ಕಾಸರಗೋಡು ಕೇರಳ ಹಾಗೂ ಕರ್ನಾಟಕದ ಗಡಿಯಲ್ಲಿರುವುದರಿಂದ ಕನ್ನಡ, ತುಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಹಾಗೂ ಸಂಸ್ಕೃತಿಗಳ ಸಂಗಮವಾಗಿದೆ ಎಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಅಲಿ ಕೆ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗ, ನಾಟಕ ವಿಭಾಗ, ಆಂತರಿಕ ಭರವಸೆ ಕೋಶ ಹಾಗೂ ಗೋವಿಂದ ಪೈ ಸ್ಮಾರಕ ಕಾಲೇಜು ಮಂಜೇಶ್ವರ, ಕಾಸರಗೋಡು ಜಿಲ್ಲೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವಿನಿಮಯ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
“1956ರ ಮೊದಲು ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಜಿಲ್ಲೆ ನಂತರ ಕೇರಳದ ರಾಜ್ಯಕ್ಕೆ ಸೇರಿತು. ಹೀಗೆ ಭಾಗವಾದ ಪ್ರದೇಶದಲ್ಲಿ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಸುಮಾರು ಏಳಕ್ಕಿಂತ ಹೆಚ್ಚು ಭಾಷೆಯನ್ನು ದಿನನಿತ್ಯ ಮಾತನಾಡುತ್ತಾರೆ. ಗೋವಿಂದ ಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ವಿಭಿನ್ನ ಸಂಸ್ಕೃತಿಗಳನ್ನು ಸಹಬಾಳ್ವೆಯಿಂದ ನಡೆಸಿಕೊಂಡು, ರಾಷ್ಟೀಯ ಭಾವೈಕ್ಯತೆಯನ್ನು ಮೂಡಿಸುವ ಹಾಗೂ ವಿವಿಧ ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ” ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನರಾದ ಡಾ. ಶಿವಾನಂದ ವಿರಕ್ತಮಠ ಮಾತನಾಡಿ, “ಮನುಷ್ಯ ಲೋಕ ಎಂಬುದು ಸಾವಿರ ಆಲೋಚನೆಗಳ ಸಾಗರ. ನಮ್ಮಲ್ಲಿ ಹಲವು ಸಂಸ್ಕೃತಿಯ ವೈವಿಧ್ಯಮಯಗಳನ್ನು ಕಾಣಬಹುದು. ಇಲ್ಲಿ ಒಂದು ಶ್ರೇಷ್ಠ ಇನ್ನೊಂದು ಕನಿಷ್ಟ ಎಂಬುವುದಿಲ್ಲ. ಸಂಸ್ಕೃತಿಗೆ ಅನುಗುಣವಾಗಿ ತಮ್ಮದೇ ಆದ ವಿಶಿಷ್ಟತೆಯಿಂದ ರೂಢಿ ಸಂಪ್ರದಾಯಗಳನ್ನು ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ತಾರತಮ್ಯವನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದು ಬಹಳ ಮುಖ್ಯ” ಎಂದರು.
ಇದನ್ನೂ ಓದಿ: ವಿಜಯನಗರ | ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಾಹ್ನವಿ ನೇಮಕ
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವಡಾ. ವಿಜಯ ಪೂಣಚ್ಚ ತಂಬಂಡ ಮಾತನಾಡಿ, “ಕನ್ನಡದ ಕಲೆ, ಸಂಸ್ಕೃತಿ ಹಾಗೂ ಸಂಗೀತವನ್ನು ಜಗತ್ತಿನಾದ್ಯಂತ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇನ್ನೂ ಕಾಸರಗೋಡು ಜಿಲ್ಲೆಯಲ್ಲಿ ಗೋವಿಂದ ಪೈ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕನ್ನಡ ಸರಳವಾಗಿ ಮಾತನಾಡುತ್ತಿದ್ದಾರೆ. ಹೀಗೆ ಕನ್ನಡವನ್ನು ಇನ್ನೂ ಹೆಚ್ಚು ಜನರು ಕಲಿತು ಇದರಲ್ಲಿನ ಸೂಕ್ಷ್ಮತೆಯ ವಿಚಾರಗಳನ್ನು ತಿಳಿಯಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗ ಮುಖ್ಯಸ್ಥರಾದ ವೀರೇಶ ಬಡಿಗೇರ, ಕನ್ನಡ ವಿಶ್ವವಿದ್ಯಾಲಯ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಅಧ್ಯಾಪಕರು, ಪ್ರೊ.ಎ. ಶ್ರೀಧರ, ಡಾ.ಡಿ. ಮೀನಾಕ್ಷಿ, ಶಕುಂತಲ ಚೌಡನಾಯ್ಕ, ಸಂಗೀತ ವಿಭಾಗದ ಅಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಎಲ್ಲಾ ನಿಕಾಯದ ವಿದ್ಯಾರ್ಥಿಗಳು. ಬಿ. ಸತೀಶ,ಜ್ಯೋತಿ ಎಂ. ಹಾಗೂ ಇತರರು ಇದ್ದರು.