ಎಲ್ಲರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರಿಗೆ, ಅವರ ನೋವು, ಸಂಕಷ್ಟಗಳಿಗೆ ಯಾವುದೇ ಧ್ವನಿ ಇಲ್ಲದಂತಾಗಿದೆ ಎಂದು ನಿವೃತ್ತ ಪತ್ರಕರ್ತ ಕೆ ಶಿವಶಂಕರ್ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಿಗೆ ಮನೆ ಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಉದಯವಾಣಿ ಪತ್ರಿಕೆಯಲ್ಲಿ ಸುಮಾರು 35 ವರ್ಷಗಳ ಕಾಲ ದುಡಿದು, ಹಿರಿಯ ಉಪ ಸಂಪಾದಕರಾಗಿ ನಿವೃತ್ತರಾಗಿರುವ ಇವರನ್ನು ಅವರ ದಶರಥನಗರದ ಮನೆಯಲ್ಲಿ ಸನ್ಮಾನಿಸಿದ ವೇಳೆ ಮಾತನಾಡಿದರು.
“ಧರ್ಮ, ಪಕ್ಷ, ಜಾತಿ ಸೇರಿದಂತೆ ಎಲ್ಲವನ್ನೂ ನಿಲ್ತಿರ್ಪವಾಗಿ ನೋಡುವ ವಿಶೇಷ ಸಾಮರ್ಥ್ಯ ಪತ್ರಕರ್ತರಿಗಿದೆ. ಇದನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಹೆಸರು, ಸಂಪತ್ತು ಸಿಗದಿದ್ದರೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಇರುವ ಪತ್ರಕರ್ತರ ವೃತ್ತಿಯನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಈ ರೀತಿ ಬೇರೆ ಯಾವುದೇ ವೃತ್ತಿಯಲ್ಲೂ ಸಿಗುವುದಿಲ್ಲ. ನಿವೃತ್ತರಾದ ಬಳಿಕವೂ ಏನಾದರೂ ಬರೆದುಕೊಂಡು ಪತ್ರಕರ್ತರಾಗಿ ಮುಂದುವರೆಯುವ ಅವಕಾಶ ಕೂಡ ನಮಗೆ ಇರುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಆದೇಶ ಹಿಂಪಡೆಯಲು ಎಸ್ಎಫ್ಐ ಆಗ್ರಹ
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಅವರು ಕೆ. ಶಿವಶಂಕರ್ ದಂಪತಿಯನ್ನು ಸನ್ಮಾನಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಪತ್ರಕರ್ತರುಗಳಾದ ಶಶಿಧರ್ ಮಾಸ್ತಿಬೈಲು, ಉಮೇಶ್ ಕುಕ್ಕುಪಲ್ಕೆ ಉಪಸ್ಥಿತರಿದ್ದರು.