ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ
ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ಕುರಿತು ಶನಿವಾರ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಯರನಳ್ಳಿ ನೇತೃತ್ವದಲ್ಲಿ ಬೀದರ್ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ʼರಾಜ್ಯ ಸರಕಾರವು ಈಗಾಗಲೇ ರಾಜ್ಯ ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಆದೇಶ ಹೊರಡಿಸಿದ್ದು, ಶೀಘ್ರವೇ ಅದನ್ನು ಜಾರಿಗೊಳಿಸಬೇಕು. ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಸರಕಾರವೇ ಭರಿಸಲು ಕ್ರಮ ವಹಿಸಬೇಕು. ಸಿಬ್ಬಂದಿ ವೇತನ ನಿವೃತ್ತಿ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದ ವಿಧೇಯಕ್ಕೆ ತಿದ್ದುಪಡಿ ಅಥವಾ ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸಬೇಕು” ಎಂದು ಒತ್ತಾಯಿಸಿದರು.
ʼಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಶೀಘ್ರ ಕ್ರಮವಹಿಸಬೇಕು. ಅನುದಾನಿತ ನೌಕರರಿಗೂ ಕೂಡ ಸರಕಾರಿ ನೌಕರರೆಂದು ʼಜ್ಯೋತಿ ಸಂಜೀವಿನಿʼ ಯೋಜನೆಗೆ ಒಳಪಡಿಸಬೇಕು. ಸರಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ವಿದ್ಯಾರ್ಥಿ ಮತ್ತು ನೌಕರರಿಗೆ ಯಾವುದೇ ತಾರತಮ್ಯ ಮಾಡಬಾರದುʼ ಎಂದರು.
ʼಸರಕಾರ ರಚನೆಗೊಂಡು ವರ್ಷ ಕಳೆದರೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಹಳೆ ಪಿಂಚಣಿ ಯೋಜನೆ ಇನ್ನೂ ಜಾರಿಗೊಂಡಿಲ್ಲ. ಹಳೇ ಪಿಂಚಣಿ ಯೋಜನೆ ಶೀಘ್ರ ಜಾರಿಗೊಳಿಸಿ ನೌಕರರ ನ್ಯಾಯಯುತ ಬೇಡಿಕೆಗಳು ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪ್ರಮುಖರಾದ ಉಮೇಶ ಪಾಟೀಲ, ಪ್ರಹ್ಲಾದ್ ತಳಘಟಕರ್, ಬಳಿರಾಮ ಕುಸನಾಳೆ, ಲಕ್ಷ್ಮಣ ಪೂಜಾರಿ, ಗಣೇಶ ಬಿರಾದರ, ಬಾಲಾಜಿ ಫುಲೆ, ಗೋಪಾಲ ಕುಲಕರ್ಣಿ, ಅರಶಿಯಾ ಜಮೀನ್ ಡಾ. ಹನೀಫ್, ಪರಮೇಶ್ವರ ಬಿರಾದರ ಸೇರಿದಂತೆ ಇತರರಿದ್ದರು.