ಉಡುಪಿ ನಗರದ ಖಾಸಗಿಯವರ ಸ್ಥಳದಲ್ಲಿದ್ದ ಮರದ ಕೊಂಬೆಗೆ, ನೇಣುಬಿಗಿದ ಸ್ಥಿತಿಯಲ್ಲಿ ಗಂಡಸಿನ ಕಳೇಬರ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. ವ್ಯಕ್ತಿ ಮೃತಪಟ್ಟು ಎರಡು ತಿಂಗಳು ಕಳೆದಿರುವ ಶಂಕೆ ವ್ಯಕ್ತವಾಗಿದೆ.
ಶವವು ಸಂಪೂರ್ಣ ಕೊಳೆತು ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ವಾರಸುದಾರರು ನಗರ ಪೋಲಿಸ್ ಠಾಣೆಯ ನಾಗರೀಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ನಗರ ಪೋಲಿಸ್ ಠಾಣೆಯ ತನಿಖಾಧಿಕಾರಿ ಈರಣ್ಣ, ಎ ಎಸ್ ಐ ಹರೀಶ್, ಜಾಸ್ವ ಘಟನಾ ಸ್ಥಳದಲ್ಲಿದ್ದು ಮಹಜರು ಪ್ರಕ್ರಿಯೆ ನಡೆಸಿದರು.
ಮರದ ಕೊಂಬೆಗೆ ಕಟ್ಟಿದ ಕುಣಿಕೆಯಲ್ಲಿ ನೇಲುತ್ತಿದ್ದ ಕಳೇಬರವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಕೆಳಗಿಳಿಸಿದರು. ಬಳಿಕ ಕಳೇಬರವನ್ನು ಟಾರ್ಪಲಿನಲ್ಲಿ ಭದ್ರಗೊಳಿಸಿಕೊಂಡು ನಾಗರೀಕ ಸಮಿತಿಯ ಉಚಿತ ಸೇವೆಯ ಆಂಬುಲೆನ್ಸಿನ ಮೂಲಕ ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಿಕೊಟ್ಟು ಇಲಾಖೆಗೆ ನೆರವಾದರು.
