ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ವರೆಗೆ ರೂ.35 ಕೋಟಿ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿ ಶೀಘ್ರದಲ್ಲೇ ನಡೆಯಲಿದೆ. ಕಳೆದ 75 ವರ್ಷಗಳಿಂದ ದೊಡ್ಡ ಬೇಡಿಕೆಯಾಗಿದ್ದ, ಒಳಪೇಟೆ ಸಂಪರ್ಕಿಸುವ ರೈಲ್ವೆ ಟ್ರಾಕ್ಗೆ ಅಂಡರ್ಪಾಸ್ ಕಾಮಗಾರಿ ನಡೆಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆ ರೂ.2 ಕೋಟಿ ವೆಚ್ಚದಲ್ಲಿ ಅಂಡರ್ಪಾಸ್ ಕಾಮಗಾರಿ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಅವರು ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲ್ವೆ ಹಳಿಗೆ ಅಂಡರ್ಪಾಸ್ ನಿರ್ಮಾಣ ಮತ್ತು ರೈಲ್ವೆ ಓವರ್ಬ್ರಿಡ್ಜ್ ಅಗಲೀಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಇದನ್ನೂ ಓದಿ: ಶಕ್ತಿಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು
ತೊಕ್ಕೊಟ್ಟು ಒಳಪೇಟೆ ಉಳ್ಳಾಲದ ಕೇಂದ್ರ ಪ್ರದೇಶ, ರಾಷ್ಟ್ರೀಯ ಹೆದ್ದಾರಿಯಿಂದ ಉಳ್ಳಾಲ ನಗರಕ್ಕೆ ಸಂಪರ್ಕಿಸುವ ಕೊಂಡಿ ರಸ್ತೆಯಾಗಿದ್ದು, ರೈಲ್ವೆ ಹಳಿಯನ್ನು ದಾಟಿಕೊಂಡು ಸಾರ್ವಜನಿಕ ಮೈದಾನ, ಮಾರ್ಕೆಟ್, ಶಾಲಾ-ಕಾಲೇಜು, ದರ್ಗಾ, ದೇವಸ್ಥಾನ, ಚರ್ಚ್ಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೋಗುತ್ತಿದ್ದಾರೆ. ರೈಲ್ವೆ ಹಳಿ ದಾಟುವ ವೇಳೆ ಕೆಲವು ಕಡೆ ಅನಾಹುತಗಳು ಆಗಿದ್ದವು, ಇದರ ಬಗ್ಗೆ ರೈಲ್ವೆಯವರು ಬಹಳಷ್ಟು ವರ್ಷದಿಂದ ಈ ರಸ್ತೆಯನ್ನು ಬಂದ್ ಮಾಡಲು ಬೇಡಿಕೆಯನ್ನಿಟ್ಟಿದ್ದರು.
ಕಳೆದ ವರ್ಷ ರೈಲ್ವೆಯವರು ಕೆಲವೊಂದು ಪ್ರದೇಶದಲ್ಲಿ ಸಾವು ನೋವು ಆದ್ದರಿಂದ ಜನಸಾಮಾನ್ಯರ ಹಿತದೃಷ್ಟಿಯ ಉದ್ದೇಶದಿಂದ ಈ ಗೇಟ್ ಬಂದ್ ಮಾಡುವುದು ಅನಿವಾರ್ಯ ಎಂದಾಗ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಜಿಲ್ಲಾಧಿಕಾರಿ ವರದಿಯಂತೆ ರೈಲ್ವೆ ಸಚಿವ ಸೋಮಣ್ಣ ಅವರು ಮಂಗಳೂರಿಗೆ ಬಂದಾಗ ಮನವರಿಕೆ ಮಾಡಿದ್ದರು. ಇದೀಗ ಕೇಂದ್ರ ರೈಲ್ವೆ ಇಲಾಖೆಯವರು ಅಂಡರ್ಪಾಸ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಮಂಗಳೂರು | ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಬಸ್
ಈ ಅಂಡರ್ಪಾಸ್ನಲ್ಲಿ ಜನಸಾಮಾನ್ಯರು ನಡೆದುಕೊಂಡು ಹೋಗಲು ಮತ್ತು ದ್ವಿಚಕ್ರ ವಾಹನ ಸಂಚರಿಸಲು ಅವಕಾಶ ಇದೆ. ಇದರೊಂದಿಗೆ ಉಳ್ಳಾಲ ನಗರವನ್ನು ಸಂಪರ್ಕಿಸುವ ಓವರ್ಬ್ರಿಡ್ಜ್ ಅಗಲೀಕರಣಕ್ಕೂ ಒಪ್ಪಿಗೆ ಸಿಕ್ಕಿದ್ದು ರೂ.3 ಕೋಟಿ ವೆಚ್ಚದಲ್ಲಿ ಅಗಲೀಕರಣ ಕಾಮಗಾರಿ ನಡೆಯಲಿದೆ.
ಈಗಾಗಲೇ ಉಳ್ಳಾಲ ಜಂಕ್ಷನ್ನಿಂದ ಉಳ್ಳಾಲ ಬೈಲುವರೆಗೆ ದ್ವಿಪಥ ರಸ್ತೆಯೊಂದಿಗೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಉಳ್ಳಾಲ ಬೈಲ್ನಿಂದ ರಾಷ್ಟ್ರೀಯ ಹೆದ್ದಾರಿ 66ರ ಸಂಪರ್ಕಿಸುವ ತೊಕ್ಕೊಟ್ಟು ಓವರ್ಬ್ರಿಡ್ವರೆಗೆ ರಸ್ತೆ ಅಗಲೀಕರಣಕ್ಕೆ ರೂ.35ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಯೋಜನೆ ಸಿದ್ಧಗೊಂಡು ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಬಾಕಿ ಇದೆ ಎಂದರು.