ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಕರ್ತವ್ಯ ನಿರತರಾಗಿದ್ದ ಸಿಐಎಸ್ಎಫ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ ಮಲ್ಲಾಪುರ ಟೌನ್ಶಿಪ್ನಲ್ಲಿ ನಡೆದಿದೆ.
ಮೃತನನ್ನು ಬಿಹಾರ ಮೂಲದ ಹರೇಂದ್ರ ಕುಮಾರ್(27) ಎಂದು ಗುರುತಿಸಲಾಗಿದೆ. ಅವರು ಮಲ್ಲಾಪುರ ಎನ್ಪಿಸಿಐಎಲ್ ಟೌನ್ಶಿಪ್ನಲ್ಲಿ ಮತ್ತೊಬ್ಬ ಸಿಐಎಸ್ಎಫ್ ಸಿಬ್ಬಂದಿ ಎರ್ಟಿಗಾ ವಾಹನದಲ್ಲಿ ಕಾರು ಚಾಲಕನೊಂದಿಗೆ ಗಸ್ತು ಕರ್ತವ್ಯದಲ್ಲಿದ್ದರು. ಅವರು ಸಿಐಎಸ್ಎಫ್ನ ತ್ವರಿತ ಪ್ರತಿಕ್ರಿಯೆ ತಂಡದ ಭಾಗವಾಗಿದ್ದರು. ಹರೇಂದ್ರ ಕುಮಾರ್ ಅವರು ಹಿಂದೆ ಕುಳಿತಿದ್ದಾಗ ಆಕಸ್ಮಿಕವಾಗಿ ಬಂದೂಕು ಹೊರಕ್ಕೆ ಬಿದ್ದು, ನೇರವಾಗಿ ಅವರ ಕುತ್ತಿಗೆಗೆ ಹೊಡೆದಿದೆ. ಇದರ ಪರಿಣಾಮ ಮೃತಪಟ್ಟಿದ್ದು, ಸದ್ಯ ವಾಹನದಲ್ಲಿದ್ದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ನಂತರ ಸಾರ್ವಜನಿಕರಲ್ಲಿ, ಸಿಐಎಸ್ಎಫ್ ಸಿಬ್ಬಂದಿ ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆಂಬ ವದಂತಿಗಳು ಹರಡಿದ್ದವು. ಇದು ಸ್ವಲ್ಪ ಸಮಯದ ಭೀತಿಯ ವಾತಾವರಣವನ್ನು ಸೃಷ್ಟಿಸಿತ್ತು. ಆದರೂ ಪ್ರಾಥಮಿಕ ವರದಿಗಳ ಪ್ರಕಾರ ಇದೊಂದು ಆಕಸ್ಮಿಕ ಅಪಘಾತವೆಂಬುದು ಕಂಡುಬಂದಿರುವುದಾಗಿ ವರದಿಯಾಗಿದೆ.
ಗಾಯಗೊಂಡ ಹರೇಂದ್ರನನ್ನು ಪ್ರಥಮ ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಧುಮೇಹ ಜಾಗೃತಿ; ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರ
ಎರ್ಟಿಗಾದಂತಹ ಕೆಳಮಟ್ಟದ ವಾಹನಗಳಲ್ಲಿ ಲೋಡ್ ಮಾಡಿದ ಬಂದೂಕುಗಳೊಂದಿಗೆ ಕುಳಿತುಕೊಳ್ಳುವುದು ಸವಾಲಾಗಿರುವುದರಿಂದ ಬಂದೂಕುಗಳೊಂದಿಗೆ ಗಸ್ತು ನಡೆಸುವ ಸಿಬ್ಬಂದಿಗೆ ಎತ್ತರದ ವಾಹನಗಳನ್ನು ಒದಗಿಸುವಂತೆ ಕರೆ ನೀಡಲಾಗಿದೆ. ಇಂತಹ ಅಪಘಾತಗಳು ಇತರರಿಗೆ ತೊಂದರೆಯಾಗದಂತೆ ತಡೆಯಲು ಸಕ್ರಿಯ ಸಿಬ್ಬಂದಿಗೆ ನಿಯೋಜಿಸಲಾದ ವಾಹನಗಳಲ್ಲಿ ಬದಲಾವಣೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.