ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರವು ವಾಣಿಜ್ಯಾತ್ಮಕವಾಗಿ ಈವರಗೆ 13 ಸಾವಿರ ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿ ಸುಮಾರು 1.2 ಲಕ್ಷ ಟನ್ CO2ವಿನ ಉತ್ಪಾದನೆಯನ್ನು ತಡೆಗಟ್ಟಿದೆ ಎಂದು ಕೈಗಾ ಅಣು ವಿದ್ಯುತ್ ಕೇಂದ್ರದ ನಿರ್ದೇಶಕ ಬಿ ವಿನೋದ್ ಕುಮಾರ್ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL)ನ ಆರನೇ ಪರಮಾಣು ಕೇಂದ್ರ ಕೈಗಾದಲ್ಲಿ ಒಟ್ಟು 2280 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿತ್ತಿದ್ದು, ಈ ಪೈಕಿ ತಲಾ 220 ಮೆಗಾ ವ್ಯಾಟ್ ಸಾಮರ್ಥ್ಯದ ನಾಲ್ಕು ಒತ್ತಡದ ಭಾರಜಲ ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 700 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಒತ್ತಡದ ಭಾರಜಲ ಘಟಕಗಳ ನಿರ್ಮಾಣಕ್ಕಾಗಿ ಉತ್ಖನನ ಚಟುವಟಿಕೆಗಳು ಮುಕ್ತಾಯವಾಗಿದೆ” ಎಂದು ಮಾಹಿತಿ ನೀಡಿದರು.
“ಕೈಗಾದಲ್ಲಿ ತಲಾ 700 ಮೆಗಾವಾಟ್ಗಳ 5 ಮತ್ತು 6 ನೇ ಘಟಕ ನಿರ್ಮಾಣ ಕಾಮಗಾರಿಯನ್ನು 2030ರ ವೇಳೆಗೆ ಮುಕ್ತಾಯ ಮಾಡುವ ಗುರಿ ಹೊಂದಲಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರದ ಅಣು ಶಕ್ತಿ ಇಲಾಖೆ, ಅಣುಶಕ್ತಿ ನಿಯಂತ್ರಣ ಆಯೋಗಗಳು ತಾತ್ವಿಕ ಅನುಮೋದನೆ ನೀಡಿವೆ. ರಿಯಾಕ್ಟರ್ ನಿರ್ಮಾಣದ ಚಟುವಟಿಕೆಗಳು, ನ್ಯೂಕ್ಲಿಯರ್ ಘಟಕಗಳ ಸಿವಿಲ್, ಇಲೆಕ್ಟ್ರಿಕಲ್ ಕಾಮಗಾರಿಗಳನ್ನು ಮೆಗಾ ಇಂಜಿನಿಯರ್ಸ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿ, ಟರ್ಬೈನ್ ವಿಭಾಗದ ಕಾಮಗಾರಿಗಳನ್ನು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಕೈಗೊಳ್ಳಲಿದ್ದು, ಎಲೆಕ್ಟ್ರಿಕಲ್ ಮತ್ತು ಸುರಕ್ಷತೆ ವಿಭಾಗದ ಇನ್ನೊಂದು ಕಾಮಗಾರಿಯನ್ನು ಇಸಿಎಲ್ ಎಂಬ ಅಣು ವಿದ್ಯುತ್ ಇಲಾಖೆಯ ಸಹೋದರ ಸಂಸ್ಥೆಯೇ ಕೈಗೊಳ್ಳಲಿದೆ. ಪ್ರತಿ ಹಂತದಲ್ಲೂ ಸುರಕ್ಷತೆಯ ಮಾನದಂಡಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಲಿವೆ” ಎಂದರು.

“ಕಾರ್ಯ ನಿರತವಾದ ನಾಲ್ಕೂ ಘಟಕಗಳು ನಿರ್ಧಾರಿತ ಕ್ಷಮತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿವೆ. ಕೈಗಾ-1 ಘಟಕವು 962 ದಿನಗಳವರೆಗೆ ಕಾರ್ಯನಿರ್ವಹಿಸಿ, ನಿರಂತರವಾಗಿ ಕಾರ್ಯನಿರ್ವಹಿಸಿದ ವಿಶ್ವದ ಮೊದಲ ವಾಣಿಜ್ಯ ಪರಮಾಣು ವಿದ್ಯುತ್ ರಿಯಾಕ್ಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ರಿಯಾಕ್ಟರ್ಗಳ ಆಯುಷ್ಯ ವೃದ್ಧಿಗಾಗಿ, ಬೃಹತ್ ಪ್ರಮಾಣದಲ್ಲಿ ಕೂಲಂಟ್ ಚಾನೆಲ್ ಬದಲಾವಣೆ ಮತ್ತು ಫೀಡರ್ ಬದಲಾವಣೆಗಾಗಿ ಕೈಗಾ-1 ಘಟಕವು ಏಪ್ರಿಲ್ 1, 2025 ರಿಂದ ಸ್ಥಗಿತಗೊಂಡಿದೆ. ಈ ಚಟುವಟಿಕೆಯು ಸುಮಾರು ಹದಿನೆಂಟು (18) ತಿಂಗಳುಗಳ ಕಾಲ ನಡೆಯುತ್ತದೆ” ಎಂದರು.
“ಕೈಗಾ 1 ರಿಂದ 4 ನೇ ಘಟಕದಲ್ಲಿ ಒಟ್ಟು 595 ಉದ್ಯೋಗಿಗಳಿದ್ದು, ಅದರಲ್ಲಿ 483 ಜನ ಕರ್ನಾಟಕದವರಾಗಿದ್ದಾರೆ. ಒಟ್ಟು 2057 ಗುತ್ತಿಗೆ ಉದ್ಯೋಗಿಗಳ ಪೈಕಿ 1737 ಕರ್ನಾಟಕದವರಿದ್ದು, ಅದರಲ್ಲಿ 1601 ಜನ ಉತ್ತಕನ್ನಡ ಜಿಲ್ಲೆಯವರಾಗಿದ್ದು, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲಾಗುತ್ತಿದೆ. ಕೈಗಾದಲ್ಲಿ ವಿಕಿರಣ ಹರಡುವುದನ್ನು ತಡೆಯಲು ಗರಿಷ್ಠ ಪ್ರಮಾಣದ ಸುರಕ್ಷತೆಯಲ್ಲಿ ಕೈಗೊಂಡಿದ್ದು, ಇಲ್ಲಿನ ವಿಕಿರಣದ ಪ್ರಭಾವ ನಿಗದಿಗಿಂತ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು ಸಾರ್ವಜನಿಕರು ಹಾಗೂ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಇದುವರೆಗೂ ಕಂಡುಬoದಿಲ್ಲವಾಗಿದ್ದು ಈ ಬಗ್ಗೆ ಪ್ರತಿ ವರ್ಷ ತಪಾಸಣೆ ನಡೆಸಲಾಗುತ್ತಿದೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ಕೂಡಾ ದೈನಂದಿನ ಸಾರ್ವಜನಿಕ ಚಟುವಟಿಕೆಗಳಲ್ಲೂ ಕೂಡಾ ವಿಕಿರಣದ ಪ್ರಭಾವ ಎಲ್ಲಾ ಕಡೆಗಳಲ್ಲಿ ಕಂಡುಬರಲಿದ್ದು, ಸಾರ್ವಜನಿಕರು ಯಾವುದೇ ಆಧಾರ ರಹಿತ ಊಹಾಪೋಹಗಳಿಗೆ ಕಿವಿಗೊಡಬಾರದು” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ಹಳಿಯಾಳ ಪೊಲೀಸರ ಭರ್ಜರಿ ಬೇಟೆ: ಅಂತಾರಾಜ್ಯ ದರೋಡೆಕೋರರ ಬಂಧನ
“ಸಿ.ಎಸ್.ಆರ್ ಯೋಜನೆಯಡಿ ಪ್ರತಿ ವರ್ಷ 9 ರಿಂದ 16 ಕೊಟಿಯವರೆಗೂ ಹಣವನ್ನು ವಿನಿಯೋಗಿಸುತ್ತಿದ್ದು, ಇದುವರೆಗೆ 110 ಕೋಟಿ ರೂ. ಖರ್ಚು ಮಾಡಲಾಗಿದ್ದು, ಕಾಳಿ ಹುಲಿ ಮೀಸಲು ವಲಯದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ 20 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ” ಎಂದು ಕೈಗಾ ಅಧಿಕಾರಿಗಳು ಮಾಹಿತಿ ನೀಡಿದರು.
ಎನ್ಪಿಸಿಐಎಲ್ ಕಾರ್ಪೊರೇಟ್ ನಿರ್ವಹಣೆ ವಿಭಾಗದ ಉಮೇದ ಯಾದವ್, ಕೈಗಾ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸುವರ್ಣಾ ಗಾಂವಕರ್, ಪರಿಯೋಜನಾ ನಿರ್ದೇಶಕ ಜೆ.ಎಲ್.ಸಿಂಹ, ಕೈಗಾ 1 ಮತ್ತು 2 ನಿರ್ದೇಶಕ ಶ್ರೀರಾಮ್, 3 ಮತ್ತು 4 ರ ನಿರ್ದೇಶಕ ಎಸ್.ಕೆ.ಓಝಾ, ಮುಂಬಯಿಯ ಬಾಬಾ ಅಣು ವಿಜ್ಞಾನ ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಹೇಮಂತ ಹಲ್ಡವನೇಕರ್ ಸುದ್ದಿಗೋಷ್ಠಿಯಲ್ಲಿದ್ದರು.