18ನೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಕನ್ನಡ ಪ್ರತಿಯನ್ನು, ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಸಭೆಯಲ್ಲಿ ಬಿಡುಗಡೆಗೊಳಿಸಿತು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಹಿರಿಯ ಮುಖಂಡ ಕೆ.ಶಂಕರ್ ವಹಿಸಿದ್ದರು.
ಈ ವೇಳೆ ಮಾತನಾಡಿದ ಮುಖಂಡರು, ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಸಂವಿಧಾನದ ನಾಲ್ಕು ಆಧಾರ ಸ್ತಂಭಗಳನ್ನು, ಜಾತ್ಯತೀತ, ಪ್ರಜಾಪ್ರಭುತ್ವ, ಆರ್ಥಿಕ ಸ್ವಾವಲಂಬನೆ, ಒಕ್ಕೂಟವಾದ ಮತ್ತು ಸಾಮಾಜಿಕ ನ್ಯಾಯ ಇವುಗಳನ್ನು ವ್ಯವಸ್ಥಿತವಾಗಿ ಕಳಚಿ ಹಾಕುತ್ತಿದೆ. ಜನರಲ್ಲಿ ವಿಭಜನೆ ಉಂಟು ಮಾಡುವ ಸಲುವಾಗಿ ವಿಷಪೂರಿತ ಕೋಮುವಾದಿ ಸಿದ್ದಾಂತವನ್ನು ಹೇರುತ್ತಿದೆ ಎಂದರು.
ಬೆಲೆ ಏರಿಕೆ, ನಿರುದ್ಯೋಗ ತೀವ್ರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರು ಕಷ್ಟಕ್ಕೆ ಒಳಗಾಗಿದ್ದಾರೆ. ಜನರ ತೆರಿಗೆಯ ಹಣದಿಂದ ನಿರ್ಮಾಣವಾದ ಸಾರ್ವಜನಿಕ ಆಸ್ತಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ದುರ್ನೀತಿಯ ಬದಲಾಗಿ ಸಿಪಿಐ(ಎಂ), ರೈತ, ಕಾರ್ಮಿಕ, ದಲಿತ, ಆದಿವಾಸಿ,ಮಹಿಳೆಯರು, ಸಣ್ಣ ಉದ್ದಿಮೆದಾರರ ಪರವಾಗಿರುವ ಪರ್ಯಾಯ ಧೋರಣೆಗಳನ್ನು ಸೂಚಿಸಿದೆ ಎಂದರು.
ಸಿಪಿಐ(ಎಂ) ಮತದಾರರಲ್ಲಿ 3 ಮನವಿಯನ್ನು ಮಾಡಿದೆ
- ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಸೋಲಿಸುವುದು
- ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಬಲವನ್ನು ಹೆಚ್ಚಿಸುವುದು
- ಕೇಂದ್ರದಲ್ಲಿ ಪರ್ಯಾಯ ಜಾತ್ಯಾತೀತ ಸರ್ಕಾರದ ರಚನೆಯನ್ನು ಖಾತ್ರಿಗೊಳಿಸುವುದು.
ಜಿಲ್ಲಾ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಎಚ್. ನರಸಿಂಹ, ಸುರೇಶ ಕಲ್ಲಾಗರ, ವೆಂಕಟೇಶ ಕೋಣಿ, ಶಶಿಧರ, ಬಲ್ಕಿಸ್, ಶೀಲಾವತಿ ಮೊದಲಾದವರು ಭಾಗವಹಿಸಿದ ಸಭೆಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು ಮಾತ್ರವಲ್ಲದೆ ‘I.N.D.I.A.’ ಕೂಟದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದು ನಿರ್ಧರಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಮಿತಿ ಪ್ರಕಟಿಸಿದ, ‘ನಾನು ಬಾಂಡ್-ಚುನಾವಣಾ ಬಾಂಡ್’ ಭರ್ಜರಿ ಸುಳ್ಳುಗಳೇ ಮೋದಿ ಗ್ಯಾರಂಟಿಗಳು ಪುಸ್ತಕವನ್ನು ಸಹ ಬಿಡುಗಡೆ ಮಾಡಿದರು.
