ, ಜಾತಿಗೆ ಸೀಮಿತರಲ್ಲ ಎನ್ನುವುದನ್ನು ಅವರು ಮರೆತು ವರ್ತಿಸಿದ್ದಾರೆ.
ಯಾವುದೇ ಘಟನೆ ನಡೆದಾಗ ಅವರಿಗೆ ಇರುವ ಅಧಿಕಾರವನ್ನು ಬಳಸಿಕೊಂಡು ನೇರವಾಗಿ ಶಾಲೆಗೆ ತೆರಳಿ ಅಲ್ಲಿಯ ಘಟನೆಯ ಕುರಿತು ಮಾಹಿತಿ ಪಡೆದು ಸಮಸ್ಯೆಯನ್ನು ಪರಿಹಾರ ಮಾಡುವುದಾಗಿದೆ. ಇಲ್ಲವಾದರೆ ಅದನ್ನು ಸೂಕ್ತ ತನಿಖೆಗೆ ಸೂಚನೆ ಕೊಟ್ಟು, ಅದರಲ್ಲಿ ಯಾವ ಫಲಿತಾಂಶ ಬರುವುದೋ ಅದರ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಸಂಸ್ಥೆಯ ಗೇಟಿನ ಒಳಗಡೆ ಬರದೆ ಶಾಲೆಯ ಮುಖ್ಯಸ್ಥರು ಮನವಿ ಮಾಡಿಕೊಂಡರೂ ಕೂಡ ಯಾವುದೇ ಸ್ಪಂದನೆ ನೀಡದೆ ಮಕ್ಕಳನ್ನು ಪ್ರೇರೇಪಿಸಿ ಪ್ರತಿಭಟಿಸಿದ್ದು ಅವರ ಘನತೆಗೆ ತಕ್ಕುದಲ್ಲ.
ಕಳೆದ ಹಲವಾರು ವರ್ಷಗಳಿಂದ ಕ್ರೈಸ್ತ ಸಂಸ್ಥೆಗಳು ಮತ್ತು ಕ್ರೈಸ್ತ ಧರ್ಮದ ಬಂಧು, ಭಗಿನಿಯರು ನೀಡಿದ ಸೇವೆ ಪ್ರತಿಯೊಂದು ಸಮುದಾಯ ಕೂಡ ಹೊಗಳುತ್ತದೆ. ಯಾವುದೇ ಜಾತಿ ಭೇದವಿಲ್ಲದೆ ಪ್ರತಿಯೊಂದು ಮಗುವಿಗೆ ಮೌಲ್ಯಯುತ ಶಿಕ್ಷಣ ನೀಡಿಕೊಂಡು ಬಂದಿರುವುದು ಪ್ರತಿಯೊಬ್ಬರಿಗೂ ತಿಳಿದ ವಿಚಾರವಾಗಿದೆ. ಓರ್ವ ಶಾಸಕ ಭರತ್ ಶೆಟ್ಟಿಯವರು ಕ್ರೈಸ್ತ ಶಿಕ್ಷಣ ಸಂಸ್ಥೆಗಳನ್ನು ತ್ಯಜಿಸಲು ಕರೆ ನೀಡಿರುವುದು ನಿಜಕ್ಕೂ ಖೇದಕರ. ಇಂತಹ ಹೇಳಿಕೆ ನೀಡಿರುವ ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಇಂತಹ ಘಟನೆಗಳನ್ನು ನೋಡಿದಾಗ ನಮ್ಮ ಸಮಾಜ ಎತ್ತ ಕಡೆ ಸಾಗುತ್ತಿದೆ ಎನ್ನುವ ಸಂಶಯ ಕಾಡುತ್ತಿದೆ ಎಂದರು.
ಇಂದಿನ ದಿನಗಳಲ್ಲಿ ಪ್ರತಿಯೊಂದು ವಿಚಾರಗಳಲ್ಲಿ ಧರ್ಮವನ್ನು ಬೆರೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದಕ್ಕೆ ನೇರ ಕಾರಣ ರಾಜಕೀಯ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ರೀತಿ ಮುಂದುವರೆದಲ್ಲಿ ನಮ್ಮ ಮಕ್ಕಳು ದೇಶದ ಉತ್ತಮ ನಾಗರಿಕರಾಗಿ ಮುಂದುವರೆಯಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ. ಇಂತಹ ಘಟನೆಗಳಾದಾಗ ನಮಗೆ ಕೂಡ ಪ್ರತಿಭಟನೆ ಮಾಡಲು ಸಾಧ್ಯವಿದೆ ಆದರೆ ಕ್ರೈಸ್ತ ಸಮುದಾಯ ಶಾಂತಿಯನ್ನು ಬಯಸುವವರಾಗಿದ್ದು ನ್ಯಾಯ ಮತ್ತು ಸಂವಿಧಾನಕ್ಕೆ ತಲೆಬಾಗುವವರು. ಈ ಘಟನೆಗೆ ಸಂಬಂಧಿಸಿ ತನಿಖಾಧಿಕಾರಿಯನ್ನು ನೇಮಿಸಿದ್ದು ಸೂಕ್ತ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಿದ್ದರೂ ಕೂಡ ಅಂತಹವರಿಗೆ ಸೂಕ್ತ ಕ್ರಮ ನಡೆಯಲಿ ಎಂದು ಅವರು ಆಗ್ರಹಿಸಿದ್ದಾರೆ.