ಉಡುಪಿ ಜಿಲ್ಲೆಯಾದ್ಯಂತ ಭತ್ತದ ಬೆಳೆ ಕಟಾವು ಆರಂಭವಾಗಿದ್ದು, ಭತ್ತ ಕಟಾವು ಯಂತ್ರದ ಮಾಲೀಕರು ಹಾಗೂ ದಲ್ಲಾಳಿಗಳು ಪ್ರತಿ ಘಂಟೆಗೆ ₹2400ಕ್ಕೂ ಅಧಿಕ ಹಣವನ್ನು ವಸೂಲಿ ಮಾಡಿ ರೈತರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಲನ ಸಮಿತಿ ನಿಯೋಗವು ಇಂದು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ನೀಡಿತು.
“ಕಷ್ಟದಲ್ಲಿ ಭತ್ತ ಬೆಳೆದ ರೈತರು ಜಿಲ್ಲೆಗಳಿಗೆ ಬರುವ ಕಟಾವು ಯಂತ್ರಗಳ ವಸೂಲಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲಾಧಿಕಾರಿಗಳು ನಿಗದಿತ ದರ ವಿಧಿಸಿ ಪ್ರಕಟಣೆ ಹೊರಡಿಸಬೇಕು. ಅಲ್ಲದೇ ರೈತರು, ಕಟಾವು ಯಂತ್ರದ ಮಾಲೀಕರು ಹಾಗೂ ಕೃಷಿ ಇಲಾಖೆ ಜತೆಗೆ ಜಂಟಿಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು.
ಅಕ್ಟೋಬರ್ ತಿಂಗಳಲ್ಲಿ ಖರೀದಿ ಕೇಂದ್ರಕ್ಕೆ ಆಗ್ರಹ
“ಬಹುತೇಕ ರೈತರಿಗೆ ಅನುಕೂಲವಾಗುವ ಅಕ್ಟೋಬರ್ ತಿಂಗಳಲ್ಲೇ ಬೆಂಬಲ ಬೆಲೆ ಘೋಷಿಸಿ ಭತ್ತದ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿದ್ಯುತ್ ಪರಿವರ್ತಕದಿಂದ ಬೆಂಕಿ; ಆತಂಕದಲ್ಲೇ ದಿನದೂಡುತ್ತಿರುವ ಸ್ಥಳೀಯರು
ರೈತ ಸಂಘದ ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಚಂದ್ರಶೇಖರ ವಿ, ರೈತರಾದ ಅನಿಲ್ ಬಾರ್ಕೂರು, ಗಣೇಶ್ ಪೂಜಾರಿ, ಜಲಂಧರ್, ಕಾರ್ಮಿಕ ಮುಖಂಡರಾದ ಸುರೇಶ್ ಕಲ್ಲಾಗರ, ಶಶಿಧರ ಗೊಲ್ಲ, ಕೃಷಿಕೂಲಿಕಾರ ಮುಖಂಡ ಕವಿರಾಜ್ ಎಸ್ ಮೋಹನ್ ಇದ್ದರು.
