ರಂಗಭೂಮಿ (ರಿ) ಉಡುಪಿಗೆ 60 ವರ್ಷ ಪೂರೈಸುತ್ತಿದೆ. 1965ರಲ್ಲಿ ಆರಂಭಗೊಂಡು, ಪ್ರತಿಷ್ಠಿತ ಹವ್ಯಾಸಿ ನಾಟಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ “ರಂಗಭೂಮಿ ರಂಗಭಾಷೆ- ನಾಟಕವೆಂದರೆ ಏನು, ಯಾಕೆ ಮತ್ತು ಹೇಗೆ?” ಎಂಬ ಕಾರ್ಯಾಗಾರವನ್ನು ಆಯೋಜಿಸಲು ಉದ್ದೇಶಿಸಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷರಾದ ಡಾ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಉಡುಪಿಯಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಂಗಭೂಮಿಯು ನಾಟಕಗಳ ನಿರ್ಮಾಣ ಮತ್ತು ಪ್ರದರ್ಶನ, ನಾಟಕ ಸ್ಪರ್ಧೆಗಳ ಆಯೋಜನೆ, ರಂಗ ಕಾರ್ಯಾಗಾರಗಳು, ರಂಗಸನಾನ. ಮಕ್ಕಳ ಶಿಬಿರ. ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಕಾವ್ಯಗಾಯನ, ಕಲಾತ್ಮಕ ಚಲನಚಿತ್ರಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಉಡುಪಿಯ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದರಿಂದ ನೂರಾರು ಹವ್ಯಾಸಿ ಕಲಾವಿದರು, ಹತ್ತಾರು ನಾಟಕಗಳು ಹಾಗೂ ಹಲವು ನಾಟಕ ತಂಡಗಳು ಬೆಳೆದಿವೆ. ನಾಟಕಗಳನ್ನು ನೋಡಿ, ಅಸ್ವಾದಿಸುವ ಪ್ರಜ್ಞಾವಂತ ಪ್ರೇಕ್ಷಕ ವರ್ಗ ಹುಟ್ಟಿ ಬೆಳೆದಿದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಮಾತನಾಡಿ, ರಂಗಭೂಮಿ ಉಡುಪಿ ಅರುವತ್ತರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ರಂಗಭೂಮಿ (ರಿ)ಯು, ಹಲವು ಅರ್ಥಪೂರ್ಣ ಯೋಜನೆಗಳನ್ನು ಹಮ್ಮಿಕೊಂಡಿದೆ. ಯುವಜನರು ಮತ್ತು ಮಕ್ಕಳಲ್ಲಿ ರಂಗಭೂಮಿಯ ಕುರಿತು ಅರಿವು ಮೂಡಿಸಿ, ಅಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲು ಉದ್ದೇಶಿಸಿದೆ. ಇದರ ಮೊದಲ ಹೆಜ್ಜೆಯಾಗಿ, ಉಡುಪಿಯ ಆಯ್ದ ಹನ್ನೆರಡು ಪ್ರೌಢಶಾಲೆಗಳಲ್ಲಿ “ರಂಗಭೂಮಿ ರಂಗಶಿಕ್ಷಣ” ಎಂಬ ರಂಗ ತರಬೇತಿ ಮತ್ತು ನಾಟಕ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.
ಇದರಲ್ಲಿ ಹತ್ತು ಹಿರಿ-ಕಿರಿಯ ನಿರ್ದೇಶಕರನ್ನು ನಿಯೋಜಿಸಿದ್ದು, ಸುಮಾರು ಮುನ್ನೂರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಈ ನಾಟಕಗಳು ಆಯಾ ಶಾಲೆಯ ವಾರ್ಷಿಕೋತ್ಸವಗಳಲ್ಲಿ ಹಾಗೂ ಡಿಸೆಂಬರ್ ಮೂರನೆಯ ವಾರದಲ್ಲಿ ಹಮ್ಮಿಕೊಳ್ಳಲಿರುವ ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶಿತವಾಗಲಿವೆ ಎಂದು ಹೇಳಿದರು.
ಕಾಲೇಜು ವಿದ್ಯಾರ್ಥಿಗಳಿಗೆ “ರಂಗಭೂಮಿ ರಂಗಭಾಷೆ- ನಾಟಕವೆಂದರೆ ಏನು, ಯಾಕೆ ಮತ್ತು ಹೇಗೆ?” ಎಂಬ ಕಾರ್ಯಾಗಾರವನ್ನು ಆಯೋಜಿಸಲು ಉದ್ದೇಶಿಸಿದೆ. “ಯಕ್ಷ ರಂಗಾಯಣ ಕಾರ್ಕಳ” ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ಸಹಯೋಗದಲ್ಲಿ ಆಯೋಜಿಸುತ್ತಿರುವ ಈ ಶಿಬಿರದ ನೇತೃತ್ವವನ್ನು ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಶ್ರೀ ವೆಂಕಟರಮಣ ಐತಾಳರು ವಹಿಸಲಿದ್ದು, ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ನಾಗಾಭರಣ, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಕೆ. ಜಿ. ಕೃಷ್ಣಮೂರ್ತಿ, ಶ್ರೀಪಾದ ಭಟ್, ಮಂಜು ಕೊಡಗು, ವಿನೀತ್ ಕುಮಾರ್, ಶ್ವೇತಾ ಎಚ್. ಕೆ. ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. 16, 17, 18 ನವಂಬರ್ 2024ರಂದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಆವರಣದಲ್ಲಿ ನಡೆಯಲಿರುವ ವಸತಿ ಸಹಿತ ಶಿಬಿರದಲ್ಲಿ ಒಂದು ನೂರಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪ್ರಸಿದ್ಧ ರಂಗನಿರ್ದೇಶಕ ಪ್ರಸನ್ನ ಶಿಬಿರವನ್ನು ಉದ್ಘಾಟಿಸಿ, ಆಶಯ ಭಾಷಣ ಮಾಡಲಿದ್ದು, ರಂಗಭೂಮಿ (ರಿ) ಉಡುಪಿಯ ಗೌರವಾಧ್ಯಕ್ಷರಾದ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ನಟ ಹಾಗೂ ನಿರ್ದೇಶಕ ಮಂಡ್ಯ ರಮೇಶ್, ಕಲ್ಯಾಣಪುರ ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕ ವಂದನೀಯ ಮಾನ್ಸಿಂಜರ್ ಫರ್ಡಿನಾಡ್ ಗೊನ್ಸಾಲ್ವಿಸ್, ರಂಗ ಸಮಾಜದ ಸದಸ್ಯರಾದ ರಂಗತಜ್ಞ ಶಶಿಧರ ಭಾರಿಘಾಟ್ ಹಾಗೂ ರಂಗನಿರ್ದೇಶಕಿ ಶ್ವೇತಾರಾಣಿ ಎಚ್. ಕೆ. ಮುಖ್ಯ ಅತಿಥಿಗಳಾಗಿದ್ದು, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಶ್ರೀ ವೆಂಕಟರಮಣ ಐತಾಳ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ರಂಗಭೂಮಿ ರಂಗಭಾಷೆ ಕಾರ್ಯಾಗಾರದ ಸಂಚಾಲಕ ಎಚ್. ಜಯಪ್ರಕಾಶ ಕೆದ್ಲಾಯ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಾಗಾರದಲ್ಲಿ ಅಭಿನಯ ದರ್ಪಣ ಚಿಕ್ಕಮಗಳೂರು ತಂಡದಿಂದ ಮುಸ್ಟಂಜೆಯಲ್ಲಿ ನಡೆದ ಘಟನೆ. ಕಿನ್ನರ ಮೇಳ ತುಮರಿ ತಂಡದಿಂದ ಇರುವೆ ಪುರಾಣ. ಭಳಿರೇ ವಿಚಿತ್ರಂ ತಂಡದಿಂದ ದಶಾನನ ಸ್ವಪ್ನ ಸಿದ್ಧಿ ಹಾಗೂ ಒಡನಾಡ ತಂಡದಿಂದ ಆನೆ ಡಾಕ್ಟರ್ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.
ನವೆಂಬರ್ 18, 2024ರಂದು ಸಂಜೆ 3.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಂಗಭೂಮಿ (ರಿ) ಉಡುಪಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ವಹಿಸಲಿದ್ದು, ಕೆ. ಜಿ. ಕೃಷ್ಣಮೂರ್ತಿ ಸಮಾರೋಪದ ನುಡಿಗಳನ್ನಾಡಲಿದ್ದಾರೆ. ರಂಗಕರ್ಮಿ ಎನ್. ವಿ. ಶ್ರೀಕಾಂತ್ ಮುಖ್ಯ ಅತಿಥಿಯಾಗಿದ್ದು, ಡಾ. ವಿನ್ಸೆಂಟ್ ಆಳ್ವ, ಶ್ರೀ ವೆಂಕಟರಮಣ ಐತಾಳ ಪೂರ್ಣಿಮಾ ಹಾಗೂ ಎಚ್. ಜಯಪ್ರಕಾಶ ಕೆದ್ಲಾಯ ಉಪಸ್ಥಿತರಿರಲಿದ್ದಾರೆ.
ಇದನ್ನು ಓದಿದ್ದೀರಾ? ಮೈಸೂರು | ನ.15 ರಿಂದ 25ರವರೆಗೆ ರೈತ, ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಬಡಗಲಪುರ ನಾಗೇಂದ್ರ
ನಮ್ಮ ಯುವಜನಾಂಗವು ಸಶಕ್ತ, ಸಮಗ್ರ ಹಾಗೂ ಬಹುಮುಖಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ಸ್ಪರ್ಧಾತ್ಮಕ ಸಮಾಜದಲ್ಲಿ ಯಶಸ್ವಿಯಾಗಲು ಸಹಕಾರಿಯಾಗುವ ನಿಟ್ಟಿನಲ್ಲಿ ಇತರ ಸಮಾಜಮುಖಿ ಸಂಸ್ಥೆಗಳು ಹಾಗೂ ಶಾಲೆ-ಕಾಲೇಜುಗಳ ಸಹಯೋಗದಲ್ಲಿ ನಡೆಸುತ್ತಿರುವ ಈ ಪ್ರಯತ್ನಗಳಲ್ಲಿ ಸಮಾಜದ ಎಲ್ಲ ಬಾಂಧವರ ಸಹಕಾರವನ್ನು ರಂಗಭೂಮಿ (ರಿ) ಉಡುಪಿಯು ಕೋರುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೇವತಿ ನಾಡಿಗರ್, ರವಿರಾಜ್ ನಾಯಕ್ ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.
