ಮಹಿಳೆಯರು ತಮ್ಮ ಕೆಲಸಗಳನ್ನು ಬಿಟ್ಟು ಉರಿ ಬಿಸಿಲಿನಲ್ಲಿ ನೀರು ತುಂಬಿಸಲು ನಿಂತಿದ್ದಾರೆ. ಜತೆಗೆ ಜಗಳವೂ ನಡೆಯುತ್ತಿದ್ದು, ಈಗಾಗಲೇ ವಿಜಯನಗರ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಬಂದೊದಗಿದೆ.
ಹಲವು ವರ್ಷಗಳಿಂದ ಮರಿಯಮ್ಮನಹಳ್ಳಿಯ ಜನತೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಇಡೀ ಊರಿಗೆ ಒಂದೇ ಒಂದು ನೀರಿನ ಟ್ಯಾಂಕ್ ಇದ್ದು, ಅದರಲ್ಲಿ ನಾಲ್ಕು ನಳಗಳಿವೆ. ಒಂದೇ ಇಂಚಿನಷ್ಟು ಗಾತ್ರದಲ್ಲಿ ಸುರಿಯುವ ನೀರಿಗೆ ಬೆಳಗ್ಗೆಯಿಂದ ಸಂಜೆಯವರೆಗೂ ನೀರನ್ನು ತುಂಬಿಸುವ ಕೆಲಸದಲ್ಲಿ ತೊಡಗಿರುತ್ತಾರೆ. ನೀರಿಗಾಗಿ ಮಹಿಳೆಯದ ನಡುವೆ ಗದ್ದಲ ಗಲಾಟೆಗಳೂ ನಡೆಯುತ್ತಿವೆ.
ಸ್ಥಳೀಯರಾದ ಶಾಂತಮ್ಮ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇದ್ದರೂ ನೀರಿನ ಸಮಸ್ಯೆ ಕಾಡುತ್ತದೆ. ಮನೆಗಳ ಮುಂದೆ ಪೈಪ್ ಇದ್ದರೂ ಯಾವುದೇ ನೀರಿನ ಸಂಪರ್ಕವಿಲ್ಲ. ಗ್ರಾಮ ಪಂಚಾಯತಿ ಸದ್ಯಸರಿಗೆ ಎಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಪಕ್ಕದಲ್ಲಿ ಟಿಬಿ ಡ್ಯಾಂ ಇದ್ದರೂ ನಮಗೆ ಕುಡಿಯುವುದಕ್ಕೆ ನೀರಿಲ್ಲ. ಟ್ಯಾಂಕ್ ಪಕ್ಕದಲ್ಲಿ ಚರಂಡಿ ನೀರು ಹರಿಯುತ್ತದೆ. ಇದರಿಂದಾಗಿ ಕುಡಿಯುವುದಕ್ಕೆ ನೀರು ಸೂಕ್ತವಾಗಿಲ್ಲ” ಎಂದರು.
ಸ್ಥಳೀಯ ನಿವಾಸಿ ಮಂಗಳಮ್ಮ ಈ ದಿ.ಕಾಮ್ನೊಂದಿಗೆ ಮಾತನಾಡಿ, “ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ನೀರು ಬಿಡುವುದಿಲ್ಲ. ಯಾವಾಗ ನೀರು ಬಿಡುತ್ತಾರೊ ಆಗ ಕೆಲಸದ ಸ್ಥಳದಿಂದ ಉರಿಬಿಸಿಲಿನಲ್ಲಿ ಬಂದು ನೀರು ತುಂಬಿಸಿಕೊಳ್ಳಬೇಕು. ನಾವು ವಯಸ್ಸಾದವರು ಇಲ್ಲೇ ಪಕ್ಕದಲ್ಲಿ ಬಳ್ಳಾರಿ ಹೆದ್ದಾರಿ ಇದೆ. ತುಂಬಾ ವಾಹನಗಳು ಚಲಿಸುತ್ತಿರುತ್ತವೆ. ನೀರಿಗಾಗಿ ಗಾಬರಿಯಿಂದ ಓಡಾಡುವಾಗ ನೋಡಿಕೊಂಡು ನಡೆದಾಡಬೇಕು. ಇಲ್ಲವಾದರೆ ನಮ್ಮ ಜೀವಕ್ಕೇ ಅಪಾಯವಿದೆ” ಎಂದು ಹೇಳಿದರು.
ಸ್ಥಳೀಯ ಭರಮಪ್ಪ ಮಾತನಾಡಿ, “ಬೇಸಿಗೆ ಕಾಲ ಆರಂಭವಾಗಿದ್ದು, ಈಗಾಗಲೇ ನೀರಿನ ಸಮಸ್ಯೆ ಎದುರಾಗಿದೆ. ಬೇಸಿಗೆ ಮುಗಿಯುವವರೆಗೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಅಂತಹ ಸಮಯದಲ್ಲಿ ನಮಗೆ ಇನ್ನೂ ಕಷ್ಟವಾಗುತ್ತದೆ. ಇರುವ ಟ್ಯಾಂಕ್ಗಳಿಗೆ ನಳಗಳು ಇಲ್ಲ. ಕಟ್ಟಿಗೆಯಿಂದ ನಳಕ್ಕೆ ತೂರಿಸಿದರೆ ನೀರು ಹೊರಗೆ ಬರುತ್ತದೆ. ನಳಕ್ಕೆ ಕಸ-ಕಡ್ಡಿ ಕಟ್ಟಿಕೊಂಡಿದ್ದು, ಅಶುದ್ದ ನೀರು ಬರುತ್ವಿತದೆ” ಎಂದು ಹೇಳಿದರು.
ಮಹಿಳಾ ಸಂಘದ ಸದಸ್ಯರು ಮಾತನಾಡಿ, “ನೀರಿಗಾಗಿ ಬಹುತೇಕ ಬಾರಿ ಹೋರಾಟ ಮಾಡಿ ಪಂಚಾಯಿತಿಯ ಎಲ್ಲ ಸಿಬ್ಬಂದಿಗೆ ಎಷ್ಟು ಬಾರಿ ಮನವಿ ನೀಡಿದರೂ ನಮಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಊರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ ಮಾಡಿ ಎಂದು ಊರಿನ ಜನ ಕೇಳಿಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಶಿವಮೊಗ್ಗ | ಮಹಾನಗರ ಪಾಲಿಕೆ ವ್ಯಾಪ್ತಿಯ 27ನೇ ವಾರ್ಡ್ ಅವ್ಯವಸ್ಥೆಯ ಆಗರ; ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ
ಸ್ಥಳೀಯ ನಿವಾಸಿ ಹುಲಿಗೇಶ ಮಾತನಾಡಿ, “ಮರಿಯಮ್ಮನಹಳ್ಳಿ ಇದೀಗ ಪಟ್ಟಣ ಪಂಚಾಯಿತಿ ಆಗಿದೆ. ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಆದರೂ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತಿಲ್ಲ. ಇದರಿಂದ ಜಾತ್ರೆ, ಹಬ್ಬದ ದಿನಗಳಲ್ಲಿ ತುಂಬಾ ತೊಂದರೆ ಉಂಟಾಗುತ್ತಿದೆ” ಎಂದು ಹೇಳಿದರು.
ವರದಿ : ಅಂಕಲೇಶ್
