ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಆಗಾಗ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದು, ಅವರನ್ನು ಯುಎಪಿಎ ಕಾಯ್ದೆಯಡಿ ಜೈಲಿಗಟ್ಟಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ವಾದ) ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೊದಲೊಮ್ಮೆ ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುದಕ್ಕೆ ಎಂದು ಹೇಳಿಕೆ ನೀಡಿದ್ದರು. ಈಗ ಮತ್ತೇ ನಮಗೆ 400 ಸಂಸದರನ್ನು ಕೊಡಿ ನಾವು ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಸಂವಿಧಾನದಡಿ ಗೆದ್ದು ಪ್ರಮಾಣ ವಚನ ಸ್ವೀಕರಸಿ ಈಗ ಸಂವಿಧಾನವನ್ನೇ ಬದಲಾಯಿಸುತ್ತೇವೆ, ತಿದ್ದುಪಡಿ ಮಾಡುತ್ತೇವೆ ಎಂದು ಪದೇ ಪದೆ ಬಹಿರಂಗ ಹೇಳಿ ನೀಡಿರುವುದು ದೇಶದ ಅಖಂಡತೆಗೆ ಭಂಗ ತರುವ ಮತ್ತು ಪ್ರಜಾಪ್ರಭುತ್ವ ವಿರೋಧಿ, ದೇಶಧ್ರೋಹದ ಕ್ರತ್ಯವಾಗಿದ್ದು, ಅವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಪತ್ರಿಕಾ ರಂಗವನ್ನು ನಾಯಿಗಳಿಗೆ ಹೋಲಿಸಿರುವುದು ಖಂಡನೀಯ ಎಂದರು. ಬಾಬಾಸಾಹೇಬರು ರಚಿಸಿದ ಸಂವಿಧಾನ ಬಗ್ಗೆ ಕೇವಲವಾಗಿ ಮಾತನಾಡಿದರೆ, ಈ ದೇಶದ ಮೂಲನಿವಾಸಿಗಳಾದ ನಾವು ಸರಿಯಾದ ಮತ್ತು ಮುಟ್ಟಿನೋಡಿಕೊಳ್ಳುವಂತಹ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಖಾರವಾಗಿ ನುಡಿದರು.
ಹೆಗಡೆಯವರೇ ಈ ದೇಶವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾಧಿಸಿಕೊಂಡು ಬಂದ ದೇಶ. ಬಹುತ್ವವನ್ನು ಕಾಪಾಡಿಕೊಂಡು ಬಂದ ದೇಶ. ನಾಲಗೆ ಚಪಲಕ್ಕೆ ಬಾಯಿಗೆ ಬಂದಹಾಗೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದರೆ ತಕ್ಕ ಉತ್ತರ ಕೊಡಬೇಕಾದಿತು ಎಂದು ಶ್ಯಾಮರಾಜ್ ಬಿರ್ತಿ ಎಚ್ಚರಿಸಿದರು.