ಬೆಂಗಳೂರು ದಕ್ಷಿಣ ತಾಲೂಕು ವ್ಯಾಪ್ತಿಗೆ ಬರುವ ಗುಳಕಮಲೆ ಸರ್ವೆ ನಂಬರ್ 35, 36, ಮತ್ತು ವಡ್ಡರಪಾಳ್ಯ ಸರ್ವೆ ನಂಬರ್ 175 ರಲ್ಲಿ, 1950 ರಿಂದ 2004 ರವರೆಗೆ ಕೃಷಿ ಚಟುವಟಿಕೆ ನಡೆಸುತ್ತಿದ್ದ ರೈತರಿಗೆ ಕಂದಾಯ ಇಲಾಖೆಯು ಸಾಗುವಳಿ ಪತ್ರಗಳನ್ನು ನೀಡಿದೆ. ಈ ಮೂಲಕ, ಸಂಬಂಧಪಟ್ಟ ಖಾತೆ, ಪಹಣಿ, ದಾಖಲೆಗಳನ್ನು ರೈತರ ಹೆಸರಿಗೆ ದಾಖಲಿಸಿ, ಜಮೀನುಗಳ ಮೇಲೆ ಸ್ವಾಧೀನ ಅನುಭವಿಸಲು ಅನುಮತಿಯನ್ನು ನೀಡಲಾಗಿದೆ.
ಆದರೆ, ಕೇಂದ್ರ ಅರಣ್ಯ ಇಲಾಖೆ, ಒಂದು ಎಕರೆ ಜಮೀನಿನಲ್ಲಿ 50ಕ್ಕಿಂತ ಹೆಚ್ಚು ಕಾಡು ಮರಗಳು ಇದ್ದರೆ ಆ ಜಮೀನುಗಳನ್ನು ಅರಣ್ಯ ಭೂಮಿ ಎಂದು ಪರಿಗಣಿಸಬೇಕು ಎಂದು ಕಂದಾಯ ಇಲಾಖೆಗೆ ಸೂಚಿಸಿದೆ. ಕಂದಾಯ ಇಲಾಖೆಯು ಸ್ಥಳ ಪರಿಶೀಲನೆ ಮಾಡದೆ, ಯಾವುದೇ ರೀತಿಯ ನೋಟಿಸ್ ನೀಡದೆ, ಬೆಳೆದ ತೆಂಗಿನ ಮರಗಳನ್ನು ಪರಿಗಣಿಸದೇ, ಒಂದೇ ದಿನದಲ್ಲಿ ಕೃಷಿ ಜಮೀನನ್ನು ಅರಣ್ಯ ಭೂಮಿಯೆಂದು ವರದಿ ಸಲ್ಲಿಸಿದೆ.
ಇದರಿಂದ, ಮೂರು ವರ್ಷಗಳ ಹಿಂದೆ ರೈತರಿಗೆ ನೋಟಿಸ್ ನೀಡಲಾಗಿದ್ದು, ಅವರ ಜಮೀನುಗಳನ್ನು “ಪರಿಭಾವಿತ ಅರಣ್ಯ ಪ್ರದೇಶ” ( forest) ಎಂದು ಗುರುತಿಸಲಾಗಿದೆ ಎಂದು ತಿಳಿಸಲಾಗಿದೆ. ರೈತರು, ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಯಂತ್ರೋಪಕರಣಗಳನ್ನು ಬಳಸಲು ಹೋಗಿದಾಗ, ಅರಣ್ಯ ಇಲಾಖೆ ಅವುಗಳನ್ನು ವಶಕ್ಕೆ ಪಡೆಯುತ್ತಿದೆ ಮತ್ತು ಪ್ರಕರಣಗಳನ್ನು ದಾಖಲಿಸುತ್ತಿದೆ.
ಈ ಗೊಂದಲವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಲೆ ನೋವಾಗಿದ್ದು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಒಳಗೊಳ್ಳುವುದರೊಂದಿಗೆ ಮಾತ್ರ ಸಮಸ್ಯೆಗೆ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆ ಇದೆ.
ಇದೇ ಸಮಯದಲ್ಲಿ, ನೆಟ್ಟಿಗೆರೆ ಗ್ರಾಮ ಸರ್ವೇ ನಂಬರ್ 42 ಮತ್ತು ಸುಂಕದಕಟ್ಟೆ ಸರ್ವೆ ನಂಬರ್ 37ರಲ್ಲಿ 1950 ರಿಂದ 2003ರವರೆಗೆ 96 ರೈತರಿಗೆ ಕಂದಾಯ ಇಲಾಖೆಯು ಸರಿಯಾದ ದಾಖಲೆಗಳನ್ನು ಒದಗಿಸಿದೆ. ಆದರೂ, 2020ರಲ್ಲಿ ರೈತರಿಗೆ ಜಮೀನುಗಳ ದಾಖಲೆಗಳನ್ನು ಸಲ್ಲಿಸಲು ನೋಟಿಸ್ ಕಳುಹಿಸಲಾಗಿತ್ತು. ನಂತರ, ಈ ಜಮೀನುಗಳನ್ನು “ಸೆಕ್ಷನ್ 4” ಅಡಿ ಅರಣ್ಯ ಭೂಮಿಯೆಂದು ಘೋಷಿಸಲಾಗಿದೆ.
ಈ ನಿರ್ಧಾರವನ್ನು ಪ್ರಶ್ನಿಸಿ ರೈತರು ಕಂದಾಯ ಇಲಾಖೆಯ ಉಪ ವಿಭಾಗ ಅಧಿಕಾರಿ ಕೋರ್ಟ್ ಮೊರೆ ಹೋಗಿದ್ದು, ಮೂರು ವರ್ಷಗಳ ಬಳಿಕ, ನ್ಯಾಯಾಲಯವು ಅರಣ್ಯ ಮತ್ತು ಕಂದಾಯ ಇಲಾಖೆಯು ಜಂಟಿಯಾಗಿ ‘ಸೆಟಲ್ಮೆಂಟ್ ಆಫೀಸರ್’ ಅನ್ನು ನೇಮಿಸಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿತು.
ಅಧಿಕಾರಿಯು ಪರಿಶೀಲನೆ ನಡೆಸಿದ ಬಳಿಕ, ಈ ಜಮೀನಿನಲ್ಲಿ ಯಾವುದೇ ಅರಣ್ಯ ಸ್ವರೂಪವಿಲ್ಲ ಎಂದು, ರೈತರಿಗೆ ಸಂಬಂಧಪಟ್ಟ ಜಮೀನುಗಳನ್ನು ವ್ಯವಸಾಯಕ್ಕೆ ಯೋಗ್ಯವೆಂದು ವರದಿ ಸಲ್ಲಿಸಿದರು. ರೈತರು ಕೊಂಚ ನಿಟ್ಟುಸಿರು ಬಿಟ್ಟಿದ್ದರೂ, ಶೀಘ್ರದಲ್ಲೇ ಮತ್ತೊಂದು ಸಂಕಷ್ಟ ಎದುರಾಯಿತು. ಕೆಲವೇ ತಿಂಗಳುಗಳಲ್ಲಿ ಅರಣ್ಯ ಇಲಾಖೆ, ಸೆಟಲ್ಮೆಂಟ್ ಅಧಿಕಾರಿ ಸಲ್ಲಿಸಿದ ವರದಿ ಸುಳ್ಳು ಎಂದು ಆರೋಪಿಸಿ, ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡಿ, ತಡೆಹಿಡಿಯುವಂತೆ ಕ್ಯಾತೆ ತೆಗೆಯಿತು.
ಈ ಎರಡು ಪ್ರಕರಣಗಳಲ್ಲಿ ಕಂದಾಯ ಇಲಾಖೆಯು ರೈತರಿಗೆ ಜಮೀನುಗಳನ್ನು ಮಂಜೂರು ಮಾಡಿ, ದಶಕಗಳ ಕಾಲ ಸ್ವಾಧೀನ ಅನುಭವಿಸಿದ ನಂತರ, ಏಕೆ ಈ ಜಮೀನುಗಳು ಅರಣ್ಯ ಭೂಮಿಯಾಗಿ ಪರಿವರ್ತಿಸಲ್ಪಡುತ್ತವೆ ಎಂಬುದು ಈಗ ಪ್ರಶ್ನೆಯಾಗಿಯೇ ಉಳಿದಿದೆ. ಅರಣ್ಯ ಇಲಾಖೆಯವರು ಈ ಪ್ರಶ್ನೆಗೆ ಕಂದಾಯ ಇಲಾಖೆಯು ಮಂಜೂರು ಮಾಡುವ ಮೊದಲು, ಈ ಜಮೀನುಗಳು ಅರಣ್ಯ ಇಲಾಖೆಯ ಮಾಲೀಕತ್ವದಲ್ಲಿ ಇದ್ದವು ಎಂದು ವಾದಿಸುತ್ತಿರುವುದು ರೈತರು ಹಾಗೂ ರೈತ ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ನಾರಾಯಣ ಕಗ್ಗಲಿಪುರ, ಕರ್ನಾಟಕ ರಾಜ್ಯ ರೈತ ಸಂಘದ ನದೀಂ ಪಾಷ, ಅಶ್ವಥ ನಾರಾಯಣ ಕಗ್ಗಲಿಪುರ, ಮಂಜುನಾಥ್, ನೆಟ್ಟಿಗೆರೆ ಹಾಗೂ ಚಲುವಮೂರ್ತಿ ನೆಟ್ಟಿಗೆರೆ ಅರಣ್ಯ ಇಲಾಖೆಯ ನಡೆಯ ವಿರುದ್ಧ ಕಿಡಿಕಾರಿದ್ದಾರೆ.
ಈ ಗೊಂದಲವನ್ನು ಬಗೆಹರಿಸಲು, ರಾಜ್ಯ ಸರ್ಕಾರವು ಮುಂದಾಗಬೇಕು. ಅರಣ್ಯ ಇಲಾಖೆಯು ಈ ಜಮೀನುಗಳನ್ನು ಕಾಡು ಭೂಮಿಯಾಗಿ ಗುರುತಿಸುವ ಮೊದಲು, ತನ್ನ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಿರ್ವಹಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
