ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯ ವತಿಯಿಂದ ಇತ್ತೀಚೆಗೆ ಉಡುಪಿ ಜಿಲ್ಲೆಯ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರಿರಾಮ್ ಶಂಕರ್ ಅವರನ್ನು ಪುಷ್ಪ ಗುಚ್ಚ ನೀಡಿ ಸ್ವಾಗತಿಸಲಾಯಿತು.
ದ.ಸಂ.ಸ.ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ರವರು ಉಡುಪಿ ಜಿಲ್ಲೆಯು ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿನ ಕೆಲವೊಂದು ವಿಚ್ಛಿಧ್ರಕಾರಿ ಶಕ್ತಿಗಳು ಇಲ್ಲಿನ ಸೌಹಾರ್ದತೆಯನ್ನು ಕೆಡಿಸಲು ಹಲವಾರು ಬಾರಿ ಪ್ರಯತ್ನಿಸಿದರೂ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ಪ್ರಗತಿಪರ ಸಂಘಟನೆಗಳು ಅದಕ್ಕೆ ಅವಕಾಶ ಕೊಡದೆ, ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಪ್ರತಿಪಾದಿಸುತ್ತಾ, ಚಳುವಳಿ ರೂಪಿಸಿಕೊಂಡು ಬಂದಿದೆ. ಹೊಸದಾಗಿ ಬಂದ ತಾವೂ ಕೂಡ ಇದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಮನವಿಮಾಡಿಕೊಳ್ಳಲಾಯಿತು.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳಲ್ಲೂ ತಾಲೂಕು ಶಾಖೆ ಹೊಂದಿರುವ ನಮ್ಮ ಸಂಘಟನೆ ಸದಾ ಶೋಷಿತರ ಪರ ನಿರಂತರ ಹೋರಾಟ ನಡೆಸುತ್ತಾ ಬರುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಅವರು ಹನೆಹಳ್ಳಿ ಶೂಟೌಟ್ ಪ್ರಕರಣ, ಕೊಲ್ಲೂರು ಗಂಗೆ ಕೊರಗ ಪ್ರಕರಣ, ಹೆಬ್ರಿಯ ಪ್ರೀತಿ ವಂಚನೆಯಿಂದ ದಲಿತ ಹುಡುಗಿಯ ಆತ್ಮಹತ್ಯೆ ಪ್ರಕರಣ, ಮತ್ತು ಮಾವಿನಕಟ್ಟೆಯ ದಲಿತ ಯುವತಿಯ ಮೇಲೆ ಹಲ್ಲೆ ಪ್ರಕರಣವನ್ನೂ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿಯಾದ ನಿಯೋಗದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಭಾಸ್ಕರ್ ಮಾಸ್ತರ್ ಕುಂಜಿಬೆಟ್ಟು , ರಾಜೇಂದ್ರ ಮಾಸ್ಟರ್ ಬೆಳ್ಳೆ , ಕುಮಾರ್ ಕೋಟಾ, ಶ್ರೀಧರ ಕುಂಜಿಬೆಟ್ಟು, ಬ್ರಹ್ಮಾವರ ತಾಲೂಕು ಸಂಚಾಲಕರಾದ ಹರೀಶ್ಚಂದ್ರ ಬಿರ್ತಿ ಉಪಸ್ಥಿತರಿದ್ದರು.