ವಚನ ಸಾಹಿತ್ಯವನ್ನು ಅಧ್ಯಯನ ಮತ್ತು ಬೋಧನೆಗೆ ಸೀಮಿತಗೊಳಿಸದೆ ಅದರ ವಿಚಾರಗಳನ್ನು ಮೈಗೂಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಏರ್ಪಡಿಸಿದ್ದ ವಚನಕಾರ್ತಿಯರ ಕುರಿತ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ʼಮಾನವೀಯ ಮೌಲ್ಯ ಒಳಗೊಂಡಿರುವ ಬದುಕು ಕಟ್ಟಿಕೊಳ್ಳಲು ವಚನ ಸಾಹಿತ್ಯದ ಅಧ್ಯಯನ ಹಾಗೂ ಅದರ ಪಾಲನೆ ಪ್ರಸ್ತುತ ತುಂಬ ಅಗತ್ಯವಾಗಿದೆ.
ʼಬಸವಾದಿ ಶರಣರು ನುಡಿದಂತೆ ನಡೆದು ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಶರಣರ ಬದುಕೇ ನಮಗೆ ಆದರ್ಶವಾಗಿದೆ. ಬಸವಾದಿ ಶರಣರ ವಚನಗಳಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳ ಸಾರವನ್ನು ಪ್ರತಿ ಮನ-ಮನೆಗೂ ಮುಟ್ಟಿಸುವ ಧೈಯ ವಚನಾಮೃತ ಕನ್ನಡ ಸಂಘ ಹೊಂದಿದೆʼ ಎಂದು ತಿಳಿಸಿದರು.

ಸಾಹಿತ್ಯಾರಾಧಕ ಗುರುಸಿದ್ಧಪ್ಪಾ ಬಿರಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ʼವಿಶ್ವಕ್ಕೆ ಪ್ರಜಾಪ್ರಭುತ್ವ ಕಲ್ಪನೆ ಮೊದಲು ನೀಡಿದ್ದು ಬಸವಾದಿ ಶರಣರು, ಅಂತಹ ಅಮೂಲ್ಯ ಸಾಹಿತ್ಯದ ಸಾರ ನೀಡಿದ ಶರಣರು ನಮಗೆ ಆದರ್ಶರಾಗಿದ್ದಾರೆ. ಶರಣರ ವಚನಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳೋಣʼ ಎಂದರು.
ಉಪನ್ಯಾಸಕಿ ಡಾ.ಜಗದೇವಿ ಮೈನಾಳೆ ಮಾತನಾಡಿ, ʼವಚನಾಕಾರ್ತಿಯರು ತಮ್ಮ ವಚನಗಳ ಮುಖಾಂತರ ಮಾನವ ಕುಲದ ಸಂಬಂಧ ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ. ಸ್ತ್ರೀಯರಿಗೆ ಸಮಾನತೆ ಇಲ್ಲದ ಕಾಲಘಟ್ಟದಲ್ಲಿ ಪುರುಷರೊಂದಿಗೆ ಕಾಯಕದಲ್ಲಿ ತೊಡಗಿ ಸಮಾನತೆ ಎತ್ತಿ ಹಿಡಿದಿದ್ದರು. ವಚನಕಾರ್ತಿಯರ ವಚನಗಳಿಂದ ಸಮಾಜದಲ್ಲಿನ ಶೋಷಣೆ, ಹಿಂಸೆ, ಅನಾಚಾರಗಳು ನಿರ್ಮೂಲನೆ ಮಾಡಬಹುದುʼ ಎಂದು ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಶಂಭುಲಿಂಗ ವಾಲ್ಗೊಡ್ಡಿ, ಸುಭಾಷ ಮಾಸಿಮಾಡೆ, ಅಶೋಕ ಬೋಗಾರ, ಪ್ರವೀಣ ಅವರನ್ನು ಸನ್ಮಾನಿಸಲಾಯಿತು.
ಬಸವಭಕ್ತಿ ಮಾಶೆಟ್ಟಿ, ಎಸ್.ಎಸ್. ಹೊಡಮನಿ, ಹಂಸಕವಿ, ಬಾಲಾಜಿ ಕುಂಬಾರ, ನಾಗೇಶ ಸ್ವಾಮಿ, ಶ್ರೀದೇವಿ ಸೋಮಶೆಟ್ಟಿ, ಶಿಲ್ಪಾ ಮಜಗೆ, ಭಕ್ತಿ ಪಾಟೀಲ್ ವಚನಕಾರ್ತಿಯರ ಕುರಿತಾದ ಸ್ವರಚಿತ ಕವನ ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ಮಶಾನದ ಬಳಿ ಆಸ್ಪತ್ರೆ : ಮಗುವಿಗೆ ಕೇಡಾಗುತ್ತೆ ಎಂಬ ಕಾರಣಕ್ಕೆ ಹೆರಿಗೆಗೆ ಬಾರದ ಗರ್ಭಿಣಿಯರು!
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಎಂ.ಬಿರಾದಾರ್, ಸಿದ್ರಾಮ ಸಪಾಟೆ, ಸತ್ಯಮೂರ್ತಿ, ಬಸಯ್ಯಾ ಸ್ವಾಮಿ, ಬಸವರಾಜ ಪಾಟೀಲ್, ಬಸವರಾಜ ರುದನೂರ, ಸಂತೋಷ ಮಂಗಳೂರೆ, ಸ್ವರೂಪರಾಣಿ ನಾಗೂರೆ, ಸುಮೀತ, ಡಾ.ಸೂರ್ಯಕಾಂತ ಚಿದ್ರೆ, ಪದ್ಮರಾಜ ಅಜಿತಮಣಿ, ರೇಣುಕಾ ಎನ್.ಬಿ., ಶ್ರೀಕಾಂತ ಬಿರಾದಾರ್ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರರಿದ್ದರು. ಬಸವರಾಜ ಬಿರಾದಾರ್ ಸ್ವಾಗತಿಸಿದರು. ಪರಮೇಶ್ವರ ಬಿರಾದಾರ್ ನಿರೂಪಿಸಿದರು. ಬಸವರಾಜ ಮೂಲಗೆ ವಂದಿಸಿದರು.