ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ಮೂತಭೂತ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಗ್ರಾಮೀಣ ಕೂಲಿಕಾರರ ಸಂಘ (ಗ್ರಾಕೂಸ) ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ್ ಅವರಿಗೆ ಗ್ರಾಕೂಸ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ತಾಲೂಕಿನ ದುರಹಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪನಾಯಕನಹಳ್ಳಿಯಲ್ಲಿ ವಸತಿಗಾಗಿ ಕಾಯ್ದಿರಿಸಿದ್ದ ಭೂಮಿಯನ್ನು ನಿವೇಶನರಹಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಮಾಲವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರೇಗೊಂಡನಹಳ್ಳಿ ಮತ್ತು ವರದಾಮರ ಕೆಂಚಟನಹಳ್ಳಿ ಗ್ರಾಮಗಳ ಬಡವರಿಗೆ ನಿವೇಶನ ಒದಗಿಸಬೇಕು. ಬೆಣಕಲು ಗ್ರಾಮದಲ್ಲಿ ಸರ್ಕಾರಿ ಜಾಗ ಗುರುತಿಸಿ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
“ಗಡಲಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಲಬಾಳು ಗ್ರಾಮದಲ್ಲಿ ಸ್ಮಶಾನಕ್ಕೆ ಜಮೀನು ಒದಗಿಸಬೇಕು. ವಸತಿರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು. ಕಾತ್ಯಾಯನಮರಡಿ ಗ್ರಾಮದಲ್ಲಿ ಸ್ಮಶಾನಕ್ಕೆ 2 ಎಕರೆ ಜಾಗ ಗುರುತಿಸಿದ್ದರೂ, ಅದು ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಅದನ್ನು ಬಳಕೆಗೆ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
“ತಾಲೂಕಿನ ಇಟ್ಟಿಗಿ, ಕನ್ನಿಹಳ್ಳಿ, ಚಿಮ್ಮನಹಳ್ಳಿ, ಹಂಚಿನಾಳು, ಮಗಿಮಾವಿನಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾರಿಗೆ ಸೌಲಭ್ಯವಿಲ್ಲ. ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು. ಬೆಣಕಲ್ಲು ಗ್ರಾಮದಲ್ಲಿ ಹೊಸ ಅಂಗನವಾಡಿ ಕೇಂದ್ರ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ, ಸಂಘಟನೆಯ ಅಕ್ಕಮ್ಮ ಮರಬ್ಬಿಹಾಳು, ಕೊಟ್ರಮ್ಮ, ಹನುಮಂತಪ್ಪ, ಶಿಲ್ಪಾ, ಯಶೋಧಾ, ಅನಿಲ್ ಆನೇಕಲ್, ಈರಣ್ಣ ಇನ್ನಿತರರು ಇದ್ದರು.